ಗುರುವಾರದ ಸಚಿವ ಸಂಪುಟ ಸಭೆ ನಿರ್ಣಯಗಳು
ಬೆಂಗಳೂರು, ಅ.18 : ಹೊಸ ಮಾಹಿತಿ ತಂತ್ರಜ್ಞಾನ ನೀತಿ ಜಾರಿ, ರಾಜ್ಯದ ಕೆರೆಗಳ ಅಭಿವೃದ್ಧಿಗಾಗಿ ಕೆರೆ ಪ್ರಾಧಿಕಾರ ರಚನೆ, ಜಲ್ಲಿ ಕ್ರಷರ್ ಗಳ ಮೇಲಿನ ನಿರ್ಬಂಧ ತೆರವು ಮುಂತಾದ ನಿರ್ಣಯಗಳನ್ನು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಗುರುವಾರ ಸಂಜೆ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಂಪುಟ ಸಭೆಯ ವಿವರಗಳನ್ನು ನೀಡಿದರು. ಅರಣ್ಯದ 100 ಮೀಟರ್ ವ್ಯಾಪ್ತಿಯಲ್ಲಿ ಮುಚ್ಚಲ್ಪಟ್ಟಿದ್ದ ಜಲ್ಲಿ ಕ್ರಷರ್ ಗಳ ಮೇಲಿನ ನಿರ್ಬಂಧ ತೆರವುಗೊಳಿಸಲು ಸಚಿವ ಸಂಪುಟ ಸಭೆ ಅನುಮತಿ ನಿಡಿದೆ ಎಂದರು.
ಐಟಿ ಉದ್ಯಮವನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶಿದಿಂದ ಹೊಸ ಮಾಹಿತಿ ತಂತ್ರಜ್ಞಾನ ನೀತಿ ಜಾರಿ, ಜವಳಿ ನೀತಿ ಪರಿಷ್ಕರಣೆ, ರಾಜ್ಯದಲ್ಲಿನ ಕೆರೆಗಳ ಸಂರಕ್ಷಣೆಗಾಗಿ ಹೆಚ್ಚಿನ ಅಧಿಕಾರವನ್ನು ಒಳಗೊಂಡ ಕೆರೆ ಪ್ರಾಧಿಕಾರ ರಚನೆ ಮುಂತಾದ ನಿರ್ಣಯಗಳಿಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.
ಮೆಕ್ಕೆಜೋಳ ಮತ್ತು ಭತ್ತಕ್ಕೆ ಬೆಂಬಲ ಬೆಲೆ ನಿಗದಿಗೊಳಿಸುವುದು, ಸರ್ಕಾರದ ಡಿ ಗ್ರೂಪಿನ ನೌಕರರ ಕನಿಷ್ಟ ವಿದ್ಯಾರ್ಹತೆ ಎಸ್ಎಸ್ಎಲ್ಸಿಗೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ವಿದ್ಯಾರ್ಹತೆ ಪಿಯುಸಿಗೆ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಂಪುಟ ಸಭೆಯ ನಿರ್ಧಾರಗಳು

ಮಾಹಿತಿ ತಂತ್ರಜ್ಞಾನ ನೀತಿ
ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲು ಮಾಹಿತಿ ತಂತ್ರಜ್ಞಾನ ನೀತಿಯನ್ನು ಜಾರಿಗೊಳಿಸಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈ ಹೊಸ ನೀತಿಯ ಮೂಲಕ ಬರುವ ಏಳು ವರ್ಷಗಳಲ್ಲಿ ಬೆಂಗಳೂರನ್ನು ಐಟಿ ಕ್ಷೇತ್ರದಲ್ಲಿ ಪ್ರಥಮ ಸ್ಥಾನಕ್ಕೆ ಏರಿಸುವ ಗುರಿ ಹೊಂದಲಾಗಿದೆ.

ಸಿ.ಬಿ.ಐ.ಗೆ ಅಕ್ರಮ ಗಣಿಗಾರಿಕೆ
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರು ಸಲ್ಲಿಸಿದ ಎರಡು ವರದಿಗಳು ಹಾಗೂ ಅಂದಿನ ಅಪರ ಮುಖ್ಯ ಕಾರ್ಯದರ್ಶಿಯವರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಸಚಿವ ಸಂಪುಟ ಅಕ್ರಮ ಕಬ್ಬಿಣ ಅದಿರಿನ ರಫ್ತು ತನಿಖೆಯನ್ನು ಸಿಬಿಐಗೆ ವಹಿಸಲು ಸಮ್ಮತಿ ನೀಡಿದೆ.
ರಾಜ್ಯದ ಬಂದರುಗಳೂ ಸೇರಿದಂತೆ ರಾಷ್ಟ್ರದ 7 ಬಂದರುಗಳಿಂದ ಅಕ್ರಮವಾಗಿ ಅದಿರು ರಫ್ತು ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ಇಡೀ ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಜಾರಿ ನಿರ್ದೇಶನಾಲಯಕ್ಕೆ ಪ್ರಕರಣಗಳನ್ನು ವಹಿಸಲು ಸಂಪುಟ ತೀರ್ಮಾನಿಸಿದೆ.

