ಮಂಗಳಯಾನ: ಚೀನಾ ಹಿಂದಿಕ್ಕಿದ ಭಾರತ
ಬೆಂಗಳೂರು, ಡಿ.1: ಭಾರತದ ಮಹತ್ವಾಕಾಂಕ್ಷೆಯ ಮಾರ್ಸ್ ಆರ್ಬಿಟರ್ ಭಾನುವಾರ ಮುಂಜಾನೆ ಭೂಮಿಯ ಕಕ್ಷೆಯನ್ನು ಬಿಟ್ಟು ಮಂಗಳನತ್ತ ಹಾದಿ ಹಿಡಿಯುವ ಮೂಲಕ ತನ್ನ ಪಯಣದ ನಿರ್ಣಾಯಕ ಹಂತವನ್ನು ಯಶಸ್ವಿಯಾಗಿ ದಾಟಿದೆ. ಹೀಗಾಗಿ, ಮಂಗಳಯಾನದ ಪ್ರಮುಖ ಸ್ಪರ್ಧಿ ಚೀನಾವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ ಎಂದು ಹೆಮ್ಮೆಯಿಂದ ಘೋಷಿಸಬಹುದಾಗಿದೆ.
2014ರ ಸೆಪ್ಟೆಂಬರ್ ನಲ್ಲಿ ಮಂಗಳನ ಕಕ್ಷೆಗೆ ಸೇರಿಕೊಳ್ಳಲಿರುವ ಈ ಉಪಗ್ರಹ ಯಾವುದೇ ಅಡೆತಡೆಗಳಿಲ್ಲದೆ ನಿಗದಿಯಂತೆ ಮುನ್ನುಗ್ಗುತ್ತಿದೆ. ಇದರಿಂದಾಗಿ ಬಾಹ್ಯಾಕಾಶ ಕಾರ್ಯಕ್ರಮದ ಕೆಲವೇ ಮುಂಚೂಣಿ ರಾಷ್ಟ್ರಗಳಾದ ಅಮೆರಿಕ, ಯೂರೋಪ್, ರಷ್ಯಾಗಳ ಸಾಲಿನಲ್ಲಿ ಭಾರತ ನಿಲ್ಲುವಂತೆ ಮಾಡಿದೆ.
ನಿರ್ದಿಷ್ಟ ವೇಗದೊಂದಿಗೆ ಭೂಮಿಯ ಕಕ್ಷೆ ಬಿಟ್ಟು ತೆರಳಲು ಅನುವಾಗುವಂತೆ ಮಾರ್ಸ್ ಆರ್ಬಿಟರ್(MOM) ನ್ನು ವ್ಯೋಮ ನೌಕೆಯು ಭಾನುವಾರ ಮುಂಜಾನೆ ಉಡಾಯಿಸಿತು. 2014ರ ಸೆಪ್ಟೆಂಬರ್ 24ರಂದು ಮಂಗಳನ ಕಕ್ಷೆಗೆ ತಲುಪಲು ಕ್ರಮಿಸಬೇಕಾಗಿರುವ ಅಂತರ 680 ಮಿಲಿಯನ್ ಕಿ.ಮೀ (422 ಮಿಲಿಯನ್ ಮೈಲುಗಳು) ಕ್ರಮಿಸಲು ಆರ್ಬಿಟರ್ ಈಗ ಸರಿಯಾದ ವೇಗವನ್ನು ತೆಗೆದುಕೊಂಡಿದೆ.

ಮಂಗಳಯಾನ ಎಂಬ ಅಭಿಧಾನದಲ್ಲಿ ಸಿದ್ಧಪಡಿಸಲಾಗಿರುವ ಮಾರ್ಸ್ ಆರ್ಬಿಟರ್ ಮಿಷನ್ ಕೆಂಪು ಗ್ರಹವನ್ನು ತಲುಪಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಅಗತ್ಯ ತಂತ್ರಜ್ಞಾನ ಅಳವಡಿಸಲಾಗಿದೆ.
ಇಂದಿನ ಈ ಬೆಳವಣಿಗೆಯಿಂದ ಮಾರ್ಸ್ ಆರ್ಬಿಟರ್ ತನ್ನ ಭೂ ಕಕ್ಷೆಯ ಪಯಣವನ್ನು ಪೂರೈಸಿದ್ದು, ಇನ್ನು ಸುಮಾರು 10 ತಿಂಗಳುಗಳ ಕಾಲ ಸೂರ್ಯನ ಸುತ್ತ ಪರಿಭ್ರಮಿಸಿ ನಂತರ ಅಂಗಾರಕ ಕಕ್ಷೆಯನ್ನು ಸೇರಲಿದೆ.
ಭೂ ಕಕ್ಷೆಯನ್ನು ದಾಟಿ ಹೋಗುವ ಮಾರ್ಸ್ ಆರ್ಬಿಟರ್ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿರುವುದು ಮಂಗಳಯಾನ ಕಾರ್ಯಕ್ರಮದ ಬಗ್ಗೆ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಹೇಳಿದ್ದಾರೆ.
ನಿಗದಿಯ ಪ್ರಕಾರ ಹಲ ಉಡ್ಡಯನ ಯಂತ್ರಗಳು ಸಿಡಿಯುವ ಮೂಲಕ, ನ.5ರಂದು ಉಡಾಯಿಸಲಾದ ಮಾರ್ಸ್ ಆರ್ಬಿಟರ್ ಭೂಮಿಯ ಕಕ್ಷೆಯಲ್ಲಿನ ತನ್ನ ನಿರ್ದಿಷ್ಟ ಪರಿಭ್ರಮಣದ ನಂತರ ಮಂಗಳನತ್ತ ತೆರಳಲು ಇಲ್ಲಿಯವರೆಗೂ ಪ್ರಗತಿಯಲ್ಲೇ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾರ್ಸ್ ಆರ್ಬಿಟರ್ ಉಡ್ಡಯನದ ಬಳಿಕ ಅದು ಮುಂದುವರಿಯಲು ಇಂಧನ ಕೊರತೆ ಎದುರಾಗಬಹುದೆಂಬ ಅನುಮಾನವಿತ್ತಾದರೂ ನಂತರದ ದಿನಗಳಲ್ಲಿ ಅದನ್ನು ಸರಿಪಡಿಸಲಾಯಿತು. ಹಾಗಾಗಿ ಇನ್ನು ಮುಂದಿನ ಅದರ ಕಾರ್ಯಾಚರಣೆ ತೊಂದರೆಯಿಲ್ಲದೆ ನಡೆಯಲಿದೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ವಿ.ಕೋಟೇಶ್ವರ ರಾವ್ ತಿಳಿಸಿದ್ದಾರೆ.












Click it and Unblock the Notifications