ಚರ್ಚೆ ಮುಗಿದ ಬಳಿಕವಷ್ಟೇ ವಿಶ್ವಾಸಮತ ಯಾಚನೆ: ಸಿದ್ದರಾಮಯ್ಯ
Recommended Video
ಬೆಂಗಳೂರು, ಜುಲೈ 19: ವಿಪ್ ಜಾರಿ ವಿಚಾರದಲ್ಲಿ ಸದ್ಯಕ್ಕೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವ ಉದ್ದೇಶವಿಲ್ಲ ಎಂದು ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್
ಈ ವಿಚಾರವಾಗಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಜತೆ ಚರ್ಚೆ ನಡೆಸಿದ್ದು, ಅವರು ಅಡ್ವೊಕೇಟ್ ಜನರಲ್ ಬಳಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೂ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ ನಿರ್ಧಾರ ಮಾಡುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶಾಸಕಾಂಗ ಪಕ್ಷ ನಾಯಕನಾಗಿರುವ ತಮಗೆ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡುವ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಗೊಂದಲವಿದೆ. ಇದು ಸ್ಪಷ್ಟವಾಗುವವರೆಗೂ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಯನ್ನು ಮುಂದೂಡಬೇಕು ಎಂದು ಅವರು ಗುರುವಾರ ಹೇಳಿದ್ದರು.
ವಿಶ್ವಾಸಮತ ಯಾಚನೆ ಮಾಡಿಸಲು ಬಿಜೆಪಿಯವರು ಆತುರದಲ್ಲಿದ್ದಾರೆ. ಏಕೆಂದರೆ ಅವರು ಶಾಸಕರನ್ನು ವ್ಯಾಪಾರ ಮಾಡಿ ಮುಂಬೈಗೆ ಕಳುಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸದ್ಯ ಸುಪ್ರೀಂಕೋರ್ಟ್ಗೆ ಹೋಗುವುದಿಲ್ಲ
'ಶಾಸಕಾಂಗ ಪಕ್ಷದ ನಾಯಕನಾದ ನನಗೆ ವಿಪ್ ಜಾರಿಗೊಳಿಸುವ ಅವಕಾಶ ಇದೆಯೇ? ಇಲ್ಲವೇ? ಎಂಬ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೇಳಿದ್ದೇನೆ. ಅವರು ಅಡ್ವೊಕೇಟ್ ಜನರಲ್ ಅವರ ಜೊತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಇದು ಇತ್ಯರ್ಥವಾಗುವರೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಬಗ್ಗೆ ನಿರ್ಧರಿಸುವುದಿಲ್ಲ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಅಧಿಕಾರವಿಲ್ಲ
ಈಗಾಗಲೇ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ. ಹಾಗಾಗಿ ಈ ವಿಚಾರ ಸದನದ ಸ್ವತ್ತು. ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಇನ್ನೊಂದು ಕರಾಳ ಮುಖ
ಬಿಜೆಪಿಯ ಅಶ್ವಥ್ ನಾರಾಯಣ್, ಮಾಜಿ ಶಾಸಕ ಯೋಗೀಶ್ವರ್ ಹಾಗೂ ವಿಶ್ವನಾಥ್ ಅವರು 5 ಕೋಟಿ ರೂಪಾಯಿಯನ್ನು ನನ್ನ ಮನೆಗೆ ತಂದಿದ್ದರು, ಕೊನೆಗೆ ನಾನೇ ಅವರೆಲ್ಲರಿಗೂ ಬೈದು ಕಳುಹಿಸಿದೆ ಎಂದು ಸ್ವತಃ ಶ್ರೀನಿವಾಸ್ ಗೌಡ ಅವರೇ ಹೇಳಿದ್ದಾರೆ. ಇದರಿಂದ ಸದನದಲ್ಲೇ ಬಿಜೆಪಿಯ ಇನ್ನೊಂದು ಕರಾಳ ಮುಖದ ಅನಾವರಣವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಚರ್ಚೆಯ ಬಳಿಕವಷ್ಟೇ ವಿಶ್ವಾಸಮತ
ಕ್ರಿಯಾಲೋಪದ ಕುರಿತು ಮತ್ತು ವಿಶ್ವಾಸ ಮತ ಯಾಚನೆಗೆ ಸಂಬಂಧಿಸಿದಂತೆ ಚರ್ಚೆ ಪೂರ್ಣಗೊಂಡಿಲ್ಲ. ಚರ್ಚೆ ಇಂದೇ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಿಎಂ ಮಾತನಾಡಿದ್ದಾರೆ. ಇನ್ನೂ ಹಲವು ನಾಯಕರು ಇದರ ಬಗ್ಗೆ ಮಾತನಾಡುವುದು ಬಾಕಿ ಇದೆ. ಚರ್ಚೆಯ ಬಳಿಕವಷ್ಟೇ ವಿಶ್ವಾಸಮತಯಾಚನೆ ನಡೆಯಲಿದೆ. ಸೋಮವಾರವೂ ಈ ಚರ್ಚೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications