ಅಮ್ಮನನ್ನು ಕೊಂದಿದ್ದೇಕೆ? ಎಂದು ಹೇಳಿದ್ದಕ್ಕೆ ಮಕ್ಕಳಿಗೆ ಗುಂಡು ಹೊಡೆದ!
ಬೆಂಗಳೂರು, ಜೂನ್ 24 : 'ಅಮ್ಮನ್ನು ಏಕೆ ಕೊಲೆ ಮಾಡಿದೆ? ಎಂದು ಮಕ್ಕಳು ಪ್ರಶ್ನಿಸುತ್ತಿದ್ದರು. ಉತ್ತರ ಕೊಡಲಾಗದೆ ಅವರ ಮೇಲೂ ಗುಂಡು ಹಾರಿಸಿದೆ' ಎಂದು ಪೊಲೀಸರ ವಶದಲ್ಲಿರುವ ಜಯನಗರದ ಉದ್ಯಮಿ ಗಣೇಶ್ ವಿಚಾರಣೆ ವೇಳೆ ಹೇಳಿದ್ದಾರೆ.
ಜಯನಗರದ ಉದ್ಯಮಿ ಗಣೇಶ್ನನ್ನು ಪತ್ನಿ ಸಹನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಮೇಲೆ ಗುಂಡು ಹಾರಿಸಿದ ಆರೋಪದಲ್ಲಿಯೂ ಗಣೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸರ ವಶದಲ್ಲಿರುವ ಗಣೇಶ್ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ. ಗಣೇಶ್ ವಿವಿಧ ಬ್ಯಾಂಕ್, ಸಂಬಂಧಿಕರು ಮತ್ತು ಸ್ನೇಹಿತರು ಹೀಗೆ ಸುಮಾರು 55 ಕೋಟಿ ಸಾಲ ಮಾಡಿದ್ದರು. ಕಳೆದ ಒಂದು ತಿಂಗಳಿನಿಂದ 1 ಸಾವಿರ ರೂ.ಗಳಿಗೂ ಬೇರೆಯವರ ಬಳಿ ಕೈ ಚಾಚುವ ಪರಿಸ್ಥಿತಿ ಬಂದಿತ್ತು.

ಸಹನಾ ಜೊತೆ ಜಗಳ : ಗಣೇಶ್ ಪೊಲೀಸರು ವಿಚಾರಣೆ ವೇಳೆ ಹೇಳಿರುವ ಪ್ರಕಾರ ಬ್ಯಾಂಕ್ ಮತ್ತು ಸ್ನೇಹಿತರು ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮ ಮತ್ತು ರೆಸಾರ್ಟ್ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಆದ್ದರಿಂದ, ಸಾಲ ತೀರಿಸುವುದು ಕಷ್ಟವಾಗಿತ್ತು.
ಜಯನಗರದಲ್ಲಿನ ಮನೆಯನ್ನು ಮಾರಿ ಸಾಲ ತೀರಿಸಲು ಗಣೇಶ್ ಮುಂದಾಗಿದ್ದ. ಆದರೆ, ಪತ್ನಿ ಸಹನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಮೊನ್ನೆ ಜಗಳ ನಡೆದಾಗಲೂ ಕೋಪಗೊಂಡ ಗಣೇಶ್ ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದ.
ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದೆ : 'ಅಮ್ಮನನ್ನು ಏಕೆ ಕೊಲೆ ಮಾಡಿದೆ ಎಂದು ಮಕ್ಕಳು ಪದೇ ಪದೇ ಪ್ರಶ್ನಿಸುತ್ತಿದ್ದರು. ಉತ್ತರ ಕೊಡಲಾಗದೆ ಅವರ ಮೇಲೆ ಗುಂಡು ಹಾರಿಸಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಅಷ್ಟರಲ್ಲಿ ಪೊಲೀಸರು ಬಂಧಿಸಿದರು' ಎಂದು ಗಣೇಶ್ ಹೇಳಿದ್ದಾರೆ.
ಎರಡು ಎಫ್ಐಆರ್ ದಾಖಲು : ಗಣೇಶ್ ವಿರುದ್ಧ ಎರಡು ಎಫ್ಐಆರ್ ದಾಖಲು ಮಾಡಲಾಗಿದೆ. ಸಹನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಮಕ್ಕಳ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡು ದಿನಗಳ ಕಾಲ ಗಣೇಶ್ನನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ಒಪ್ಪಿಸಿದೆ.












Click it and Unblock the Notifications