ಅಪಹರಣ ಹಿಂದೆ ಮಹಾರಾಷ್ಟ್ರದ ಫಾರಂ ವ್ಯವಹಾರ ಲಿಂಕ್ !
ಬೆಂಗಳೂರು, ಡಿಸೆಂಬರ್ 02: ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಅಪಹರಣದ ಹಿಂದೆ ಭಯಾನಕ ಸಂಗತಿಯೊಂದು ಹೊರ ಬಿದ್ದಿದೆ. ಕೋಲಾರದ ಬೆಗ್ಲಿಯಲ್ಲಿ ಪ್ರಾರಂಭಿಸಿದ್ದ ರಕ್ಷಿತ್ ಫಾರಂಗೆ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಯ ಫಾರಂನಿಂದ ಹಸುಗಳನ್ನು ತರಿಸಲಾಗಿತ್ತು. ಆ ಹಸುಗಳಿಗೆ ನೀಡಬೇಕಿದ್ದ ಸುಮಾರು 30 ಕೋಟಿ ರೂಪಾಯಿ ಪ್ರಕಾಶ್ ಕೊಟ್ಟಿರಲಿಲ್ಲ. ಈ ವಿಚಾರವಾಗಿ ಸಾಕಷ್ಟು ಬಾರಿ ಜಗಳವಾಗಿತ್ತು. ಹಣ ವಾಪಸು ಪಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಗ್ಯಾಂಗ್ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟರೇ ಎಂಬ ಸಂಶಯ ವ್ಯಕ್ತವಾಗಿದೆ. ಈ ಆಯಾಮದಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕೋಲಾರ ಶಾಸಕರಾಗಿದ್ದ ವರ್ತೂರು ಪ್ರಕಾಶ್, ಬಂಗಾರಪೇಟೆ ರಸ್ತೆಯಲ್ಲಿ ಮನೆ ಮಾಡಿದ್ದರು. ಬಾಡಿಗೆ ಕೊಡದ ಕಾರಣ ಖಾಲಿ ಮಾಡಿಸಿದ್ದರಿಂದ ಕೆಲ ವರ್ಷಗಳ ಹಿಂದೆ ಕೋಗಿಲುಹಳ್ಳಿ ಎಂಬಲ್ಲಿ ಮನೆ ಮಾಡಿದ್ದರು. ಬೆಗ್ಲಿ ಹೊಸಹಳ್ಳಿ ಸಮೀಪ ನೂರು ಎಕರೆ ಜಾಗದಲ್ಲಿ ಹಸು ಫಾರಂ ಮಾಡಿದ್ದರು. ಆರಂಭದಲ್ಲಿ ಒಂದು ಸಾವಿರ ಹಸು ತರಿಸಿದ್ದರು. ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಯೊಬ್ಬರ ಫಾರಂನಿಂದ ಹಸುಗಳನ್ನು ತರಿಸಿದ್ದರು. ಅಲ್ಲದೇ ಡೈರಿಗೆ ಬೇಕಿದ್ದ ಯಂತ್ರೋಪಕರಣಗಳನ್ನು ಮುಂಬಯಿ ಮೂಲದ ಕಂಪನಿಯಿಂದ ತರಿಸಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಹಸುಗಳಲ್ಲಿ ಬ್ಲೂಸೆರ್ ಲೋಸಿಸ್ಕ್ ಎಂಬ ಭಯಾನಕ ಕಾಯಿಲೆ ಕಾಣಿಸಿಕೊಂಡಿತ್ತು. ಸುಮಾರು ಮೂರು ಸಾವಿರ ಲೀಟರ್ ಹಾಳು ಬೆಗ್ಲಿ ಹೊಸಹಳ್ಳಿ ಡೈರಿಗೆ ಹಾಕುತ್ತಿದ್ದರು. ಕಾಯಿಲೆ ಕಾಣಿಸಿಕೊಂಡ ಬಳಿಕ ಹಸುಗಳ ಬಗ್ಗೆ ಪಶು ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ್ದರು.
ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ
ಹಸುಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಈ ಕಾಯಿಲೆ ಕಾಣಿಸಿಕೊಂಡಿತ್ತು. ಈ ಹಸುವಿನ ಹಾಲು ಕುಡಿದರೂ ಕಾಯಿಲೆ ಬರುತ್ತೆ ಎಂಬ ಅಂಶ ಬೆಳಕಿಗೆ ಬಂದ ಕೂಡಲೇ ಹಸುಗಳಿಗೆ ದಯಾ ಮರಣ ನೀಡುವಂತೆ ಸಹ ಸೂಚಿಸಿದ್ದರು. ಮಹಾರಾಷ್ಟ್ರದಿಂದ ತರಿಸಿದ್ದ ಹಸುಗಳಿಗೆ ವರ್ತೂರು ಪ್ರಕಾಶ್ ಹಣ ಪಾವತಿ ಮಾಡಿರಲಿಲ್ಲ. ಈ ವಿಚಾರವಾಗಿ ಅನೇಕ ಸಲ ಗಲಾಟೆ ಕೂಡ ನಡೆದಿತ್ತು ಎಂಬ ಮಾಹಿತಿಯನ್ನು ಸ್ಥಳೀಯರು ಒನ್ ಇಂಡಿಯಾ ಕನ್ನಡಗೆ ತಿಳಿಸಿದ್ದಾರೆ. ಫಾರಂ ಹೌಸ್ ನಲ್ಲಿ ಈಗಲೂ ಹಸುಗಳಿದ್ದು, ಅಲ್ಲಿ ಸಾಕಷ್ಟು ಜನ ಕೆಲಸ ಮಾಡುವರು ಇದ್ದಾರೆ. ಆದರೆ ಅಪಹರಣ ಹೇಗಾಯಿತು ಗೊತ್ತಿಲ್ಲ. ಹಣಕಾಸಿನ ವಿಚಾರವಾಗಿ ಆಗಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಥಳೀಯರು.
ನೂರು ಎಕರೆ ಪ್ರದೇಶದಲ್ಲಿ ವರ್ತೂರು ಪ್ರಕಾಶ್ ಅವರ ರಕ್ಷಿತ್ ಫಾರಂ ಇದೆ. ಈಗಲೂ ಸುಮಾರು ಐದು ನೂರು ಹಸುಗಳಿವೆ. ಕುರಿ, ನಾಟಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಸುಮಾರು ನಲವತ್ತು ಎಕರೆಯಲ್ಲಿ ತರಕಾರಿ ಬೆಳೆದಿದ್ದಾರೆ. ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿ ಅಲ್ಲಿ ಕೆಲಸ ಮಾಡುತ್ತಾರೆ. ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವರ್ತೂರು ಪ್ರಕಾಶ್ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕರೋನಾ ಬಂದ ಮೇಲಂತೂ ಒಬ್ಬರೇ ಫಾರಂ ಹೌಸ್ನಲ್ಲಿ ಒಡಾಡಿಕೊಂಡಿದ್ದರು. ದಿನ ನಿತ್ಯ ತೋಟದಲ್ಲಿ ಅವರೂ ಸಹ ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಅವರನ್ನು ಹಣಕ್ಕಾಗಿ ಅಪಹರಣ ಮಾಡುವ ಸಾಧ್ಯತೆಯೇ ಇಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಆರಂಭದಲ್ಲಿ ಸುಮಾರು 20 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಸ್ಥಳೀಯ ನಗರ ಸಭೆಯ ಸದಸ್ಯರಾಗಿದ್ದವರೇ ಡೈರಿ ನೋಡಿಕೊಳ್ಳುತ್ತಿದ್ದರು. ಮಹಾರಾಷ್ಟ್ರದಿಂದ ಯಂತ್ರೋಪಕರಣ ಹಾಗೂ ಹಸುಗಳನ್ನು ತರಿಸಿದ್ದು, ಕೋಟ್ಯಂತರ ರೂಪಾಯಿ ಬಾಕಿ ಇಟ್ಟುಕೊಂಡಿದ್ದರು. ಹಣ ಪಾವತಿ ಮಾಡಿಲ್ಲ ಎಂಬ ಸಂಗತಿ ಇಡೀ ಅವರ ಆಪ್ತ ವಲಯದಲ್ಲಿ ಗೊತ್ತಿತ್ತು. ಹಣ ವಾಪಸು ಕೇಳುವ ವಿಚಾರವಾಗಿ ಮಹಾರಾಷ್ಟ್ರದಿಂದ ಬಂದವರು ಈ ಕೃತ್ಯ ಮಾಡಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಇದೇ ಆಯಾಮದಲ್ಲಿ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.
