ಕೆಆರ್ ಮಾರುಕಟ್ಟೆ ಕೈಲಾಶ್ ಬಾರ್ ನಲ್ಲಿ ಬೆಂಕಿ, 5 ಮಂದಿ ದುರ್ಮರಣ
Recommended Video

ಬೆಂಗಳೂರು, ಜನವರಿ 08: ಕೃಷ್ಣರಾಜ ಮಾರುಕಟ್ಟೆ (ಕೆ.ಆರ್ ಮಾರುಕಟ್ಟೆ) ಸಮೀಪದ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಮುಂಜಾನೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಐವರು ಸಿಬ್ಬಂದಿ ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ನಡೆದಿದೆ.
ಸೋಮವಾರ ಮುಂಜಾನೆ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟಿನಿಂದಾಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಬಾರ್ ನ ಸಿಬ್ಬಂದಿಗಳು ನಿದ್ದೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮೃತರನ್ನು ಮಂಜುನಾಥ್, ಕೀರ್ತಿ, ಮಹೇಶ್, ಸ್ವಾಮಿ ಹಾಗೂ ಪ್ರಸಾದ್ ಎಂದು ಗುರುತಿಸಲಾಗಿದೆ. ಮಾರುಕಟ್ಟೆಗೆ ತೆರಳುತ್ತಿದ್ದ ಸಾರ್ವಜನಿಕರು ಬಾರ್ ಇರುವ ಕಟ್ಟಡದಿಂದ ಹೊಗೆಯಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ 3 ಅಗ್ನಿ ಶಾಮಕದಳ ವಾಹನ ಹಾಗೂ 25ಕ್ಕೂ ಅಧಿಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದಾರೆ.

ಪಶ್ಚಿಮ ವಲಯ ಡಿಸಿಪಿ ಅನುಚೇತ್ ಅವರು ಘಟನಾ ಸ್ಥಳಕ್ಕೆ ಬಂದು, ಪರಿಶೀಲನೆ ನಡೆಸಿದ್ದಾರೆ. ಕಲಾಸಿಪಾಳ್ಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.













Click it and Unblock the Notifications