ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ವಿರುದ್ಧ ಎಫ್ಐಆರ್
ಬೆಂಗಳೂರು, ಮೇ 03: ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಿಬಿಎಂಪಿಯ ಮಾಜಿ ಮೇಯರ್ ಪದ್ಮಾವತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂಪತ್ ಕುಮಾರ್ ಎಂಬುವರು ಪದ್ಮಾವತಿ ಅವರ ವಿರುದ್ಧ 420 ಕೇಸ್ ಹಾಕಿದ್ದರು. ಪದ್ಮಾವತಿ ಅವರು ಸಾಲ ಪಡೆದು ವಾಪಸ್ ನೀಡಿಲ್ಲ ಎಂದು ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಾವತಿ, ಇದೆಲ್ಲಾ ಸುಳ್ಳು ದೂರು. ಈ ದೂರಿನ ಹಿಂದೆ ಶಾಸಕ ಸುರೇಶ್ ಕುಮಾರ್ ಅವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಪದ್ಮಾವತಿ ಹಾಗೂ ಸಹ ಆರೋಪಿಗಳಾದ ಜಯಪಾಲ್ ಮತ್ತು ಸಂತೋಷ್ ವಿರುದ್ಧ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸೂಚನೆ ಮೇರೆಗೆ ರಾಜಾಜಿನಗರ ಪೊಲೀಸರು ಆರೋಪಿಗಳ ವಿರುದ್ಧ ಏಪ್ರಿಲ್ 26 ರಂದು ಐಪಿಸಿ ಸೆಕ್ಷನ್ 420 ವಂಚನೆ ಪ್ರಕರಣ ದಾಖಲಾಗಿತ್ತು. ಈಗ ಕೋರ್ಟ್ ಅನುಮತಿ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಏನಿದು ಪ್ರಕರಣ : 2012ರಲ್ಲಿ ಸಂಪತ್ ಕುಮಾರ್ ಅವರ ಬಳಿ ಪದ್ಮಾವತಿ, ಜಯಪಾಲ್ ಮತ್ತು ಸಂತೋಷ್ 3.4 ಕೋಟಿ ಸಾಲ ಪಡೆದಿದ್ದರು. ಒಂದು ಕಂತಿನಲ್ಲಿ ಸಾಲಕ್ಕೆ 1.4 ಕೋಟಿ ಮತ್ತು ಇನ್ನೊಂದು ಕಂತಿನಲ್ಲಿ 2 ಕೋಟಿ ಹಣ ಪಡೆದಿದ್ದರು.
ಇದಕ್ಕೆ ಪ್ರತಿಯಾಗಿ ರಾಜಾಜಿನಗರದ ಎರಡನೇ ಬ್ಲಾಕ್ನಲ್ಲಿದ್ದ ಕಟ್ಟಡವನ್ನು ಸಂಪತ್ ಕುಮಾರ್ಗೆ ಮಾರಾಟ ಮಾಡಲಾಗಿತ್ತು. ಸೇಲ್ ಅಗ್ರಿಮೆಂಟ್ ಆಗಿ, 180 ದಿನ ಕಳೆದರೂ ಆರೋಪಿಗಳು ರಿಜಿಸ್ಟರ್ ಮಾಡಿಸಿರಲಿಲ್ಲ. ಇದರ ಜೊತೆಗೆ ಅದೇ ಕಟ್ಟಡದ ಮೇಲೆ ಬ್ಯಾಂಕ್ನಿಂದ 3.5 ಕೋಟಿ ಸಾಲವನ್ನೂ ಪಡೆದಿದ್ದಾರೆ ಎಂದು ಸಂಪತ್ ಕುಮಾರ್ ಅವರು ದೂರಿನಲ್ಲಿ ಹೇಳಿದ್ದಾರೆ.












Click it and Unblock the Notifications