ನಾನು ಗನ್ ಪಾಯಿಂಟ್ ನಲ್ಲಿದ್ದೆ : ವರ್ತೂರು ಪ್ರಕಾಶ್ ಹೇಳಿಕೆ
ಸ್ಥಳೀಯ ಜನ ಪ್ರತಿನಿಧಿಗಳಿಗೆ ಕರೆ: ಅಪಹರಣಕ್ಕೆ ಒಳಗಾದ ಬಳಿಕ ವರ್ತೂರು ಪ್ರಕಾಶ್ ಕೋಲಾರದ ತನ್ನ ಆಪ್ತ ಜನ ಪ್ರತಿನಿಧಿಗಳಗೆ ನೂರಾರು ಮೊಬೈಲ್ ಕರೆ ಮಾಡಿದ್ದಾರೆ. ಉತ್ತನೂರಿನ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಅವರಿಗೆ ನಲವತ್ತು ಸಲ ಕರೆ ಮಾಡಿ 25 ಲಕ್ಷ ರೂಪಾಯಿ ತುರ್ತಾಗಿ ನೀಡುವಂತೆ ಕೇಳಿದ್ದಾರೆ. ಅಲ್ಲದೇ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜು ಸೇರಿದಂತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ನ ಸದಸ್ಯರಿಗೆ ಕರೆ ಮಾಡಿ ವರ್ತೂರು ಪ್ರಕಾಶ್ ಹಣ ಕೇಳಿದ್ದಾರೆ. ಇಬ್ಬರಿಂದ ಪಡೆದ ಐವತ್ತು ಲಕ್ಷ ರೂಪಾಯಿ ಅಪಹರಣಕಾರರಿಗೆ ನೀಡಿದ್ದಾರೆ. ಮೂರು ದಿನ ಅಪಹರಣಕಾರರ ಒತ್ತೆಯಾಳಾಗಿದ್ದ ವರ್ತೂರು ಪ್ರಕಾಶ್ ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಮೊಬೈಲ್ ಬಳಕೆ ಮಾಡಿದರೆ ನಾವು ಸಿಕ್ಕಿ ಬೀಳುತ್ತೇವೆ ಎಂಬ ಭಯ ಇಲ್ಲದೇ ಅಪಹರಣಕಾರರು ಮೊಬೈಲ್ ಕರೆ ಮಾಡಲು ಅವಕಾಶ ಕೊಟ್ಟಿರುವ ವಿಚಾರ ನೋಡಿದರೆ ಇದು ಹಣಕಾಸಿನ ವಹಿವಾಟಿನ ಹಿಂದೆ ನಡೆದಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.
ಆಂಧ್ರದ ಮಹಿಳೆ ದೂರ : ಇನ್ನು ವರ್ತೂರು ಪ್ರಕಾಶ್ ಶಾಸಕರಾಗಿದ್ದ ವೇಳೆ ಅವರ ಬಹುತೇಕ ಕೆಲಸಗಳನ್ನು ಆಂಧ್ರ ಪ್ರದೇಶ ಮೂಲದ ಮಹಿಳೆಯೊಬ್ಬಳು ನೋಡಿಕೊಳ್ಳುತ್ತಿದ್ದರು. ಆದರೆ ಶಾಸಕರಾಗಿದ್ದ ವೇಳೆ ವರ್ತೂರು ಪ್ರಕಾಶ್ ಅವರಿಗೆ ಮೋಸ ಮಾಡಿ ಆಕೆ ಪರಾರಿಯಾಗಿದ್ದಳು. ಈ ವೇಳೆಯೂ ಸಹ ಶಾಸಕರ ಕೆಲ ವಿಚಾರಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಳು ಎಂಬ ಮಾತು ಕೇಳಿ ಬಂದಿದ್ದವು. ಪ್ರಕಾಶ್ ಅವರೊಂದಿಗೆ ಅನೋನ್ಯವಾಗಿದ್ದ ಮಹಿಳೆ ಕೆಲ ವರ್ಷಗಳ ಹಿಂದೆಯೇ ದೂರವಾಗಿದ್ದರು. ಆ ಮಹಿಳೆ ಕಡೆಯಿಂದ ಈ ಕೃತ್ಯ ಆಗಿರುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಈ ಆಯಾಮದ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ ಎಂಬ ಸಂಗತಿ ಗೊತ್ತಾಗಿದೆ.
ಹಿಗ್ಗಾ ಮುಗ್ಗಾ ಹಲ್ಲೆ : ವರ್ತೂರು ಪ್ರಕಾಶ್ ಅವರಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ಕೋಲಾರ, ಮಾಲೂರು ಸುತ್ತ ಮುತ್ತ ತಿರುಗಾಡಿಸಿದ್ದಾರೆ. ಎರಡು ಕಾರಿನಲ್ಲಿ ಬಂದಿರುವ ಎಂಟು ಮಂದಿ ಅಪಹರಣಕಾರರು ಈ ಕೃತ್ಯ ಎಸಗಿರುವುದು ನೋಡಿದರೆ, ಬಾಂಬೆ ಮೂಲದ ಗ್ಯಾಂಗ್ ಹಣ ವಸೂಲಿಗಾಗಿ ಅಪಹರಿಸಿತ್ತೇ ಎಂಬ ದಟ್ಟ ಅನುಮಾನಗಳು ಕಾಡುತ್ತಿವೆ.