ನ.2 ನಂದಿಬೆಟ್ಟದಲ್ಲಿ ಕಾಂಗ್ರೆಸ್ ಚಿಂತನ-ಮಂಥನ
ಬೆಂಗಳೂರು, ಅಕ್ಟೋಬರ್. 29: ಆಳ್ವಿಕೆ ಕಾಲಾವಧಿ ಮುಗಿಯವ ಸಮಯ ಹತ್ತಿರವಾಗುತ್ತಿದ್ದಂತೆ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸಲು, ಕಾಂಗ್ರೆಸ್ ಸದಸ್ಯರಲ್ಲಿ ಭಿನ್ನಮತ ದೂರವಾಗಿಸಿ ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲು, ನವೆಂಬರ್ 02ರಂದು ನಂದಿ ಬೆಟ್ಟದಲ್ಲಿ ಮಹತ್ವದ ಸಭೆ ಕರೆದಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಮುನಿಸಿಕೊಂಡು, ಬಂಡೆದ್ದು, ಆಕ್ರೋಶಗೊಂಡ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮುಖಂಡರು ಲೆಕ್ಕಹಾಕಿರುವಂತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.
ಸಚಿವ ರೋಷನ್ ಬೇಗ್ ಅವರು ಎಚ್.ಸಿ. ಮಹದೇವಪ್ಪ ಅವರನ್ನು ಭಾವಿ ಮುಖ್ಯಮಂತ್ರಿ ಎಂದಿದ್ದಾರೆ. ಶ್ರೀನಿವಾಸ್ ಪ್ರಸಾದ್, ಜಾಫರ್ ಶರೀಫ್, ಜನಾರ್ದನ ಪೂಜಾರಿ ಇನ್ನು ಅನೇಕರು ಸಿದ್ದರಾಮಯ್ಯ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಾವಧಿಯು ಮುಗಿಯುತ್ತಾ ಬರುತ್ತಿರುವ ಸಂದರ್ಭದಲ್ಲಿ ಈ ರೀತಿ ಮತಿಯರು- ಭಿನ್ನಮತಿಯರ ನಡುವೆಯೇ ಕಲಹ ಏರ್ಪಟ್ಟರೆ ಬಿಜೆಪಿ, ಜಡಿಎಸ್ ಗೆ ಲಾಭವಾಗುತ್ತದೆ ಎಂದು ಚಿಂತಿಸಿರುವ ಕಾಂಗ್ರೆಸ್ ನ.2 ರಂದು ಮಹತ್ವದ ಸಭೆ ಕರೆದಿದೆ.
ಈ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರೇ ಖುದ್ದಾಗಿ ಹಿರಿಯ ಕಾಂಗ್ರೆಸಿಗರ ಸಭೆಯನ್ನು ನಂದಿಬೆಟ್ಟದಲ್ಲಿ ಕರೆದಿದ್ದು, ಪಕ್ಷದ ಆಂತರಿಕ ಸಮಸ್ಯೆಗಳನ್ನು ನೀಗಿಸುವ, ಬಾಹ್ಯ ರಾಜಕಾರಣದಲ್ಲಿ ಅಭಿವೃದ್ಧಿ ಸಾಧಿಸಲು ಜತೆಗೆ ಹಿರಿಯ ನಾಯಕರ ಮನಸ್ಸನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದಾರೆ.












Click it and Unblock the Notifications