ಯುನೈಟೆಡ್ ಬೆಂಗಳೂರು ದೂರಿನ ಪರಿಶೀಲನೆ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ
ಬೆಂಗಳೂರು, ಆಗಸ್ಟ್ 2 : ಭಾರತದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಗರ ಅನಿಸಿಕೊಳ್ಳಲು ಸಾಧ್ಯವಿರುವುದು ಬೆಂಗಳೂರಿಗೆ ಮಾತ್ರ. ಆದರೆ ವಿಪರ್ಯಾಸ ಏನೆಂದರೆ, ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಕೆಲಸ ಮಾಡುವಂತೆ ನೆನಪಿಸಬೇಕು ಹಾಗೂ ಬಲವಂತ ಮಾಡಬೇಕು. ಆಗಷ್ಟೇ ಈ ನಗರದ ಬಗ್ಗೆ ಒಂದು ಭರವಸೆ ಇರಿಸಿಕೊಳ್ಳಬಹುದು.
-ಹೀಗೆ ಬೆಂಗಳೂರಿನ ಪರಿಸ್ಥಿತಿಯನ್ನು ತೆರೆದಿಟ್ಟವರು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ. ಬೆಂಗಳೂರಿನ ಇಪ್ಪತ್ತೈದು ಕೆರೆಗಳ ಒತ್ತುವರಿ ಹಾಗೂ ಮಾಲಿನ್ಯದ ಬಗ್ಗೆ ಯುನೈಟೆಡ್ ಬೆಂಗಳೂರು ದೂರು ನೀಡಿತ್ತು. ಆ ದೂರಿನ ಬಗ್ಗೆ ಈ ವರ್ಷದ ಆರಂಭದಲ್ಲಿ ವಿಚಾರಣೆ ನಡೆಸಿದ್ದ ಅವರು ಕಾನೂನು ಪಾಲನೆ ಆಗುತ್ತಿದೆಯಾ ಎಂದು ಮತ್ತೊಮ್ಮೆ ಪರಿಶೀಲಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಗುರುವಾರ ಬೈರಮಂಗಲ ಜಲಾಶಯ, ವೃಷಭಾವತಿ, ಸಾರಕ್ಕಿ ಕೆರೆ, ಸುಬ್ರಮಣ್ಯಪುರ ಹಾಗೂ ತಲಘಟ್ಟಪುರ ಕೆರೆಗಳ ಸದ್ಯದ ಸ್ಥಿತಿ ಬಗ್ಗೆ ಪರಿಶೀಲಿಸಿದರು.

ವರ್ಷದ ಆರಂಭದಲ್ಲಿ ಈ ಎಲ್ಲ ಕಡೆ ಅವರು ಭೇಟಿ ನೀಡಿದ್ದರು. ಈ ಕೆರೆಗಳನ್ನು ಪ್ರತಿನಿಧಿಸುವವರು ಹಾಜರಿದ್ದು, ಅಧಿಕಾರಿಗಳು ಕೈಗೊಳ್ಳುತ್ತಿರುವ ಚಟುವಟಿಕೆಗಳ ಮಾಹಿತಿ ನೀಡಿದರು. ಇದೇ ವೇಳೆ, ಮುಂದಿನ ತಿಂಗಳು ಸೆಪ್ಟೆಂಬರ್ ಹನ್ನೊಂದರಂದು ವಿಚಾರಣೆ ಇದ್ದು, ಏನು ಪ್ರಗತಿ ಆಗಿದೆ ಎಂಬುದರ ವರದಿ ನೀಡುವಂತೆ ತಿಳಿಸಿದರು.
ಬೈರಮಂಗಲ ಜಲಾಶಯ ಹಾಗೂ ವೃಷಭಾವತಿ ಕಣಿವೆ ಪ್ರದೇಶದಲ್ಲಿ ಯಾವ ಬದಲಾವಣೆ ಆಗಿಲ್ಲ. ಅಲ್ಲಿ ಸುತ್ತಮುತ್ತಲು ವಾಸಿಸುವವರು ಕಲುಷಿತವಾದ ಅಂತರ್ಜಲವನ್ನೇ ಸೇವಿಸುತ್ತಿದ್ದಾರೆ. ಅಷ್ಟೇ ಅಲ್ಲ, ಜಲಾಶಯದ ಸುತ್ತಮುತ್ತಲ ಮಣ್ಣು ಕೂಡ ಕಲ್ಮಶವಾಗಿದೆ. ಇದರಿಂದ ಕ್ಯಾನ್ಸರ್ ನಂಥ ಕಾಯಿಲೆ ಬರಬಹುದು ಎಂಬ ವರದಿ ನೀಡಲಾಗಿದೆ.
ವಿವಿಧ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗಿದೆ.
