ಚಾಲಕರಿಗೆ ಸರ್ಕಾರದ ಸಹಾಯ ಧನ: ಸಚಿವರಿಗೆ ಎಎಪಿ ಮನವಿ
ಬೆಂಗಳೂರು, ಜೂನ್ 10: ಬ್ಯಾಡ್ಜ್ ಹೊಂದಿರುವ ಪ್ರತಿಯೊಬ್ಬ ವಾಣಿಜ್ಯ ವಾಹನ ಚಾಲಕರಿಗೆ ಸರ್ಕಾರದ ಸಹಾಯ ಧನ ಸಿಗುವಂತಾಗಲಿ. ಗೊಂದಲದ ಗೂಡಾಗಿರುವ ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆಯನ್ನು ಸರಳಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ಆಗ್ರಹಿಸಿದೆ.
Recommended Video
ಕೊರೊನಾ ಸಂಕಷ್ಟದ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದ ಬಡ ಚಾಲಕ ವರ್ಗಗಳಿಗೆ ದೆಹಲಿ ಸರ್ಕಾರದ ಮಾದರಿಯಲ್ಲಿ ಸಹಾಯ ಧನ ನೀಡುವಂತೆ ಆಮ್ ಆದ್ಮಿ ಪಕ್ಷ ಹೋರಾಟ ನಡೆಸಿತ್ತು. ಇದರ ಫಲವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ₹5 ಸಾವಿರ ಸಹಾಯ ಧನ ಯೋಜನೆ ಘೋಷಿಸಿದ್ದರು. ಆದರೆ ಈ ಸಹಾಯಧನ ಪಡೆಯಲು ಸಾಕಷ್ಟು ಅಡಚಣೆಗಳು ಚಾಲಕರ ಎದುರಿಗೆ ಇವೆ ಎಂದು ಎಎಪಿ ಪಕ್ಷ ಆರೋಪ ಮಾಡಿದೆ.
ಅರ್ಜಿ ಸಲ್ಲಿಸಲು ಆನ್ಲೈನ್ ಸೇವಾ ಸಿಂಧು ವೆಬ್ಸೈಟಿನಲ್ಲಿ ಸಾಕಷ್ಟು ತಾಂತ್ರಿಕ ತೊಂದರೆಗಳಿದ್ದು ಇದರಿಂದಾಗಿ ನೈಜ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯದೆ ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಮೊದಲನೆಯದಾಗಿ 60 ವರ್ಷ ಮೇಲ್ಪಟ್ಟ ಚಾಲಕರುಗಳಿಗೆ ಸೇವಾ ಸಿಂಧು ವೆಬ್ಸೈಟಿನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ಇರುವುದು. ಇದರಿಂದಾಗಿ ಸಾವಿರಾರು ಹಿರಿಯ ಚಾಲಕ ವರ್ಗಕ್ಕೆ ಸಹಾಯಧನ ದೊರಕುತ್ತಿಲ್ಲ. ಎಂದು ಅಸಮಾಧಾನ ಹೊರ ಹಾಕಿದೆ.

ಇದಲ್ಲದೆ ಸರ್ಕಾರವು ವಾಹನಗಳ ಫಿಟ್ನೆಸ್ ಪ್ರಮಾಣ ಪತ್ರಗಳನ್ನು ಕೇಳುತ್ತಿರುವುದರಿಂದ ಶೇ. 90 ರಷ್ಟು ನೈಜ ಚಾಲಕ ವರ್ಗಕ್ಕೆ ಇದರಿಂದಾಗಿ ಸಹಾಯಧನ ದೊರೆಯುವುದಿಲ್ಲ. ಒಂದೇ ವಾಹನವನ್ನು ಎರಡು ಅಥವಾ ಮೂರು ಚಾಲಕರುಗಳು ಪಾಳಿಯಲ್ಲಿ ಓಡಿಸುತ್ತಾರೆ. ಈಗ ಸರ್ಕಾರವು ನೀಡುತ್ತಿರುವ ಸಹಾಯಧನ ಬ್ಯಾಡ್ಜ್ ಹೊಂದಿರುವ ವಾಹನ ಮಾಲೀಕರುಗಳಿಗೆ ಅಂದರೆ ಸ್ವಂತ ವಾಹನ ಹೊಂದಿರುವ ಚಾಲಕರಿಗೆ ಮಾತ್ರ ದೊರಕುತ್ತಿದೆ ಎಂದಿದೆ.
ಆಮ್ ಆದ್ಮಿ ಪಕ್ಷ ಕೆಲವು ಬೇಡಿಕೆಗಳನ್ನು ಸರ್ಕಾರ ಮುಂದಿಟ್ಟಿದೆ
* ಸಾರಿಗೆ ಇಲಾಖೆಯು ಈ ಕೂಡಲೇ 60 ವರ್ಷ ಮೇಲ್ಪಟ್ಟ ಚಾಲಕರನ್ನು ಸೇವಾ ಸಿಂಧು ವೆಬ್ಸೈಟ್ ಮೂಲಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು.
* ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯ ಎನ್ನುವ ನಿಯಮವನ್ನು ಸಂಪೂರ್ಣ ತೆಗೆದು ಹಾಕಿ ಚಾಲನಾ ಪರವಾನಗಿ, ಬ್ಯಾಡ್ಜ್ ಹೊಂದಿರುವ ಎಲ್ಲಾ ವಾಣಿಜ್ಯ ವಾಹನಗಳನ್ನು ಚಲಾಯಿಸುವ ಚಾಲಕರುಗಳಿಗೆ ಸಹಾಯಧನ ದೊರೆಯಬೇಕು.

* ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನ ಎಂದು ನಿಗದಿಗೊಳಿಸಲಾಗಿದೆ. ಇದಕ್ಕೆ ವಿನಾಯಿತಿ ನೀಡಿ ಕನಿಷ್ಠ ಮೂರು ವಾರಗಳ ಕಾಲ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಬೇಕು.
ಪ್ರತಿಯೊಂದು ಸಾರಿಗೆ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು.
* ಈ ಮೇಲ್ಕಂಡ ಎಲ್ಲ ಬೇಡಿಕೆಗಳನ್ನು ಈಡೇರಿಸಿದರೆ ಸರ್ಕಾರದ ಸಹಾಯಧನ ಯೊಜನೆ ಸೂಕ್ತವಾದವರಿಗೆ ತಲುಪುತ್ತದೆ ಎನ್ನುವುದು ಆಮ್ ಆದ್ಮಿ ಪಕ್ಷದ ಕಳಕಳಿ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ತಿಳಿಸಿದ್ದಾರೆ.












Click it and Unblock the Notifications