ಬೆಂಗಳೂರಲ್ಲಿ ಮನೆ, ನಿವೇಶನ ಕೊಳ್ಳುವ ಕನಸು ನುಚ್ಚುನೂರು
ಬೆಂಗಳೂರು, ಏಪ್ರಿಲ್ 26 : ಬೆಂಗಳೂರಿನಲ್ಲಿ ಆಸ್ತಿ ಕೊಳ್ಳಬೇಕೆಂದು ಕನಸಿಟ್ಟುಕೊಂಡವರಿಗೆ ಭಾರೀ ಹೊಡೆತ ನೀಡುವಂಥ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ಸರಕಾರ ಮಾರ್ಗಸೂಚಿ ದರವನ್ನು ಸಿಕ್ಕಾಪಟ್ಟೆ ಏರಿಸಿರುವುದರಿಂದ ಆಸ್ತಿ ಕೊಳ್ಳುವವರಿಗೆ ನಿರಾಶೆಯಾಗಲಿದೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರೀ ಹೊಡೆತ ನೀಡಲಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ, ಶೇ.30ರಿಂದ ಶೇ.200ರವರೆಗೆ ಮಾರ್ಗಸೂಚಿ ದರಗಳು ಏರಿಕೆಯಾಗಲಿವೆ. ಬೆಲೆ ಏರಿಕೆಯಿಂದ ಪತರಗುಟ್ಟಿರುವ ಬೆಂಗಳೂರಿನ ಜನತೆಗೆ ಇದು ಸಹಿಸಿಕೊಳ್ಳಲಾಗದ ಹೊಡೆತವಾಗಿದೆ. ಆಸ್ತಿ ಮಾರುವವರಿಗೆ ಇದು ಸಹಾಯವಾಗಲಿದ್ದರೆ, ಕೊಳ್ಳುವವರಿಗೆ ಮರೀಚಿಕೆಯಾಗುವ ಸಾಧ್ಯತೆಯಿದೆ.
ಸರ್ಕಾರ ಮಾರ್ಗಸೂಚಿ ದರ ಏರಿಕೆ ಮಾಡಿ ಆದೇಶ ಹೊರಡಿಸಿರುವುದರಿಂದ ನಿವೇಶನ, ಮನೆ, ಕಟ್ಟಡ, ಜಮೀನು ಹಾಗೂ ಕೃಷಿ ಜಮೀನಿನ ಮಾರುಕಟ್ಟೆ ಮೌಲ್ಯ ಅಧಿಕಗೊಳ್ಳಲಿದೆ. ಇದರಿಂದ ರಿಯಾಲ್ಟಿ ಕ್ಷೇತ್ರದಲ್ಲಿ ತಲ್ಲಣ ಸಂಭವಿಸುವ ಶಂಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಮಾರ್ಗಸೂಚಿ ದರದಿಂದ ಸರ್ಕಾರದ ಬೊಕಸಕ್ಕೆ ಅಧಿಕ ಆದಾಯ ಬಂದರೂ ರಿಯಾಲ್ಟಿ ಕ್ಷೇತ್ರದ ಚೇತರಿಕೆ ಮಾತ್ರ ಕುಂಟುತ್ತಾ ಸಾಗುವುದರಲ್ಲಿ ಎರಡು ಮಾತಿಲ್ಲ. ಖರೀದಿದಾರರು ಖರೀದಿಸುವುದನ್ನು ಮುಂದಕ್ಕೆ ದೂಡುತ್ತಾರೆ. ಇದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ. [ಬೆಂಗಳೂರಿಗರೆ..ಒಂದೇ ಕ್ಲಿಕ್ ನಲ್ಲಿ ನಿಮ್ಮ ವಸತಿ ಸಮಸ್ಯೆ ಮುಕ್ತಿ]
ಎಷ್ಟು ಏರಿಕೆ? : ಸರ್ಕಾರ ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ರಾಜ್ಯದ ಸ್ಥಿರಾಸ್ತಿಯ ಮಾರ್ಗಸೂಚಿ ದರ ಏರಿಕೆ ಮಾಡಿದೆ. ನಿವೇಶನದ ಮಾರ್ಗಸೂಚಿ ದರ ಶೇ.30ರಿಂದ ಶೇ.200ರಷ್ಟು. ಜಮೀನಿನ ದರವನ್ನು ಶೇ.30ರಿಂದ ಶೇ.150ರಷ್ಟು ಏರಿಕೆಯಾಗಿದೆ.
