ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದ ಮೂವರು ಶಾಸಕರು
ಬೆಂಗಳೂರು, ಜುಲೈ 12: ರಾಜೀನಾಮೆ ನೀಡಿರುವ ಮೂವರು ಶಾಸಕರು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಮಯ ನೀಡಿದ್ದರು. ಆದರೆ, ವಿಚಾರಣೆಗೆ ಮೂವರೂ ಗೈರಾಗಿದ್ದಾರೆ.
ರಾಜೀನಾಮೆ ಪತ್ರ ಸಲ್ಲಿಸಿರುವವರ ಪೈಕಿ ಕ್ರಮಬದ್ಧವಾಗಿ ಸಲ್ಲಿಕೆ ಮಾಡಿರುವ ಮೂವರು ಶಾಸಕರಾದ ಆನಂದ್ ಸಿಂಗ್, ನಾರಾಯಣ ಗೌಡ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರಿಗೆ ಶುಕ್ರವಾರ ಸಂಜೆ 3-4 ಗಂಟೆ ಅವಧಿಯಲ್ಲಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ್ದರು.
ರಾಜೀನಾಮೆ ವಾಪಸ್ ಪಡೆದ ದಿನವೇ ರಾಮಲಿಂಗಾ ರೆಡ್ಡಿಗೆ ಮಂತ್ರಿಗಿರಿ: ಡಿಕೆಶಿ
ಶಾಸಕರು ರಾಜೀನಾಮೆ ನೀಡಿರಲು ಕಾರಣವೇನು? ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆಯೇ? ಮುಂತಾದ ಪ್ರಶ್ನೆಗಳನ್ನು ಅವರು ಶಾಸಕರಿಗೆ ಕೇಳಿ ಅವರಿಂದ ವಿವರಣೆ ಪಡೆದುಕೊಳ್ಳಬೇಕಿತ್ತು. ಆದರೆ, ಈ ಮೂವರೂ ಶಾಸಕರು ವಿಚಾರಣೆಗೆ ಹಾಜರಾಗಲಿಲ್ಲ.
ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಕುರಿತಾದ ದೂರಿನ ವಿಚಾರವಾಗಿ ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಾಹ್ನ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ರಾಜೀನಾಮೆ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳಲು ಅವಕಾಶ ಇಲ್ಲದೆ ಇರುವುದರಿಂದ ಶಾಸಕರು ವಿಚಾರಣೆಗೆ ಗೈರಾಗಿದ್ದಾರೆ ಎನ್ನಲಾಗಿದೆ.