ಲಾಕ್ ಡೌನ್ ಪರಿಹಾರವಲ್ಲ ಎಂದಿದ್ದ ಬಿಎಸ್ವೈ ಈಗ ಕಂಪ್ಲೀಟ್ ಯೂಟರ್ನ್!
ಬೆಂಗಳೂರು, ಜುಲೈ 11: ಕೋವಿಡ್ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಸರಕಾರ ದಿನದಿಂದ ದಿನಕ್ಕೆ ವಿಫಲವಾಗುತ್ತಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇದಕ್ಕೆ ಕಾರಣ ಇಲ್ಲದಿಲ್ಲ.
ಬೆಡ್ ಸಮಸ್ಯೆ, ಅಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದೇ ಇರುವುದು, ಖಾಸಗಿ ಆಸ್ಪತ್ರೆಗಳ ಅಸಹಕಾರ.. ಹೀಗೆ ಹಲವು ವಿಚಾರಗಳು ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಮಂತ್ರಿಗಳ ನಡುವೆ ಸಮನ್ವಯದ ಕೊರತೆಯೂ ಇನ್ನೊಂದೆಡೆ.
ಕೆಲವೇ ಕೆಲವು ದಿನಗಳ ಹಿಂದೆ, ಲಾಕ್ ಡೌನ್ ಯಾವ ಕಾರಣಕ್ಕೂ ಮತ್ತೆ ಜಾರಿಗೆ ತರುವುದಿಲ್ಲ. ಆ ವಿಚಾರ ಚರ್ಚೆಯಲ್ಲೇ ಇಲ್ಲ, ಇದು ಕೊರೊನಾ ನಿಯಂತ್ರಣಕ್ಕೆ ಪರಿಹಾರವಲ್ಲ ಎಂದು ಬಿಎಸ್ವೈ ಸೇರಿದಂತೆ, ಆಯಕಟ್ಟಿನ ಎಲ್ಲಾ ಮಂತ್ರಿಗಳು ಹೇಳಿದ್ದರು.
ಆದರೆ, ಒಂದು ಮಟ್ಟಿಗೆ ಅಚ್ಚರಿ ಎನ್ನುವಂತೆ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಲಾಕ್ ಡೌನ್ ಅನ್ನು (ಜುಲೈ 14ರ ರಾತ್ರಿ 8 ಗಂಟೆಯಿಂದ, ಜುಲೈ 22ರ ಬೆಳಗ್ಗೆ 5ರ ವರೆಗೆ) ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿ , ತಮ್ಮ ನಿರ್ಧಾರದಿಂದ ಯೂಟರ್ನ್ ಹೊಡೆದಿದ್ದಾರೆ.

ನಾಲ್ಕು ಭಾನುವಾರ ಈಗಾಗಲೇ ಕರ್ಫ್ಯೂ
ನಾಲ್ಕು ಭಾನುವಾರ ಈಗಾಗಲೇ ಕರ್ಫ್ಯೂ ಎಂದು ಘೋಷಿಸಲಾಗಿತ್ತು. ಶನಿವಾರವನ್ನೂ ಲಾಕ್ ಡೌನ್ ಮಾಡುವ ವಿಚಾರ ಚರ್ಚೆಯಲ್ಲಿತ್ತು. ಆದರೆ, ಆ ರೀತಿಯ ಯಾವ ಸುದ್ದಿಯನ್ನು ನಂಬಬೇಡಿ. ಲಾಕ್ ಡೌನ್ ಮತ್ತೆ ಜಾರಿಗೆ ತರುವುದಿಲ್ಲ. ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಸಿಎಂ ಬಿಎಸ್ವೈ ಜನರಲ್ಲಿ ಮನವಿ ಮಾಡಿದ್ದರು.

