ಬೇಸಿಗೆ ಎದುರಿಸಲು ಜಲಮಂಡಳಿ ಸಿದ್ಧವಿದೆಯೇ? ಏನೆಲ್ಲಾ ತಯಾರಿ
ಬೆಂಗಳೂರು, ಫೆಬ್ರವರಿ 26: ಈ ವರ್ಷ ಬೆಂಗಳೂರು ಚಳಿಯನ್ನೇ ಕಾಣಲಿಲ್ಲವೆಂದರೂ ಆಶ್ಚರ್ಯವಿಲ್ಲ. ಆದರೆ ಸೆಕೆ ಮಾತ್ರ ಜೋರಾಗಿಯೇ ಇದೆ.
ಮುಂದಿನ ಮೂರು ತಿಂಗಳು ಬೆಂಗಳೂರಲ್ಲಿ ಅತಿಯಾದ ತಾಪಮಾನವಿರಲಿದ್ದು, ನೀರಿನ ಸಮಸ್ಯೆ ಎದುರಿಸಲು, ಬೇಸಿಗೆ ಎದುರಿಸಲು ಜಲಮಂಡಳಿ ಸಜ್ಜಾಗಿದೆ.
ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬೆಂಗಳೂರಲ್ಲಿ ಬೇಸಿಗೆ ಎದುರಿಸಲು ಅಗತ್ಯ ಸಿದ್ಧತೆ ಆರಂಭಿಸಿದೆ.

ನೀರು ಮೀಸಲಿರಿಸಲು ಜಲಮಂಡಳಿ ಪತ್ರ
ಕಳೆದ ಬಾರಿ ಉತ್ತಮ ಮಳೆಯಾದ ಪರಿಣಾಮ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಕಾವೇರಿ ನದಿ ಮೂಲದಿಂದ ಬೆಂಗಳೂರಿಗೆ ಪ್ರತಿ ದಿನ 1450 ದಶಲಕ್ಷ ಲೀಟರ್ ಪೂರೈಕೆ ಮಾಡಲಾಗುತ್ತಿದೆ. ಅಂದರೆ ತಿಂಗಳಿಗೆ 1.6 ಟಿಎಂಸಿ ನೀರು ಅಗತ್ಯವಿದೆ. ಈ ನಡುವೆ ಜಲಮಂಡಳಿಯು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಫೆಬ್ರವರಿ ಮಧ್ಯದಿಂದ ಜೂನ್ ವರೆಗೆ 7 ಟಿಎಂಸಿ ನೀರು ಮೀಸಲಿರಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗಿದೆ.

ಬೇಸಿಗೆಯಲ್ಲೂ ನೀರು ಲಭ್ಯವಾಗಲಿದೆ
ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದರಿಂದ ನಿಭಾಯಿಸುವುದು ಸವಾಲಾಗುತ್ತದೆ. ಈ ವರ್ಷ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಆದ್ದರಿಂದ ನಿಗದಿತ ನೀರು ಬೇಸಿಗೆಯಲ್ಲೂ ಲಭ್ಯವಾಗಲಿದೆ. ಆದರೆ ಮಳೆಗಾಲ, ಚಳಿಗಾಲಕ್ಕಿಂತ ಬೇಸಿಗೆ ಸಮಯದಲ್ಲಿ ನೀರಿನ ಬಳಕೆ ಹೆಚ್ಚಿರುತ್ತದೆ.

ಹಿರಿಯ ಅಧಿಕಾರಿ ನಿಯೋಜನೆ ಮಾಡಿದ ಜಲಮಂಡಳಿ
ಜಲಮಂಡಳಿಯು 800 ಚದರ ಕಿ.ಮೀ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುತ್ತಿದೆ. ಪ್ರದೇಶಗಳ ವ್ಯಾಪ್ತಿ, ನೀರಿನ ಲಭ್ಯತೆ ಎಲ್ಲವನ್ನೂ ಮನಗಂಡು ಒಂದು ದಿನ,ಎರಡು ದಿನ, ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಸಮಯದಲ್ಲಿ ಯಾವುದೇ ಪ್ರದೇಶಕ್ಕೂ ಸಮಸ್ಯೆಯಾಗದಂತೆ ನೀರು ಹಂಚಿಕೆ ಮಾಡುವುದು ಸವಾಲಿನ ಕೆಲಸವಾಗಿದೆ.ಪರಿಸ್ಥಿತಿಗೆ ಅನುಗುಣವಾಗಿ ನೀರು ಹಂಚಿಕೆ ಮಾಡಬೇಕು.

ನೀರು ಸೋರಿಕೆ ಪತ್ತೆಗೆ ಸೂಚನೆ
ನೀರು ಪೂರೈಕೆಯಾಗುವ ಪೈಪ್ಲೈನ್ ಮಾರ್ಗದಲ್ಲಿ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೈಪ್ ಒಡೆದು ನೀರು ಪೋಲಾಗುತ್ತಿರುವ ಜಾಗಗಳನ್ನು ಗುರುತಿಸಿ ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ಮಾರ್ಗದಲ್ಲಿ ಪೈಪ್ಗಳಿಗೆ ಹಾನಿಯಾಗಿ ಕಲುಷಿತ ನೀರು, ಕುಡಿಯುವ ನೀರಿಗೆ ಬೆರೆಯುವ ಸಾಧ್ಯತೆ ಇರುತ್ತದೆ. ಕೆಲ ಕಡೆ ಒಳಚರಂಡಿ ನೀರು ಕೂಡ ಸೇರಿರುತ್ತದೆ. ಈ ನೀರಿನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.












Click it and Unblock the Notifications