ಇನ್ನು ಸಾರಕ್ಕಿ ಕೆರೆಯ ಅಭಿವೃದ್ಧಿ ಕೆಲಸಗಳು ತೃಪ್ತಿಕರವಾಗಿವೆ ಎಂದು ಸ್ಥಳೀಯರೇ ತಿಳಿಸಿದ್ದಾರೆ. ಆದರೆ ಬೇಲಿ ಹಾಕುವ ಕೆಲಸ ಪೂರ್ತಿಯಾಗಿಲ್ಲ. ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯವರು ಹಾಜರಿದ್ದು, ಈ ಕೆಲಸಗಳನ್ನು ಪೂರ್ತಿ ಮಾಡುವುದಕ್ಕೆ ಹತ್ತು ದಿನಗಳ ಕಾಲಾವಕಾಶ ಕೇಳಿದ್ದಾರೆ.
ಸುಬ್ರಮಣ್ಯಪುರ ಕೆರೆ ಸುತ್ತಮುತ್ತ ಕೊಳಚೆ ಪ್ರದೇಶದಲ್ಲಿ ವಾಸಿಸುವ ಶೇಕಡಾ ಐವತ್ತರಷ್ಟು ಮಂದಿಗೆ ಮಾತ್ರ ವಸತಿ ಒದಗಿಸಲು ಸಾಧ್ಯ ಎಂದು ವಸತಿ ಇಲಾಖೆ ತಿಳಿಸಿದೆ. ಇನ್ನು ಲೋಕಾಯುಕ್ತರು ಭೇಟಿ ನೀಡಿದ ಆರು ತಿಂಗಳ ನಂತರ ಕೂಡ ವಾಸ್ತವಾಂಶದ ವರದಿ ನೀಡಲು ಕಂದಾಯ ಇಲಾಖೆಗೆ ಸಾಧ್ಯವಾಗಿಲ್ಲ. ಲೋಕಾಯುಕ್ತರು ಎರಡೂ ಇಲಾಖೆಗೆ ವರದಿ ಸಲ್ಲಿಸುವಂತೆ ಒಂದು ವಾರದ ಕಾಲಾವಕಾಶ ನೀಡಿದರು.
ತಲಘಟ್ಟಪುರ ಕೆರೆ ಪರಿಶೀಲನೆ ವೇಳೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಹಾಜರಿಲ್ಲದ ಕಾರಣ ವಿಶ್ವನಾಥ್ ಶೆಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ವಿಚಾರಣೆ ವೇಳೆ ಹಾಜರಿರಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಅಧಿಕಾರಿಗಳು ಹೆಚ್ಚು ಸಮಯ ಬೇಕು ಅಂತಷ್ಟೇ ಕೇಳ್ತಾರೆ. ಆದರೆ ಕೆಲಸ ಮುಗಿಸುವ ಹಾಗೆ ಕಾಣಲ್ಲ. ಬೆಂಗಳೂರಲ್ಲಿ ಬೇಕಾದಷ್ಟು ಕೆರೆಗಳಿವೆ. ಆ ಪೈಕಿ ಹತ್ತನ್ನಾದರೂ ಜೀರ್ಣೋದ್ಧಾರ ಮಾಡಿದರೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಬಗೆಹರಿಸಿಕೊಂಡಂತೆ ಆಗುತ್ತದೆ. ಕಾವೇರಿ ನೀರಿನ ಮೇಲೆ ಹೆಚ್ಚು ಅವಲಂಬನೆ ಬೇಕಿರಲ್ಲ ಎಂದರು.
ನಮ್ಮ ಬೆಂಗಳೂರು ಫೌಂಡೇಷನ್ ನ ಸಿಇಒ ಶ್ರೀಧರ್ ಪಬ್ಬಿಸೆಟ್ಟಿ, ಅಧಿಕಾರಿಗಳಿಗೆ ಎಲ್ಲವನ್ನೂ ಲೋಕಾಯುಕ್ತರೇ ಹೇಳಿ ಮಾಡಿಸಬೇಕು ಅನ್ನೋ ಪರಿಸ್ಥಿತಿ ಇದೆ. ಯಾವುದನ್ನೂ ಸ್ವಂತ ತೋಚಿಕೊಂಡು ಮಾಡೋದಿಲ್ಲ. ಈ ಕೆರೆಗಳು ಇಂದಿನ ಸ್ಥಿತಿಯಾದರೂ ತಲುಪಿರುವುದಕ್ಕೆ ಲೋಕಾಯುಕ್ತರ ಮಧ್ಯಪ್ರವೇಶವೇ ಕಾರಣ. ಇಂದಿನ ವಿಚಾರಣೆ ನಂತರ ಇತರ ಕೆರೆಗಳನ್ನು ಕೂಡ ಅಭಿವೃದ್ಧಿ ಪಡಿಸಬಹುದು ಎಂಬ ಭರವಸೆ ಮೂಡಿದೆ ಎಂದು ಹೇಳಿದರು.












Click it and Unblock the Notifications