ಬೆಂಗಳೂರಿನ ಅಷ್ಟದಿಕ್ಕಿಗೆ ದಿಕ್ಪಾಲರನ್ನಾಗಿ ಎಂಟು ಸಚಿವರು
ಕೊರೊನಾ ನಿರ್ವಹಣೆಗೆ ಬೆಂಗಳೂರಿನ ಅಷ್ಟದಿಕ್ಕಿಗೆ ದಿಕ್ಪಾಲರನ್ನಾಗಿ ಎಂಟು ಸಚಿವರು ಮತ್ತು ಎಂಟು ಐಎಎಸ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿತ್ತು. ಲಾಕ್ ಡೌನ್ ಬಗ್ಗೆ ಸುಳಿವೇ ಇಲ್ಲದಿದ್ದಂತಹ ಸಂದರ್ಭದಲ್ಲಿ ಶನಿವಾರ (ಜು 11) ಮಧ್ಯಾಹ್ನದಿಂದಲೇ ಲಾಕ್ ಡೌನ್ ಬಹುತೇಕ ಖಚಿತ ಎನ್ನುವ ಮಾಹಿತಿ ಬರಲಾರಂಭಿಸಿತು.

ಹತ್ತು ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ
ಜುಲೈ ಮೂರಕ್ಕೆ 6,297 ಇದ್ದ ಸಕ್ರಿಯ ಪ್ರಕರಣ ಜುಲೈ 11ಕ್ಕೆ 12,793ಕ್ಕೆ ಏರಿದೆ. ಅಂದರೆ, ಕಳೆದ ಹತ್ತು ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ. ಇದರ ಜೊತೆಗೆ, ಈ ಅವಧಿಯಲ್ಲಿ ಬಿಡುಗಡೆಯಾದವರ ಸಂಖ್ಯೆ 770ರಿಂದ 3,839ಕ್ಕೆ ಏರಿದೆ. ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದರೂ, ಸರಕಾರ ಏಕಾಏಕಿ ಎನ್ನುವಂತ ಲಾಕ್ ಡೌನ್ ನಿರ್ಧಾರಕ್ಕೆ ಬಂದಿದೆ.

ಜಯದೇವ ಆಸ್ಪತೆಯ ನಿರ್ದೇಶಕರಾದ ಡಾ. ಮಂಜುನಾಥ್ ಸಲಹೆ
"ಸೋಂಕಿತರ ವರದಿ ಕಂಡು ಸಿಎಂ ಯಡಿಯೂರಪ್ಪ ಲಾಕ್ ಡೌನ್ ತೀರ್ಮಾನಕ್ಕೆ ಬಂದಿದ್ದಾರೆ. ಬೆಂಗಳೂರು ಲಾಕ್ ಡೌನ್ ಮಾಡುವಂತೆ, ಜಯದೇವ ಆಸ್ಪತೆಯ ನಿರ್ದೇಶಕರಾದ ಡಾ. ಮಂಜುನಾಥ್ ಸಲಹೆಯನ್ನು ಕೊಟ್ಟಿದ್ದರು" ಎಂದು ಗೃಹ ಸಚಿವರು ಹೇಳಿಕೆಯನ್ನು ನೀಡಿದ್ದಾರೆ. ಆರ್ಥಿಕ ಚಟುವಟಿಕೆ ಮುಂದುವರಿಯಬೇಕು ಎಂದು ಪ್ರಧಾನಿ ಮೋದಿ ಕೂಡಾ ಬಯಸುತ್ತಿದ್ದ ಈ ಸಂದರ್ಭದಲ್ಲಿ ದೇಶದ ಸಿಲಿಕಾನ್ ಸಿಟಿಯನ್ನು ಒಂದು ವಾರ ಬಂದ್ ಮಾಡುವ ಮೂಲಕ, ಬಿಎಸ್ವೈ ಕಂಪ್ಲೀಟ್ ಯೂಟರ್ನ್ ಹೊಡೆದಿದ್ದಾರೆ.












Click it and Unblock the Notifications