ಸಂಕಷ್ಟದಲ್ಲಿ ಬರದ ಮೋದಿ ಎಲೆಕ್ಷನ್ ಸಮಯದಲ್ಲಿ ಪದೇ ಪದೇ ಬಂದು ಮತ ಯಾಚಿಸುತ್ತಾರೆ: ಸಿದ್ದರಾಮಯ್ಯ
ರಾಜ್ಯಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ..? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಯಾಕೆ ಮುಂದೆ ಓದಿ.
ಬೆಂಗಳೂರು, ಫೆಬ್ರವರಿ. 06: ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಿದ್ದು, ಈ ವೇಳೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಚುನಾವಣೆ ಹತ್ತಿರವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ನಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹಲವು ಪ್ರಶ್ನೆಗಳನ್ನು ಕೇಳಿ ಸರಣಿ ಟ್ವೀಟ್ ಮಾಡಿರುವ ಅವರು, ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕಕ್ಕೆ ಯಾವತ್ತೂ ಸಹಾಯ ಮಾಡಲು ಬರದ ಪ್ರಧಾನಿಯವರು ಈಗ ಆಗಾಗ ಭೇಟಿ ನೀಡಿ ಕನ್ನಡಿಗರ ಮತ ಯಾಚನೆ ಮಾಡುತ್ತಿದ್ದಾರೆ. ಆದರೂ ನಾವು ಅವರನ್ನು ಸ್ವಾಗತಿಸುತ್ತೇವೆ. ನಮ್ಮ ರಾಜ್ಯದಲ್ಲಿರುವಾಗ ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.
ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ಬುರುಡೆ ಬಿಟ್ಟಿದ್ದಾರೆ, ಕರ್ನಾಟಕಕ್ಕೆ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸಿಲ್ಲ ಎಂದು ಹಲವು ಆರೋಪಗಳನ್ನು ಮಾಡಿರುವ ಅವರು ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.

ಅದಾನಿ ಬಗ್ಗೆ ಮೋದಿಯವರು ಯಾಕೆ ಮೌನಿಬಾಬಾ ಆಗಿದ್ದಾರೆ..?
'ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ಬುರುಡೆಬಿಟ್ಟು ಅಧಿಕಾರಕ್ಕೆ ಬಂದಿರುವ ನರೇಂದ್ರಮೋದಿಯವರು ಮಾಡಿದ್ದೇನು ಗೊತ್ತಾ..? ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ರೂ.50,121 ಕೋಟಿಯಷ್ಟು ಕಡಿಮೆ ಮಾಡಿದ್ದಾರೆ. ನರೇಂದ್ರಮೋದಿಯವರೇ ರೈತರ ಬಗ್ಗೆ ಯಾಕೆ ನಿಮಗಿಷ್ಟು ದ್ವೇಷ?' ಎಂದು ಪ್ರಶ್ನಿಸಿದ್ದಾರೆ.
'ನರೇಂದ್ರ ಮೋದಿಯವರ ಖಾಸಾ ಗೆಳೆಯ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್ ಬರ್ಗ್ ವರದಿ ಬತ್ತಲೆ ಮಾಡಿದೆ. ಈ ಕಳ್ಳಾಟದಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿ ಭಾರತದ ಮಾನ ಹರಜಾಗುತ್ತಿದೆ, ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರು, ಎಲ್ ಐಸಿಯಲ್ಲಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ. 56 ಇಂಚು ಎದೆಯ ಮೋದಿಯವರು ಯಾಕೆ ಈ ಬಗ್ಗೆ ತನಿಖೆ ಮಾಡದೆ ಮೌನಿಬಾಬಾ ಆಗಿದ್ದಾರೆ..? ಎಂದು ವ್ಯಂಗ್ಯವಾಡಿದ್ದಾರೆ.
