ತಾಜಾ ತಾಜಾ ಕಳ್ಳೆಕಾಯ್, ಗರಮಾಗರಂ ಕಳ್ಳೆಕಾಯ್
ಬೆಂಗಳೂರು, ಡಿ. 2 : ಬೆಂಗಳೂರಿನಲ್ಲಿ ನಡೆಯುವ ಐತಿಹಾಸ ಪ್ರಸಿದ್ಧ ಮೂರು ದಿನಗಳ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ದೊರಕಿದೆ. ಕಾರ್ತಿಕ ಮಾಸದ ಕೊನೆಯವಾರ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ಕಡಲೆಕಾಯಿ ಪರಿಷೆಗೆ ಮೇಯರ್ ಕಟ್ಟೆ ಸತ್ಯನಾರಾಯಣ ಚಾಲನೆ ನೀಡಿದ್ದಾರೆ.
ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಸಹಯೋಗದಲ್ಲಿ ನಡೆಯುವ ಪರಿಷೆಯ ಮೂರು ದಿನಗಳ ಕಾಲ ನಡೆಯಲಿದೆ. ಈ ಬಾರಿಯ ಪರಿಷೆಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. ರಾಮಕೃಷ್ಣಾಶ್ರಮದ ರಾಮಕೃಷ್ಣ ಚೌಕದ ಹೆಬ್ಬಾಗಿಲಿನಿಂದ ದೊಡ್ಡ ಗಣಪತಿ ದೇವಾಲಯದ ತನಕ ರಸ್ತೆಯ ಇಕ್ಕೆಲಗಳಲ್ಲೂ ಕಡಲೆಕಾಯಿ ಅಂಗಡಿಗಳೆ ತುಂಬು ಹೋಗಿವೆ. ಭಾನುವಾರದಿಂದಲೇ ಬಸನವಗುಡಿಯಲ್ಲಿ ಪರಿಷೆಯ ಸಂಭ್ರಮ ಎದ್ದು ಕಾಣುತ್ತಿದೆ.
ಕಾರ್ತಿಕ ಮಾಸದ ಕೊನೆಯ ವಾರ ನಡೆಯುವ ಈ ಕಡಲೆಕಾಯಿ ಪರಿಷೆಯಲ್ಲಿ ಬಗೆಬಗೆಯ ಕಡಲೆಕಾಯಿ ಖರೀದಿಸಿ ಮೆಲ್ಲುವುದೇ ಸಂಭ್ರಮ. ವಾಸ್ತವದಲ್ಲಿ ಈ ಕಡಲೆಕಾಯಿ ಪರಿಷೆ ಎಂದರೆ ಇಲ್ಲಿನ ಬಸವಣ್ಣ ದೇವರ ಜಾತ್ರೆ. ಸದ್ಯ ಒಂದು ಸೇರು ಕಡಲೆ ಕಾಯಿ ಬೆಲೆ 25 ರಿಂದ 30 ರೂ.ಗಳಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಈ ಬಾರಿ ಕಡಲೆಕಾಯಿಯ ಇಳುವರಿ ಉತ್ತಮವಾಗಿದೆ. ಒಟ್ಟು ಆರು ವಿವಿಧ ಬಗೆಯ ಕಡಲೆಕಾಯಿಗಳನ್ನು ಪರಿಷೆಯಲ್ಲಿ ಕಾಣಬಹುದಾಗಿದೆ. ಕಡಲೆ ಕಾಯಿ ಪರಿಷೆ ಕುರಿತು ಒಂದಷ್ಟು
ಪರಿಷೆಗೆ ಐತಿಹಾಸಿಕ ಹಿನ್ನಲೆ
ಬಸನವಗುಡಿ ಪರಿಷೆಗೆ ಐತಿಹಾಸಿಕ ಹಿನ್ನಲೆ ಇದೆ. ಸದ್ಯ ಬೆಂಗಳೂರೇ ಆಗಿಹೋಗಿರುವ ಸುಂಕೇನಹಳ್ಳಿ, ಗವಿಪುರ, ಹೊಸಕೆರೆಹಳ್ಳಿ, ನಾಗಸಂದ್ರ ಮತ್ತು ಮಾವಳ್ಳಿ ಮುಂತಾದ ಹಳ್ಳಿಗಳನ್ನೆಲ್ಲಾ ರೈತರು ಶೇಂಗಾ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರಂತೆ. ಆದರೆ, ಈ ಬೆಳೆಯನ್ನು ಎತ್ತೊಂದು ರಾತ್ರಿ ವೇಳೆ ಹೊಲಕ್ಕೆ ನುಗ್ಗಿ ತಿಂದು ಹಾಕುತ್ತಿತ್ತು. ಒಂದು ದಿನ ಇದನ್ನು ಪತ್ತೆ ಹಚ್ಚಿದ ರೈತರು ಇದನ್ನು ಓಡಿಸಿಕೊಂಡು ಬಂದರಂತೆ. ಅದು ಹೆದರಿ ಗುಹೆಯೊಳಗೆ ಸೇರಿಕೊಂಡಿಂತು. ಆಗ ರೈತರು, "ಬಸವಾ ನೀನು ಇಲ್ಲೇ ಕುಳಿತಿರು. ನಾವೇ ನಿನ್ನ ಬಳಿ ಕಡಲೆಕಾಯಿ ತಂದು ನೀಡುತ್ತೇವೆ" ಎಂದು ಮನವಿ ಮಾಡಿಕೊಂಡರಂತೆ. ಅಂದಿನಿಂದಲೂ ಬಸವಣ್ಣನಿಗೆ ಕಡಲೆ ಕಾಯಿ ಅರ್ಪಿಸಿ ನಂತರ ಮಾರಾಟ ಮಾಡುತ್ತಾರೆ. ಸದ್ಯ ಈ ಬಸವಣ್ಣ ದೇವರ ಜಾತ್ರೆಯೇ ಕಡಲೆಕಾಯಿ ಪರಿಷೆಯಾಗಿ ಪ್ರಸಿದ್ದಿ ಪಡೆದಿದೆ.
