ಬೆಂಗಳೂರು ನಗರದಲ್ಲಿ ಮತ್ತೆ ತಗ್ಗಿತೇ ಕೊರೊನಾ ಲಸಿಕೆ ವಿತರಣೆ?
ಬೆಂಗಳೂರು, ಸೆಪ್ಟೆಂಬರ್ 14: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಲಸಿಕೆ ವಿತರಣೆ ವೇಗ ತಗ್ಗಿದ್ದು, ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಕಂಡುಬಂದಿದೆ.
ಕಳೆದ ಶುಕ್ರವಾರದಿಂದ ಸೋಮವಾರದವರೆಗೆ ರಾಜ್ಯದಲ್ಲಿ ದಿನಕ್ಕೆ ಸರಾಸರಿ 2.7 ಲಕ್ಷ ಡೋಸ್ಗಳ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಇದು ಆಗಸ್ಟ್ 21ರಿಂದ ಸೆಪ್ಟೆಂಬರ್ 9ರ ನಡುವೆ ವಿತರಿಸುತ್ತಿದ್ದ ಸರಾಸರಿ 5.43 ಲಕ್ಷ ಡೋಸ್ಗಳಿಗಿಂತ ಕಡಿಮೆ ಪ್ರಮಾಣದ್ದಾಗಿದೆ.
ಆರೋಗ್ಯ ಸಚಿವ ಕೆ. ಸುಧಾಕರ್, ಕೊರೊನಾ ಲಸಿಕೆ ನೀಡಿಕೆಯಲ್ಲಿ ಇಳಿಮುಖವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. 'ಗೌರಿ ಹಾಗೂ ಗಣೇಶ ಹಬ್ಬದ ಕಾರಣ ಹಾಗೂ ದೀರ್ಘ ವಾರಾಂತ್ಯದಿಂದಾಗಿ ಲಸಿಕೆ ನೀಡಿಕೆಯಲ್ಲಿ ಇಳಿಕೆಯಾಗಿದೆ' ಎಂದು ಹೇಳಿದ್ದಾರೆ. ಕಳೆದ ಏಳು ತಿಂಗಳಿನಿಂದಲೂ ನಿರಂತರ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಇದು ಒಂದು ರೀತಿ ವಿರಾಮವನ್ನೂ ನೀಡಿದೆ' ಎಂದು ಹೇಳಿದ್ದಾರೆ. ಸೋಮವಾರದಿಂದ ಮತ್ತೆ ಲಸಿಕೆ ನೀಡಿಕೆ ವೇಗ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರದಿಂದ ಲಸಿಕಾ ಪೂರೈಕೆ ಸಮರ್ಥವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
'ಕಳೆದ ವಾರ ಜುಲೈ-ಆಗಸ್ಟ್ ತಿಂಗಳಿನಲ್ಲಿ ಕಂಡುಬಂದಂತೆ ಲಸಿಕೆ ಪೂರೈಕೆಯಲ್ಲಿ ತೊಡಕು ಕಂಡುಬರುತ್ತದೆ' ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. 'ಕಳೆದ ವಾರವಿಡೀ ಲಸಿಕೆ ಪೂರೈಕೆಯಲ್ಲಿ ಕೊರತೆಯಾಗಿದೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಣದೀಪ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 5 ಹಾಗೂ 6ರಂದು ಪಾಲಿಕೆಗೆ 70 ಸಾವಿರ ಡೋಸ್ಗಳ ಪೂರೈಕೆಯಾಗಿದ್ದು, ನಂತರ ಲಸಿಕೆ ವಿತರಣೆ ತಗ್ಗಿದೆ.
ಸೆಪ್ಟೆಂಬರ್ 9ರ ಗುರುವಾರ, ಕೇವಲ 28,323 ಡೋಸ್ಗಳನ್ನು ನೀಡಲಾಗಿದ್ದು, ನಂತರ ಶುಕ್ರವಾರ ಇದರ ಸಂಖ್ಯೆ 15,492 ಡೋಸ್ಗಳಿಗೆ ತಗ್ಗಿದೆ ಹಾಗೂ ಶನಿವಾರ 45,785 ಡೋಸ್ಗಳನ್ನು ವಿತರಣೆ ಮಾಡಲಾಗಿದೆ.

'ಭಾನುವಾರ 35,750 ಡೋಸ್ಗಳು ಹಾಗೂ 70 ಸಾವಿರ ಹೊಸ ಡೋಸ್ಗಳನ್ನು ಸ್ವೀಕರಿಸಿದ್ದೇವೆ. ನಗರದಲ್ಲಿ ಕೊರೊನಾ ಲಸಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ' ಎಂದು ರಣದೀಪ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಈವರೆಗೂ 7,62,863 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 6,25,029 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,38,133 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 5,92,023 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,48,76,586 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 78,83,921 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ ಈವರೆಗೂ 3,53,53,775 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 1,24,52,647 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು:
ರಾಜ್ಯದಲ್ಲಿ ಸೋಮವಾರ 673 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1074 ಸೋಂಕಿತರು ಗುಣಮುಖರಾಗಿದ್ದಾರೆ. 13 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೂ 37517 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2962408ಕ್ಕೆ ಏರಿಕೆಯಾಗಿದೆ. ಒಟ್ಟು 2908622 ಸೋಂಕಿತರು ಗುಣಮುಖರಾಗಿದ್ದು, 16241 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರವೊಂದರಲ್ಲಿ ಸೋಮವಾರ 214 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1241639ಕ್ಕೆ ಏರಿಕೆಯಾಗಿದೆ. 3 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 16056ಕ್ಕೆ ಏರಿಕೆಯಾಗಿದೆ.












Click it and Unblock the Notifications