ಯುದ್ಧಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿತೇ ರಾಜ್ಯ ಬಿಜೆಪಿ?

ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕ ವಿಧಾನಸಭೆ ಚುನಾವಣೆ ದಿನೇ ದಿನೇ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳಲ್ಲಿಯೂ ಚುನಾವಣಾ ತಯಾರಿಗಳು ಬಿರುಸುಗೊಳ್ಳುತ್ತಿವೆ.

ಇದೇ ಹೊತ್ತಿನಲ್ಲಿ ಕಾಂಗ್ರೆಸ್ ನ ಆಡಳಿತ ವೈಫಲ್ಯಗಳ ಸಂಪೂರ್ಣ ಲಾಭ ಪಡೆಯುವ ಹುಮ್ಮಸ್ಸಿನಿಂದಲೇ ಚುನಾವಣಾ ರಣಾಂಗಣಕ್ಕೆ ಲಗ್ಗೆ ಹಾಕಿದ ಬಿಜೆಪಿಯು ಕಾಂಗ್ರೆಸ್ ಹೆಡೆಮುರಿ ಕಟ್ಟಬಲ್ಲ ಪ್ರಕರಣಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ತನ್ನ ಬತ್ತಳಿಕೆಯಲ್ಲಿ ಅಸ್ತ್ರಗಳನ್ನಾಗಿ ಮಾಡಿಕೊಂಡು ಮುನ್ನಗ್ಗಬೇಕಿದ್ದ ರಾಜ್ಯ ಬಿಜೆಪಿ ಮಾತ್ರ ಅದೇಕೋ ಮಂಕಾಗಿದೆ.

ಬೇಟೆಗೆ ನಿಲ್ಲಬೇಕಿದ್ದ ಬೇಟೆಗಾರನೇ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಕೈಕಟ್ಟಿ ಕಾಲ ದೂಡುವ ಪ್ರಮೇಯಕ್ಕೆ ಬಿಜೆಪಿ ಸಿಲುಕಿದೆಯೇ ಎಂಬ ಅನುಮಾನ ಈಗ ಆ ಪಕ್ಷದ ಅಭಿಮಾನಿಗಳು ಕಾಡತೊಡಗಿದೆ.

ಹುಸಿಯಾಯ್ತೇ ನಿರೀಕ್ಷೆ?

ಹುಸಿಯಾಯ್ತೇ ನಿರೀಕ್ಷೆ?

ಅಮಿತ್ ಶಾ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಬಲ ನೂರ್ಮಡಿಯಾಗುತ್ತದೆ ಎಂದು ನಂಬಿದ್ದು ಯಾಕೋ ಹುಸಿಯಾದಂತೆ ಎನ್ನಿಸುತ್ತಿದೆ. ಶಾ ಬಂದಾಗಲಂತೂ ಕೆಲ ಮಾಧ್ಯಮಗಳು 'ಅಮಿತೋತ್ಸಾಹ' ಎಂದೇ ಅದನ್ನು ಬಣ್ಣಿಸಿದ್ದವು. ಇನ್ನೇನು ಬಿಜೆಪಿ ರಣಕಹಳೆ ಊದುತ್ತದೆ. ಕಾಂಗ್ರೆಸ್ ಧೂಳಿಪಟವಾಗುತ್ತದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಂದಂಥ ಯಶಸ್ಸು ಬಿಜೆಪಿಗೆ ಸಿಗುತ್ತದೆ. ಅದಕ್ಕೆ ಶಾ ಅವರ ಬೆಂಗಳೂರು ಭೇಟಿಯೇ ಶ್ರೀಕಾರ ಹಾಕುತ್ತದೆ ಎಂದೆಲ್ಲಾ ಬಿಂಬಿಸಲಾಯಿತು. ಆದರೆ, ಅಂದು ಕಂಡ ಉತ್ಸಾಹ, ಒಗ್ಗಟ್ಟು ಆನಂತರ ಬಿಜೆಪಿ ನಾಯಕರಲ್ಲಿ ಕಾಣುತ್ತಿಲ್ಲ.

ಮಂಗಳೂರು ಸಮಾವೇಶದ ಪರಿಣಾಮವೇನು?

ಮಂಗಳೂರು ಸಮಾವೇಶದ ಪರಿಣಾಮವೇನು?

