ಬೇರೆ ಯಾರೂ ಸಿಗದಿದ್ದಕ್ಕೆ ಜಗ್ಗೇಶ್ಗೆ ಟಿಕೆಟ್ ಕೊಟ್ಟಿದ್ದೆವು: ಶೋಭಾ ಕರಂದ್ಲಾಜೆ
ಬೆಂಗಳೂರು, ನವೆಂಬರ್ 16: ಯಶವಂತಪುರ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಟ ಜಗ್ಗೇಶ್ ಅವರಿಗೂ ಯಶವಂತಪುರ ಕ್ಷೇತ್ರಕ್ಕೆ ಸಂಬಂಧವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಜಿಗಿದಿರುವ ಅನರ್ಹ ಶಾಸಕ ಎಸ್. ಟಿ. ಸೋಮಶೇಖರ್ ಅವರಿಗೆ ಟಿಕೆಟ್ ನೀಡಿರುವುದು ಜಗ್ಗೇಶ್ ಅವರಲ್ಲಿ ಬೇಸರ ಮೂಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಆಪ್ತರ ಬಳಿ ಅಸಮಾಧಾನ ಹಂಚಿಕೊಂಡಿದ್ದರು.
ನಗರದ ಡಾಲರ್ಸ್ ಕಾಲೋನಿಯಲ್ಲಿ ಶನಿವಾರ ಮಾತನಾಡಿದ ಶೋಭಾ ಕರಂದ್ಲಾಜೆ, ಯಶವಂತಪುರ ಕ್ಷೇತ್ರಕ್ಕೂ, ಜಗ್ಗೇಶ್ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ಸ್ವಂತ ಕ್ಷೇತ್ರವೂ ಇಲ್ಲ ಎಂದು ಹೇಳಿದರು.
ತನ್ನ ಬಿಟ್ಟು ಮಹೇಶ್ ಕುಮಟಳ್ಳಿಗೆ ಟಿಕೆಟ್: ಲಕ್ಷ್ಮಣ ಸವದಿ ಏನಂದ್ರು?
ಈ ಹಿಂದೆ ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದ ಜಗ್ಗೇಶ್, ಬಳಿಕ ಬಿಜೆಪಿ ಸೇರಿಕೊಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ 59,308 ಮತಗಳನ್ನು ಪಡೆದಿದ್ದ ಅವರು ಮೂರನೇ ಸ್ಥಾನ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಅವರು 1,15,273 ಮತಗಳನ್ನು ಪಡೆದು ಜಯಗಳಿಸಿದ್ದರು.
ಅಭ್ಯರ್ಥಿ ಸಿಗದ ಕಾರಣ ಜಗ್ಗೇಶ್ಗೆ ಟಿಕೆಟ್
ಕಳೆದ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಕೊನೆಯ ಗಳಿಗೆಯಲ್ಲಿ ಜಗ್ಗೇಶ್ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಆದರೂ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಹೆಚ್ಚು ಓಡಾಡಲಿಲ್ಲ. ಪಕ್ಷದ ಪರವಾಗಿ ಪ್ರಚಾರದಲ್ಲಿ ಕೆಲಸ ಮಾಡಿದರೆ ಯಶವಂತಪುರ ಕ್ಷೇತ್ರವಲ್ಲದೆ ಇತರೆ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಪ್ರಯೋಜನವಾಗುತ್ತದೆ ಎಂದು ಶೋಭಾ ಹೇಳಿದರು.
ಅನರ್ಹರಿಗೆ ಅಗ್ನಿಪರೀಕ್ಷೆ; ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಆಟ ಬಲ್ಲೋರಾರು?
ಸೋಮಶೇಖರ್ ಸೇರ್ಪಡೆಯಿಂದ ಬಲ
'ಈ ಹಿಂದೆ ಯಶವಂತಪುರ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದರು. ಈಗ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಎಸ್ ಟಿ ಸೋಮಶೇಖರ್ ಅವರು ಬಿಜೆಪಿ ಅಭ್ಯರ್ಥಿ. ಅವರು ಬಿಜೆಪಿ ಸೇರಿಕೊಂಡಿದ್ದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಪಕ್ಷದ ತಳಮಟ್ಟದ ಕಾರ್ಯಕರ್ತರು ಮತ್ತು ಎಸ್ ಟಿ ಸೋಮಶೇಖರ್ ಅವರ ಬೆಂಬಲಿಗರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪಕ್ಷಕ್ಕೆ ನಿಷ್ಠೆಯಿಂದ ಕೆಲಸ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಜಗ್ಗೇಶ್, ಪಕ್ಷಕ್ಕಾಗಿ ಕೆಲಸ ಮಾಡುವಂತೆ ಯಡಿಯೂರಪ್ಪ ಅವರು ನಮಗೆಲ್ಲರಿಗೂ ಆದೇಶಿಸಿದ್ದಾರೆ. ನಮಗೆ ಈ ಚುನಾವಣೆಯಲ್ಲಿ ಯಾವುದೇ ಆಕಾಂಕ್ಷೆಗಳಿಲ್ಲ. ನಾವು ಪಕ್ಷದ ಸೈನಿಕರಂತೆ. ಕೊಟ್ಟ ಕೆಲಸವನ್ನು ಪಕ್ಷಕ್ಕೆ ನಿಷ್ಠೆಯಿಂದ ಮಾಡುತ್ತೇವೆ. ನಮ್ಮಲ್ಲಿ ರಾಜಕೀಯ ನಿರೀಕ್ಷೆಗಳಿರುತ್ತವೆ. ಅವುಗಳನ್ನು ಪಕ್ಕಕ್ಕಿಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ಉಪಚುನಾವಣಾ ಕಣ: ಶಿವಾಜಿನಗರ ಕ್ಷೇತ್ರದಿಂದ ಟಬು ದಿನೇಶ್ ಗುಂಡೂರಾವ್ ಅಭ್ಯರ್ಥಿ?
ಹೆಗಲ ಮೇಲೆ ಕೈಹಾಕಿ ಬೆಂಬಲ
ರೈತ ಪರ ಕೆಲಸ ಮಾಡುತ್ತಿರುವ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅದಕ್ಕಾಗಿ ನಾವು ಸೋಮಶೇಖರ್ ಅವರಿಗೆ ಬೆಂಬಲ ನೀಡುತ್ತೇವೆ. ಎಸ್ ಟಿ ಸೋಮಶೇಖರ್ ಅವರು ಮೊದಲು ನಮಗೆ ಎದುರಾಳಿಯಾಗಿದ್ದರು. ಎದುರಾಳಿ ಮುಂದೆ ನಿಂತಾಗ ಹೋರಾಟ ಮಾಡಬೇಕು. ಪಕ್ಕಕ್ಕೆ ಬಂದಾಗ ಹೆಗಲ ಮೇಲೆ ಕೈಹಾಕಿ ಅವರಿಗೆ ಬೆಂಬಲ ನೀಡಬೇಕು. ಬಿಜೆಪಿ ಒಂದು ದೊಡ್ಡ ಮರ. ಅದನ್ನು ಕಡಿಯಬೇಡಿ. ನಾವು ಪಕ್ಷಿಗಳಂತೆ. ನಮಗೆ ಅದು ನೆರಳಾಗಿರುತ್ತದೆ. ಸಮಯ ಬಂದಾಗ ನಮಗೆ ಹಣ್ಣು ಕೊಡುತ್ತದೆ ಎಂದರು.