ಹೊರ ಊರಿನಿಂದಲೂ ಬರುತ್ತಾರೆ
ಕಾರ್ತಿಕ ಮಾಸದ ಕೊನೆಯ ವಾರ ಆರಂಭವಾಗುವ ಪರಿಷೆಗೆ ಬೆಂಗಳೂರು ಸುತ್ತಮತ್ತಲಿನ ಹಳ್ಳಿಗಳ ವ್ಯಾಪಾರಿಗಳು ಮಾತ್ರವಲ್ಲ, ತುಮಕೂರು, ರಾಮನಗರ, ಚನ್ನಪಟ್ಟಣ, ಕೋಲಾರ, ಚಿಂತಾಮಣಿ, ಹೊಸೂರುನಿಂದಲೂ ವ್ಯಾಪಾರಿಗಳು ಆಗಮಿಸುತ್ತಾರೆ. ತಮಿಳುನಾಡಿನ ವುಡುಪೇಟೆ, ಚಂಗೂರು, ತಿರುವಣಮಲೈನಿಂದಲೂ ಕಡಲೆಕಾಯಿ ಪರಿಷೆಗೆ ವ್ಯಾಪಾರಿಗಳು ಆಗಮಿಸುತ್ತಾರೆ.
ಕಡಲೆ ಕಾಯಿ ಬೀದಿ
ರಾಮಕೃಷ್ಣಾಶ್ರಮದ ರಾಮಕೃಷ್ಣ ಚೌಕದ ಹೆಬ್ಬಾಗಿಲಿನಿಂದ ದೊಡ್ಡ ಗಣಪತಿ ದೇವಾಲಯದ ತನಕ ಸುಮಾರು ಒಂದು ಕಿ.ಮೀ ರಸ್ತೆ ಕಡಲೆಕಾಯಿ ವ್ಯಾಪಾರಿಗಳಿಂದ ತುಂಬಿ ಹೋಗಿರುತ್ತದೆ. ಪರಿಷೆಗೆ ಒಂದು ವಾರಗಳ ಮೊದಲೇ ಆಗಮಿಸುವ ವ್ಯಾಪಾರಿಗಳು ಪರಿಷೆ ಮುಗಿದ ಎರಡು-ಮೂರು ದಿನಗಳ ವರೆಗೆ ಇಲ್ಲೇ ಇರುತ್ತಾರೆ. ಪರಿಷೆಗೆ ಕೆಲವು ವರ್ಷಗಳಿಂದ ಕಡಲೆಕಾಯಿಗಳ ಜೊತೆ, ಮಕ್ಕಳ ಆಟಿಕೆಗಳು, ವಿವಿಧ ಕಲಾಕೃತಿ ಮಾರುವ ಅಂಗಡಿಗಳು ಆಗಮಿಸುತ್ತವೆ.
ಶೇಂಗಾವೇ ಪ್ರಸಿದ್ದಿ
ಪರಿಷೆಯಲ್ಲಿ ಬಗೆಬಗೆಯ ಕಡಲೆಕಾಯಿ ಖರೀದಿಸಿ ತಿನ್ನುವುದೇ ಸಂಭ್ರಮ. ನಾಲ್ಕಡಿ ಅಗಲದ ಫುಟ್ಪಾತ್ ಜಾಗ ಸಿಕ್ಕರೂ ಅಲ್ಲೊಂದು ಕಡಲೆಕಾಯಿ ಅಂಗಡಿ ತೆರೆಯುತ್ತಾರೆ ವ್ಯಾಪಾರಿಗಳು. ಈ ಬಾರಿಯ ಪರಿಷೆಯಲ್ಲಿ ಒಟ್ಟು 6 ಬಗೆಯ ಕಡಲೆಕಾಯಿಗಳಿವೆ. ಒಂದು ಸೇರಿಗೆ 25ರಿಂದ 30 ರೂ.ಗಳ ವರೆಗೆ ಮಾರಾಟವಾಗುತ್ತಿದೆ.
ಸೂಕ್ತ ವ್ಯವಸ್ಥೆ
ಪರಿಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ನೂಕುನುಗ್ಗಲು ಆಗದಂತೆ ಎಚ್ಚರವಹಿಸಲು ಪೊಲೀಸರೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪರಿಷೆಯ ಬೀದಿಗಳಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಗ್ನಿ ಶಾಮಕ, ಆ್ಯಂಬುಲೆನ್ಸ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ.