ಭಾರತದ ಆಡಳಿತ ಕ್ಷೇತ್ರಕ್ಕೆ ಪ್ರಧಾನಿ ಮೋದಿಯೇ ರಾಜಋಷಿ ಎಂದ ಸಚಿವ ಡಾ.ಸುಧಾಕರ್
ಬೆಂಗಳೂರು, ಜುಲೈ 12: "ರಾಜ್ಯದಲ್ಲಿ ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಹಾಗೂ ಜನಪರ ಆಡಳಿತ ನೀಡುವುದೇ ನಿಜವಾದ ಪ್ರಜಾಪ್ರಭುತ್ವ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಚಿವಾಲಯ ಆಯೋಜಿಸಿದ 'ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಸಮನ್ವಯತೆ' ಗಾಗಿ ಪ್ರಾದೇಶಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
"ರಾಜಧರ್ಮ, ರಾಮರಾಜ್ಯ ಹಾಗೂ ಕಲ್ಯಾಣ ರಾಷ್ಟ್ರ ಎಂಬ ಪರಿಕಲ್ಪನೆಗಳ ಬಗ್ಗೆ ಭಾರತೀಯರಿಗೆ ತಿಳುವಳಿಕೆ ಇದೆ. ಚಾಣಕ್ಯ ನೀತಿ, ಶುಕ್ರ ನೀತಿ ಸಾರ, ರಾಮಾಯಣ, ಮಹಾಭಾರತವನ್ನು ಭಾರತೀಯರು ಓದಿಕೊಂಡು ಬಂದಿದ್ದಾರೆ. ಬೌದ್ಧ ಧರ್ಮೀಯರ ಕೃತಿಗಳಲ್ಲಿ ಕೂಡ ಉತ್ತಮ ಆಡಳಿತವೆಂದರೆ ಏನು ಎಂಬುದನ್ನು ಸಾರಿ ಹೇಳುತ್ತವೆ. ಈ ಹಿನ್ನೆಲೆ ಹಿಂದಿನಿಂದಲೂ ಭಾರತೀಯರಿಗೆ ಉತ್ತಮ ಆಡಳಿತ ಅನುಭವವಿದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದಿಂದ ಆಡಳಿತ ನೀತಿಗೆ ಸಿಕ್ಕ ಕೊಡುಗೆ
ದೇಶದ ಆಡಳಿತ ನೀತಿಗೆ ಕರ್ನಾಟಕ ಸಹ ತನ್ನದೇ ಆಗಿರುವ ಕೊಡುಗೆಯನ್ನು ನೀಡಿದೆ. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರಾಗಿ ಅನುಭವ ಮಂಟಪದ ಮೂಲಕ ನಿಜವಾದ ಪ್ರಜಾಪ್ರಭುತ್ವದ ಮಾದರಿಗೆ ಬುನಾದಿ ಹಾಕಿ ಕೊಟ್ಟಿದ್ದರು. ಪ್ರಜಾಪ್ರಭುತ್ವದ ಬಗ್ಗೆ ಭಾರತ ಬೇರೆಲ್ಲೂ ನೋಡಬೇಕಿಲ್ಲ. ಭಾರತದ ಕಡೆ ಎಲ್ಲರೂ ನೋಡುವಂತಹ ಇತಿಹಾಸವಿದೆ ಎಂದು ಬಣ್ಣಿಸಿದರು.
ಬಸವಣ್ಣನವರ ʼಕಾಯಕವೇ ಕೈಲಾಸʼ ಎನ್ನುವುದು ಕೆಲಸದ ಬಗ್ಗೆ ಸಾಕಷ್ಟು ತಿಳುವಳಿಕೆಯನ್ನು ನೀಡುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿನ ಬಜೆಟ್ ಭಾಷಣದಲ್ಲಿ ʼಕಾಯಕವೇ ಕೈಲಾಸʼ ಎಂಬುದನ್ನು ಪ್ರಸ್ತಾಪ ಮಾಡಿದ್ದರು. ಉತ್ತಮ ಆಡಳಿತ ಎಂದರೆ, ಸಾಮಾನ್ಯ ಮನುಷ್ಯನಿಗೆ ಏನು ಅಗತ್ಯವಿದೆ, ಸಮಸ್ಯೆಗಳೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದೇ ಆಗಿರುತ್ತದೆ ಎಂದು ಹೇಳಿದರು.

