ರಾಜ್ಯಸಭೆ ಚುನಾವಣೆಗೆ ಮೂವರು ಅಭ್ಯರ್ಥಿ ಅಂತಿಮಗೊಳಿಸಿದ ಬಿಜೆಪಿ?
ಬೆಂಗಳೂರು, ಜೂನ್ 6: ರಾಜ್ಯಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮವಾಗಿದೆ. ವಿಧಾನಸಭೆಯಲ್ಲಿ ನಡೆದ ರಾಜ್ಯ ಕೋರ್ ಕಮಿಟಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಬಿಜೆಪಿ ಕೇಂದ್ರಿಯ ಚುನಾವಣೆ ಸಮಿತಿಗೆ ಹೆಸರುಗಳನ್ನು ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Recommended Video
ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭೆ ಸ್ಥಾನಗಳು ಖಾಲಿಯಾಗಿದ್ದು, ಬಿಜೆಪಿ ಎರಡು ಸ್ಥಾನ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ, ಕೇಂದ್ರಕ್ಕೆ ರವಾನಿಸಿರುವ ಪಟ್ಟಿಯಲ್ಲಿ ಮೂವರು ಹೆಸರು ಅಂತಿಮಗೊಳಿಸಲಾಗಿದೆ.
ನಿರೀಕ್ಷೆಯಂತೆ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹೆಸರು ಬಿಜೆಪಿ ಪಟ್ಟಿಯಲ್ಲಿದ್ದು, ಪ್ರಭಾಕರ್ ಶೆಟ್ಟಿ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಜೂನ್ 7 ರಂದು ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ ಸಭೆ ನಡೆಯಲಿದ್ದು, ಈ ಸಭೆ ಬಳಿಕ ರಾಜ್ಯಸಭೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ಪ್ರಭಾಕರ್ ಶೆಟ್ಟಿ ಹೆಸರಿನ ಜೊತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ ನಾಗರಾಜ್, ಚಂದ್ರಶೇಖರ್ ಸೇರಿದಂತೆ ಹಲವು ಹೆಸರುಗಳು ಚರ್ಚೆಯಾದವು ಎನ್ನಲಾಗಿದೆ.
ಇನ್ನು ವಿಧಾನ ಪರಿಷತ್ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಪ್ರಸ್ತಾಪವೂ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಗೆ ಬಂತು. ಆದರೆ, ಚುನಾವಣೆ ಘೋಷಣೆ ಆಗಲಿ, ಆಮೇಲೆ ಚರ್ಚೆ ಮಾಡೋಣ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.