ಕ್ರಷರ್ ಗಳ ಸದ್ದು
ಸುರಕ್ಷಿತ ವಲಯ ಗುರುತಿಸಬೇಕು ಎಂಬ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಅರಣ್ಯದ 100 ಮೀಟರ್ ವ್ಯಾಪ್ತಿಯಲ್ಲಿದ್ದ ಸುಮಾರು 300 ಜಲ್ಲಿ ಕ್ರಷರ್ ಗಳು ಮುಚ್ಚಲ್ಪಟ್ಟಿದ್ದವು. ಇದರಿಂದ ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಉಂಟಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 42(2)ರ ಪ್ರಕಾರ ಭೂಮಿ ಮಂಜೂರಾತಿಗೆ ಸುರಕ್ಷಿತ ವಲಯ ಅನ್ವಯವಾಗುತ್ತದೆಯೇ ಹೊರತು ಜಲ್ಲಿ ಕ್ರಷರ್ ಗಳಿಗೆ ಅಲ್ಲ ಎಂದು, ಕ್ರಷರ್ ಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.

ಜವಳಿ ನೀತಿ ಪರಿಷ್ಕರಣೆ
ಪ್ರಸಕ್ತ ಜಾರಿಯಲ್ಲಿದ್ದ ಜವಳಿ ನೀತಿಯನ್ನು ಪರಿಷ್ಕರಿಸಲು ಸಭೆಯಲ್ಲಿ ಅನುಮೋದನೆ ದೊರೆತಿದೆ. ಐದು ವರ್ಷಗಳಲ್ಲಿ 1,000 ಕೋಟಿ ರೂಪಾಯಿ ವೆಚ್ಚ ಮಾಡಿ, ಹತ್ತಿ ನೂಲಿನ ಗಿರಣಿಗಳನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ.

ಕೆರೆ ಅಭಿವೃದ್ಧಿ ಪ್ರಾಧಿಕಾರ
ಕರ್ನಾಟಕದಲ್ಲಿನ ಸುಮಾರು 28,000 ಕೆರೆಗಳ ಒತ್ತುವರಿ, ಒಟ್ಟಾರೆ ನಿರ್ವಹಣೆ ಸೇರಿದಂತೆ ಒತ್ತುವರಿ ತೆರವುಗೊಳಿಸುವ ಅಧಿಕಾರವನ್ನೂ ಒಳಗೊಂಡಂತೆ ಕೆರೆ ಪ್ರಾಧಿಕಾರ ರಚಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಬಲ ಬೆಲೆ
ಮೆಕ್ಕೆಜೋಳ ಮತ್ತು ಭತ್ತದ ಬೆಳೆಗಳ ಉತ್ಪಾದನೆಯು ಸಹಜವಾಗಿ ಹೆಚ್ಚಳವಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಬಲ ಬೆಲೆ ನಿಗದಿಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮೆಕ್ಕೆಜೋಳಕ್ಕೆ ಕ್ವಿಂಟಾಲ್ಗೆ 1,310 ರೂಪಾಯಿ, ಎ ಗ್ರೇಡ್ ಭತ್ತ ಕ್ವಿಂಟಾಲ್ಗೆ 1,345 ರೂಪಾಯಿ ಮತ್ತು ಬಿ ಗ್ರೇಡ್ ಭತ್ತ ಕ್ವಿಂಟಾಲ್ಗೆ 1,310 ರೂ.ಗಳ ಬೆಂಬಲ ಬೆಲೆ ನಿಗದಿಗೊಳಿಸಲಾಗಿದೆ.

ಬೆಂಗಳೂರಿನ ಏಳು ರಸ್ತೆ ಅಭಿವೃದ್ಧಿ
78.83 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಏಳು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಒಪ್ಪಿಗೆ ನೀಡಲಾಗಿದೆ. ತಾಂತ್ರಿಕ ಪರಿಣತಿ ಹೊಂದಿರುವ ಶೂರ್ ಕಂಪನಿ ಕಾಮಗಾರಿ ನಡೆಸಲಿದೆ. ಸೇಂಟ್ ಮಾರ್ಕ್ಸ್ ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ವಿಠಲ್ ಮಲ್ಯ ರಸ್ತೆ, ಚರ್ಚ್ಸ್ಟ್ರೀಟ್ ರಸ್ತೆ, ಕಮರ್ಷಿಯಲ್ಸ್ಟ್ರೀಟ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಇತರ ಪ್ರಮುಖ ನಿರ್ಣಯಗಳು
* ಬೀದರ್ ಮತ್ತು ಬೆಳಗಾವಿ ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿ.ಟಿ.ಸ್ಕ್ಯಾನ್ ಖರೀದಿಗಾಗಿ 7.8 ಕೋಟಿ ರೂಪಾಯಿ ಮಂಜೂರು.
* ರಾಯಚೂರಿನ ರಾಜೀವ್ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅತ್ಯಾಧುನಿಕ ಉಪಕರಣಗಳ ಖರೀದಿಗಾಗಿ 10 ಕೋಟಿ ರೂಪಾಯಿ ಮಂಜೂರು.
* ಗ್ರಾಮ ಪಂಚಾಯ್ತಿ ಆಸ್ತಿಗಳ ನೋಂದಣಿ ಮಾಡುವ ನಿಯಮಾವಳಿಗಳಲ್ಲಿ ಬದಲಾವಣೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಕಾಯ್ದೆಯ ನಿಯಮ 30ಕ್ಕೆ ತಿದ್ದುಪಡಿ.
* ಕೃಷ್ಣಾ ಮೇಲ್ದಂಡೆ ಯೋಜನೆಯ 417 ಸಹಾಯಕ ಎಂಜಿನಿಯರುಗಳ ಮುಂದುವರಿಕೆಗೆ ವಿಶೇಷ ಕಾನೂನು ಜಾರಿ.











Click it and Unblock the Notifications