ಇದರಿಂದ ಆಸ್ತಿಗಳ ನೋಂದಣಿ ದರ ಅಧಿಕಗೊಳ್ಳಲಿದೆ. ಮಾರ್ಗಸೂಚಿ ದರ ಏರಿಕೆ ಆಸ್ತಿಗಳ ಬೆಲೆ ಏರಿಕೆಗೆ ಕಾರಣವಾದರೂ ರಿಯಾಲ್ಟಿ ಕ್ಷೇತ್ರದಲ್ಲಿ ಚಲಾವಣೆಯಾಗುವ ಕಪ್ಪುಹಣ ನಿಯಂತ್ರಣಕ್ಕೆ ಅನಿವಾರ್ಯ ಎಂದು ರಿಯಾಲ್ಟಿ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ.
ಯಲಹಂಕದಲ್ಲಿ 1,800 ಚದರ ಅಡಿಯ ಮೂರು-ಬೆಡ್ರೂಂ ಫ್ಲಾಟ್ ದರ 35 ಲಕ್ಷ ರೂಪಾಯಿ ಇದ್ದು, ಮಾರುಕಟ್ಟೆಯಲ್ಲಿ 47 ಲಕ್ಷ ರೂಪಾಯಿ ಮೌಲ್ಯ ಇತ್ತು. ಮಾರ್ಗಸೂಚಿದ ದರ ಏರಿಕೆ ನಂತರ 35 ಲಕ್ಷ ರೂಪಾಯಿ ಇದ್ದ ಫ್ಲಾಟ್ ದರ 40 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆ ಮೌಲ್ಯ 50 ಲಕ್ಷ ರೂಪಾಯಿಯಾಗಲಿದೆ. [ಇಲ್ಲಿ ನಿವೇಶನ ಕೊಂಡರೆ ಹಣವೂ ಸುರಕ್ಷಿತ, ಲಾಭವೂ ನಿಶ್ಚಿತ]
ಮಾರ್ಗಸೂಚಿದರ ಪರಿಷ್ಕರಣೆ ನಂತರ ಆಸ್ತಿ ಮಾರಾಟ ಮಾಡುವವರು ಬೆಲೆ ಏರಿಕೆ ಮಾಡುವುದರಿಂದ ಮಾರುಕಟ್ಟೆ ಮೌಲ್ಯ 50 ಲಕ್ಷಕ್ಕೆ ಏರಿಕೆಯಾಗುತ್ತದೆ. ಖರೀದಿಸುವವರು ಫ್ಲಾಟ್ ಅನ್ನು 40 ಲಕ್ಷ ರೂಪಾಯಿಗೆ ನೋಂದಾಯಿಸಬೇಕಾಗುತ್ತದೆ. ಇದಕ್ಕಾಗಿ 5 ಲಕ್ಷ ರೂಪಾಯಿ ಅಧಿಕ ಹಣವನ್ನು ಖರೀದಿಸುವವರು ಪಾವತಿ ಮಾಡಬೇಕಾಗುತ್ತದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಹಣ ಹರಿದು ಬರುತ್ತದೆ. ಆದರೆ ನಿವೇಶನ, ಮನೆ, ಕಟ್ಟಡ ಹಾಗೂ ಜಮೀನು ಖರೀದಿಗೆ ಹಿಂದೇಟು ಹಾಕುತ್ತಾರೆ.
ಬೆಂಗಳೂರು ಹೊರ ವಲಯದಲ್ಲಿ ಎಕರೆ ಜಮೀನಿಗೆ 80 ಲಕ್ಷ ರೂಪಾಯಿ ದರ ಇದೆ. ಮಾರ್ಗಸೂಚಿ ದರ ಏರಿಕೆ ನಂತರ ಎಕರೆಗೆ 92 ರಿಂದ 95 ಲಕ್ಷ ರೂಪಾಯಿ ಏರಿಕೆಯಾಗಲಿದೆ. ಕೃಷಿ ಜಮೀನು 50 ಲಕ್ಷ ರೂಪಾಯಿಯಿಂದ 57 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ.
ಮಾರ್ಗ ಸೂಚಿದ ದರ ಏರಿಕೆ ನಂತರ ಬೆಂಗಳೂರಿನ ವಿವಿಧ ಬಡಾವಣೆಗಳ ದರ ಏರಿಕೆ ಇಂತಿದೆ.
