ಶಾಸಕರು ಪಕ್ಷ ತೊರೆದಾಗ ಒಬ್ಬನೇ ಹೋರಾಡಿದ್ದೇನೆ: ಟಾಂಗ್ ಕೊಟ್ರಾ ಡಿಕೆಶಿ?
ಬೆಂಗಳೂರು, ಮೇ 15: ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಬಹುಮತವೇನೋ ಬಂದಿದೆ. ಆದರೆ ಈ ಮೊದಲು ನಿರೀಕ್ಷೆ ಮಾಡಿದಂತೆ ಸಿಎಂ ಸ್ಥಾನ ಇನ್ನು ಅಂತಿಮಗೊಂಡು ಸರ್ಕಾರ ರಚನೆಯಾಗಿಲ್ಲ. ಸಿಎಂ ಗಾದಿಗಾಗಿ ತೀವ್ರ ಪೈಪೋಟಿ ಮಧ್ಯೆ ಡಿಕೆ ಶಿವಕುಮಾರ್ ನಾನು ಏಕಾಂಗಿಯಾಗಿ ಹೋರಾಡಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಹೌದು, ಸರ್ಕಾರ ರಚನೆಯಾಗುವ ಮುನ್ನ ಕಾಂಗ್ರೆಸ್ ಪಾಳದಲ್ಲಿ ಸಿಎಂ ಯಾರಾಗಬೇಕು ಎಂಬುದು ಫೈನಲ್ ಆಗಬೇಕಿದೆ. ಆದರೆ ಸಿಎಂ ಸ್ಥಾನದ ರೇಸಿನಲ್ಲಿರುವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ತಾವು ಹಿಡಿದಿರುವ ಬಿಗಿಪಟ್ಟನ್ನು ಸಡಿಲಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸಿಎಂ ವಿಚಾರ ದೆಹಲಿ ಅಂಗಳ ತಲುಪಿದೆ.

ಇತ್ತ ದೆಹಲಿಗೆ ತೆರಳಬೇಕಿರುವ ಡಿಕೆ ಶಿವಕುಮಾರ್ ಸದಾಶಿವನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಮೈತ್ರಿ ಸರ್ಕಾರದ ವೇಳೆ ಸುಮಾರು 17 ಮಂದಿ ಶಾಸಕರು ಪಕ್ಷ ತೊರೆದಿದ್ದರು. ಈ ವೇಳೆ ನಾನು ಎದೆಗುಂದದೆ, ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ ಎಂದಿದ್ದಾರೆ. ಈ ಮೂಲಕ ತಾವೇ ಸಿಎಂ ಸ್ಥಾನಕ್ಕೆ ಅರ್ಹ ಎಂಬಂತೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ನಾನು ಎದೆಗುಂದಲಿಲ್ಲ: ಡಿಕೆಶಿ
ಪಕ್ಷತೊರೆದು ಮೈತ್ರಿ ಸರ್ಕಾರ ಉರುಳಿದಾಗ ನಾನು ಎದೆಗುಂದಲಿಲ್ಲ. ಅಂದು ಈಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ನನ್ನನ್ನು ಬೆಂಬಲಿಸಿದರು. ಅಂದು ಅನೇಕ ಸವಾಲುಗಳನ್ನು ಎದುರಿಸಿ ಈವರೆಗೆ ಹೋರಾಡಿಕೊಂಡು ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ 135 ಸ್ಥಾನದ ಸಹಿತ ರಾಜ್ಯದ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದೆ. ಆದರೆ ಸಿಎಂ ಯಾರೆಂಬುದೇ ಇನ್ನೂ ಗುಟ್ಟಾಗಿದೆ. ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಉಭಯ ನಾಯಕರಲ್ಲಿ ಯಾರಿಗೆ ಮಣೆ ಹಾಕಲಿದೆ ಎಂದು ಇಂದು ರಾತ್ರಿ ಗೊತ್ತಾಗಲಿದೆ.
ಈ ಮಧ್ಯೆ ಹುಟ್ಟುಹಬ್ಬ ಪ್ರಯುಕ್ತ ಕೆಲವು ಖಾಸಗಿ ಕಾರ್ಯಕ್ರಮ ಮುಗಿಸಿ ಇಂದು ರಾತ್ರಿಯೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ನೆನ್ನೆ ಹೋಗಿ ಬಂದಿದ್ದ ತುಮಕೂರಿನ ನೊಣವನಕೆರೆ ಅಜ್ಜಯ್ಯ ದೇವಸ್ಥಾನಕ್ಕೆ ಇಂದು ಮತ್ತೆ ತೆರಳಿದ್ದಾರೆ. ಸಿದ್ದರಾಮಯ್ಯ ಇಂದು ಮಧ್ಯಾಹ್ನವೇ ದೆಹಲಿ ತಲುಪಿದ್ದಾರೆ.












Click it and Unblock the Notifications