|
2023-24ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಮಹತ್ವದ ಯೋಜನೆಗಳಿಲ್ಲ
" 2023-24ರ ಬಜೆಟ್ನಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಕರ್ನಾಟಕಕ್ಕೆ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸಿಲ್ಲ. ಚುನಾವಣಾ ವರ್ಷವಾದರೂ ಸಹಾ, ಕನ್ನಡಿಗರನ್ನು ಕೇವಲವಾಗಿ ಪರಿಗಣಿಸಿದ ಬಿಜೆಪಿ, ಕರ್ನಾಟಕವನ್ನು ನಿರ್ಲಕ್ಷಿಸಿದೆ. ಯಾಕೆ ಬಿಜೆಪಿ ನಾಯಕರು ಕರ್ನಾಟಕವನ್ನು ಸದಾ ಮಲತಾಯಿ ಧೋರಣೆಯಿಂದ ಕಾಣುತ್ತಾರೆ..?" ಎಂದಿದ್ದಾರೆ.
"ಬಡಜನರ ಹಸಿದ ಹೊಟ್ಟೆಯನ್ನು ತಣಿಸಲು ಯುಪಿಎ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೆ ತಂದು 80 ಕೋಟಿ ಜನರಿಗೆ ಆಹಾರಧಾನ್ಯ ವಿತರಿಸಿತ್ತು. ನರೇಂದ್ರ ಮೋದಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದೆ. ನರೇಂದ್ರಮೋದಿಯವರೇ, ಬಡವರ ಬಗ್ಗೆ ಯಾಕೆ ನಿಮಗಿಷ್ಟು ದ್ವೇಷ..?' ಎಂದು ಪ್ರಶ್ನಿಸಿದ್ದಾರೆ.
"ಬಾಯಲ್ಲಿ ರೈತರ ಗುಣಗಾನ ಮಾಡುವ ನರೇಂದ್ರಮೋದಿಯವರು ಬಜೆಟ್ ನಲ್ಲಿ ಮಾಡಿದ್ದೇನು ಗೊತ್ತಾ? ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನೀಡುವ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಿಸಲು ನೀಡಲಾಗುತ್ತಿದ್ದ ಅನುದಾನವನ್ನು ರೂ.1500 ಕೋಟಿಗಳಿಂದ ರೂ. ಒಂದು ಲಕ್ಷಕ್ಕೆ ಇಳಿಸಲಾಗಿದೆ, ಅಂದರೆ ಯೋಜನೆಗೆ ಬೀಗ. ನರೇಂದ್ರಮೋದಿಯವರೇ, ರೈತರ ಬಗ್ಗೆ ಯಾಕೆ ನಿಮಗಿಷ್ಟು ದ್ವೇಷ..?" ಎಂದಿದ್ದಾರೆ ಸಿದ್ದರಾಮಯ್ಯ.
|
ನಿರುದ್ಯೋಗಿಗಳ ಬಗ್ಗೆ ಯಾಕೆ ನಿಮಗಿಷ್ಟು ದ್ವೇಷ?
"ಬೆಲೆ ಕುಸಿತ ಮತ್ತು ಬೀಜ-ಗೊಬ್ಬರದ ಬೆಲೆ ಏರಿಕೆಯಿಂದಾಗಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ನರೇಂದ್ರಮೋದಿಯವರು ಪ್ರಸಕ್ತಸಾಲಿನ ಬಜೆಟ್ ನಲ್ಲಿ ಹತ್ತಿ ನಿಗಮದ ಬೆಂಬಲ ಬೆಲೆಯ ಅನುದಾನವನ್ನು ರೂ.782 ಕೋಟಿಯಿಂದ ರೂ.1 ಲಕ್ಷಕ್ಕೆ ಇಳಿಸಿದ್ದಾರೆ. ಬೆಂಬಲ ಬೆಲೆ ಕ್ಯಾನ್ಸಲ್.