ಸ್ವಚ್ಛ ಭಾರತ್ ಈಗ ಜಗತ್ತಿಗೆ ಮಾದರಿ ಎಂದ ಸಚಿವರು
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರಂಭಿಸಿದ ಸ್ವಚ್ಛ ಭಾರತ ಮಿಷನ್ನಂತಹ ಕಾರ್ಯಕ್ರಮ ಇಡೀ ದೇಶಕ್ಕೆ ಮಾತ್ರವಲ್ಲದೆ, ವಿಶ್ವಕ್ಕೆ ಮಾದರಿಯಾಗಿದೆ. ದೇಶದಲ್ಲಿ 10 ಕೋಟಿ ಶೌಚಾಲಯಗಳನ್ನು ಕಟ್ಟಿರುವುದು ಕೇವಲ ಬದಲಾವಣೆಯಲ್ಲ, ಅದು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ನ್ಯಾಯ ವಿಳಂಬವಾಗಿದೆ ಎಂದರೆ, ನ್ಯಾಯ ನಿರಾಕರಿಸಲಾಗಿದೆ ಎಂದೇ ಅರ್ಥವಲ್ಲ. ಪ್ರಾಮಾಣಿಕತೆ, ಪಾರದರ್ಶಕತೆ ಆಡಳಿತದಲ್ಲಿ ತುಂಬಾ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಮಾದರಿ ಆಡಳಿತ ನೀಡುತ್ತಿದ್ದು, ಜನರ ಆಶೋತ್ತರಗಳಿಗಾಗಿ ಆಡಳಿತ ನಡೆಸಲಾಗುತ್ತಿದೆ," ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಅಭಿವೃದ್ಧಿಗೆ ಪೂರಕವೇ ಕನಸು ಕಾಣುವ ನಾಯಕ
ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ನಾಯಕರಾದವರು ಕನಸು ಕಾಣಬೇಕು, ಅದು ಅಭಿವೃದ್ಧಿಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಾ ಅಭಿವೃದ್ಧಿ ಕಡೆ ಸಾಕಷ್ಟು ಗಮನ ಕೊಡುತ್ತಿದ್ದಾರೆ. 10ನೇ ತರಗತಿ ಉತ್ತೀರ್ಣರಾದ ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಆರೋಗ್ಯ ವಲಯವೂ ಸಾಕಷ್ಟು ಅಭಿವೃದಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಆಗಿರುವ ಅಭಿವೃದ್ಧಿಯೇ ದೊಡ್ಡ ಉದಾಹರಣೆಯಾಗಿದ್ದು, ಭಾರತ ಆರೋಗ್ಯ ಅಭಿವೃದ್ಧಿಯಲ್ಲಿ ವಿಶ್ವದ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಶೇ.30 ರಿಂದ ಶೇ.40ರಷ್ಟು ಲಸಿಕೆ ವಿತರಣೆ ಆಗಿದೆ. ಆದರೆ ಭಾರತದಲ್ಲಿ ಶೇ.90ಕ್ಕೂ ಅಧಿಕ, ಅಂದರೆ ಸುಮಾರು 200 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಜನರು ಸರ್ಕಾರದ ಜೊತೆ ಕೈ ಜೋಡಿಸಿದಾಗ ಮಾತ್ರ ಇಂತಹ ಕಾರ್ಯ ನಡೆಯಲು ಸಾಧ್ಯ ಎಂದರು.

ಸಿಲಿಕಾನ್ ಸಿಟಿ ನವ ಉದ್ಯಮಗಳ ಹಾಟ್ ಸ್ಪಾಟ್
ದೇಶದಲ್ಲಿ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಹೀಗೆ ಹತ್ತು ಹಲವು ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಆಡಳಿತ ವಿಕೇಂದ್ರಿಕರಣದ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಮಾದರಿಯಾಗಿದೆ. ಇಂದು ನವೋದ್ಯಮಗಳು ಬೆಂಗಳೂರನ್ನು ʼಹಾಟ್ ಸ್ಪಾಟ್ʼ ಆಗಿ ಪರಿಗಣಿಸಿ ಆಯ್ಕೆ ಮಾಡಿಕೊಳ್ಳುತ್ತಿವೆ. ಬೆಂಗಳೂರಲ್ಲೇ 13 ಸಾವಿರ ಹೊಸ ಕಂಪನಿಗಳಿವೆ. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚಿದೆ. ಆರ್ & ಡಿ ಮೂಲಕ ಆರಂಭವಾಗಿ ಎಲ್ಲಾ ರೀತಿಯಲ್ಲೂ ಮಾನವ ಸಂಪನ್ಮೂಲ ಸದ್ಬಳಕೆಯಾಗುತ್ತಿದೆ. ಉತ್ತಮ ಆಡಳಿತದಲ್ಲಿ ಹೊಣೆಗಾರಿಕೆ, ದಕ್ಷತೆ, ಪರಿಣಾಮಕಾರಿತ್ವ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ಸುಧಾರಿಸಿದರೆ, ದೇಶ ಸುಧಾರಿಸುತ್ತದೆ. ಜನರ ಆರೋಗ್ಯವೇ ಬಹುಮುಖ್ಯ. ಫಿಟ್ ಇಂಡಿಯಾದಿಂದ ಮಾತ್ರ ಹೊಸ ಭಾರತ ಸೃಷ್ಟಿಯಾಗುತ್ತದೆ ಎಂದರು.












Click it and Unblock the Notifications