ಬಡಾವಣೆ |
ಹಳೆ
ದರ (ಪ್ರತಿ ಚದರ ಅಡಿ) |
ಹೊಸ
ದರ (ಪ್ರತಿ ಚದರ ಅಡಿ) |
ಎಚ್ಎಸ್ಆರ್ ಲೇಔಟ್ | 13 ಸಾವಿರ ರೂ. | 15,696 ರೂ. |
ವಿಶ್ವೇಶ್ವರಯ್ಯ ಲೇಔಟ್ | 3,500 ರೂ. | 6,196 ರೂ. |
ಎಚ್ಆರ್ಬಿಆರ್ ಲೇಔಟ್ | 10 ಸಾವಿರ ರೂ. | 12,696 ರೂ. |
ಚಂದ್ರಾ ಲೇಔಟ್ | 13 ಸಾವಿರ ರೂ. | 15,696 ರೂ. |
ಪೂರ್ವ ಎನ್ಜಿಎಫ್ ಬಡಾವಣೆ | 12 ಸಾವಿರ ರೂ. | 14,696 ರೂ. |
ಅನ್ನಪೂರ್ಣೇಶ್ವರಿ ನಗರ | 14 ಸಾವಿರ ರೂ. | 16,696 ರೂ. |
ಜ್ಞಾನಭಾರತಿ 1ನೇ ಹಂತ | 7 ಸಾವಿರ ರೂ. | 9,696 ರೂ. |
ಜೆಪಿ ನಗರ | 20 ಸಾವಿರ ರೂ. | 22,696 ರೂ. |
ಕೆಂಗೇರಿ | 6 ಸಾವಿರ ರೂ. | 8,696 ರೂ. |
ಐಟಿಪಿಎಲ್ | 15 ಸಾವಿರ ರೂ. | 17,696 ರೂ. |
ಸರಕಾರ ಏನು ಹೇಳತ್ತೆ? : ಸರ್ಕಾರ 2014ರ ನವೆಂಬರ್ನಲ್ಲಿ ಮಾರ್ಗಸೂಚಿ ದರವನ್ನು ಶೇ.20ರಿಂದ 200ರಷ್ಟು ಏರಿಕೆ ಮಾಡಿತ್ತು. ಮತ್ತೆ 2016ರಲ್ಲಿ ಈ ವರ್ಷ ಶೇ.10ರಿಂದ 30ರಷ್ಟು ಏರಿಕೆ ಮಾಡಿತ್ತು. ಎರಡು ವರ್ಷಗಳಲ್ಲಿ ಮಾರ್ಗಸೂಚಿ ದರ ಏರಿಕೆಯಿಂದ ಕಂದಾಯ ಇಲಾಖೆ ತನ್ನ ವಹಿವಾಟನ್ನು 8,200 ಕೋಟಿ ರೂಪಾಯಿಗೆ ಹೆಚ್ಚಿಸಿಕೊಳ್ಳುವ ಗುರಿ ಹೊಂದಿತ್ತು. ಈಗ ಆ ಗುರಿಯನ್ನು ತಲುಪಿದೆ.
ಆಸ್ತಿಗಳ ಮಾಲೀಕರಿಗೆ ಅನುಕೂಲ ಮಾಡಿಕೊಡು ನಿಟ್ಟಿನಲ್ಲಿ ಈ ವರ್ಷ ಅಧಿಕವಾಗಿ ಅಂದರೆ ಶೇ. 30ರಿಂದ 200ರಷ್ಟು ನಿವೇಶನ ದರವನ್ನು ಹಾಗೂ ಜಮೀನು ದರವನ್ನು ಶೇ.30ರಿಂದ 150ರಷ್ಟು ಏರಿಕೆ ಮಾಡಿದೆ. ಮಾರ್ಗಸೂಚಿ ಏರಿಕೆ ಆಸ್ತಿ ಮಾಲೀಕರಿಗೆ ಹೇಗೆ ಅನುಕೂಲವೋ ಅದೇ ರೀತಿ ಖರೀದಿದಾರರಿಗೂ ಸಹಾಯವಾಗುತ್ತದೆ. ಬ್ಯಾಂಕುಗಳು ಮಾರ್ಗ ಸೂಚಿ ದರದ ಮೇಲೆ ಸಾಲ ನೀಡುತ್ತವೆ. ಮಾರ್ಗ ಸೂಚಿ ದರ ಅಧಿಕ ಇದ್ದರೆ ಅಧಿಕ ಮೊತ್ತದ ಸಾಲ ದೊರೆಯುತ್ತದೆ ಎಂಬುದು ಸರ್ಕಾರದ ಹೇಳಿಕೆ.