ನರೇಂದ್ರ ಮೋದಿಯವರೇ ರೈತರ ಮೇಲೆ ಯಾಕೆ ನಿಮಗಿಷ್ಟು ದ್ವೇಷ..?" ಎಂದು ಪ್ರಶ್ನಿಸಿದ್ದಾರೆ.
"ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳ ಪಾಲಿನ ಸಂಜೀವಿನಿ ನರೇಗಾ ಯೋಜನೆಯನ್ನು ಜಾರಿಗೆ ತಂದಿರುವುದು ಯುಪಿಎ ಸರ್ಕಾರ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ನರೇಗಾಕ್ಕೆ ನೀಡಲಾಗುವ ಸಹಾಯಧನವನ್ನು ಶೇಕಡಾ 21.66ರಷ್ಟು (ರೂ.60,000 ಕೋಟಿ) ಕಡಿಮೆ ಮಾಡಲಾಗಿದೆ. ನರೇಂದ್ರ ಮೋದಿಯವರೇ ಹಳ್ಳಿಗಳ ನಿರುದ್ಯೋಗಿಗಳ ಬಗ್ಗೆ ಯಾಕೆ ನಿಮಗಿಷ್ಟು ದ್ವೇಷ..?" ಎಂದು ಕೇಳಿದ್ದಾರೆ ಸಿದ್ದರಾಮಯ್ಯ.

ನರೇಂದ್ರ ಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ?
"ಕಳೆದ ಎಂಟು ವರ್ಷಗಳಿಂದ ಎಲ್ ಪಿ ಜಿ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ. ಹಳ್ಳಿಯಬಡವರು ಮತ್ತೆ ಉರುವರಲು ಹಾಕಿ ಒಲೆ ಉರಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ ನರೇಂದ್ರಮೋದಿಯವರು ಎಲ್ ಪಿಜಿ ಮೇಲಿನ ಸಬ್ಸಿಡಿಯನ್ನು ಶೇಕಡಾ 75ರಷ್ಟು (ರೂ.2,257 ಕೋಟಿ) ಕಡಿಮೆ ಮಾಡಿದ್ದಾರೆ.
ನರೇಂದ್ರಮೋದಿಯವರೇ ಬಡವರ ಮೇಲೆ ಯಾಕೆ ನಿಮಗಿಷ್ಟು ದ್ವೇಷ..?" ಎಂದು ಕುಟುಕಿದ್ದಾರೆ.
"ಭದ್ರಾ ಮೇಲ್ದಂಡೆ ಯೋಜನಾ ವೆಚ್ಚ ರೂ.53,000 ಕೋಟಿ. ಈ ವೆಚ್ಚದ ಶೇಕಡಾ 50ರಷ್ಟು ಕೊಡುತ್ತೇವೆ ಎನ್ನುವುದು ನರೇಂದ್ರಮೋದಿ ಸರ್ಕಾರದ ಭರವಸೆ. ಈ ಬಜೆಟ್ ನಲ್ಲಿ ಕೊಟ್ಟಿರುವುದು ಕೇವಲ ರೂ.2300 ಕೋಟಿ ಯೋಜನೆ ಮುಗಿಯುವುದು 2050ಕ್ಕೋ..? ನರೇಂದ್ರಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ..?" ಎಂದಿದ್ದಾರೆ
ಮುಂದುವರಿದು, "ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಬೆಂಗಳೂರು ಮೆಟ್ರೋ ಯೋಜನೆಯನ್ನು ಬಜೆಟ್ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ.
ನರೇಂದ್ರ ಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ..?" ಎಂದು ಕೇಳಿದ್ದಾರೆ.
ಈ ಎಲ್ಲಾ ಪ್ರಶ್ನೆಗಳ ಜೊತೆಗೆ #AnswerMadiModi (ಆನ್ಸರ್ ಮಾಡಿ ಮೋದಿ) ಎಂದು ಹ್ಯಾಶ್ಟ್ಯಾಗ್ ಬಳಸಿದ್ದಾರೆ.












Click it and Unblock the Notifications