ಬಿಜೆಪಿ ಬಗ್ಗೆ ಇಂಥದ್ದೊಂದು ಅಭಿಪ್ರಾಯ ಬರಲು ಕಾರಣ ಇಲ್ಲದಿಲ್ಲ. ದಕ್ಷಿಣ ಕನ್ನಡ ಬಿಜೆಪಿ ನಾಯಕ ಕಲ್ಲಡ್ಕ ಪ್ರಭಾಕರ್ ಅವರ ಶಾಲೆಗೆ ಅನುದಾನ ನಿಲ್ಲಿಸಿದ ವಿಚಾರದಲ್ಲಿ ಪ್ರವಾಸಿ ಮಂದಿರಕ್ಕೆ ಮಂಗಳೂರು ಎಸ್ಪಿಯನ್ನು ಕರೆಯಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರು ಸೂಚನೆಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆಗಲೇ, ರೈ ಅವರ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಲು ಮಂಗಳೂರು ಚಲೋ ಸಮಾವೇಶ ಮಾಡಲಾಯಿತು. ಆದರೆ, ಪರಿಣಾಮ ಶೂನ್ಯ. ಆ ಸಮಾವೇಶ ಅಷ್ಟಾಗಿ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಲಿಲ್ಲ. ಜನರನ್ನು ಮರೆಯಲು ಬಿಡದಂತೆ ಬಿಜೆಪಿಯೂ ಪ್ರಯತ್ನಿಸಲಿಲ್ಲ. ಹಾಗಾಗಿ, ಆ ವಿಚಾರ ತಣ್ಣಗಾಗಿದೆ.

ಮೆರವಣಿಗೆ, ಪ್ರತಿಭಟನೆ ಯಾಕಾಗಲಿಲ್ಲ?

ಮೆರವಣಿಗೆ, ಪ್ರತಿಭಟನೆ ಯಾಕಾಗಲಿಲ್ಲ?

ಇನ್ನು, ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ರೈಡ್ ಆದಾಗಲಂತೂ ಕಾಂಗ್ರೆಸ್ಸಿಗರು ಕೇಂದ್ರದ ಕಡೆ ಬೊಟ್ಟು ಮಾಡಿದ್ದಕ್ಕೆ ಸಿಟ್ಟಾಗಿದ್ದರು ಬಿಜೆಪಿ ನಾಯಕರು. ಅಷ್ಟೇ ಅಲ್ಲ, ಸಚಿವ ಸಂಪುಟದಿಂದ ಡಿಕೆಶಿಯನ್ನು ಕೈಬಿಡಬೇಕೆಂದು ಒಂದು ವಾರ ಕಾಲ ಪ್ರತಿಭಟನೆ, ಮೆರವಣಿಗೆ ಎಲ್ಲವನ್ನೂ ಮಾಡುತ್ತೇವೆ ಎಂದರು ನಾಯಕರು. ಹಾಗೆಯೇ ಅಲ್ಲಿ ಇಲ್ಲಿ ಒಂದಿಷ್ಟು ಪ್ರತಿಭಟನೆಗಳಾದವಷ್ಟೆ. ವಾರ ಕಳೆಯುವಷ್ಟರಲ್ಲಿ ಎಲ್ಲವೂ ತಣ್ಣಗಾಯಿತು.

ಗಡುವು ಮುಗಿದರೂ ಸುಮ್ಮನಿರುವ ನಾಯಕರು

ಗಡುವು ಮುಗಿದರೂ ಸುಮ್ಮನಿರುವ ನಾಯಕರು

ಮಾಜಿ ಡಿವೈಎಸ್ ಪಿ ಗಣಪತಿ ಅವರ ಹತ್ಯೆ ಪ್ರಕರಣದ ತನಿಖೆಯಲ್ಲಿ ಲೋಪಗಳಾಗಿವೆ ಎಂದು ಟಿವಿ ಮಾಧ್ಯಮವೊಂದು ಬಿತ್ತರಿಸುತ್ತಿದ್ದಂತೆ ಗಕ್ಕನೆ ಎದ್ದು ಕುಳಿದ ಬಿಜೆಪಿ, ಕೆ.ಜೆ. ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಗಿಲು ಮುಟ್ಟುವಂತೆ ಆಗ್ರಹಿಸಿತು. ಇದಕ್ಕೆ ಸೆ. 25ರ ಗಡುವನ್ನೂ ವಿಧಿಸಿತ್ತು. ಕಾಂಗ್ರೆಸ್ ಸರ್ಕಾರ ಕ್ಯಾರೇ ಅನ್ನಲಿಲ್ಲ. ಹಾಗೆ ನೋಡಿದರೆ, ಸೆ. 26ರ ಬೆಳಗ್ಗೆಯೇ ಭಾರೀ ದೊಡ್ಡ ಪ್ರತಿಭಟನೆ ನಡೆಯಬೇಕಿತ್ತು. ಆದರೆ.... ಉಹೂಂ ಯಾಕೋ ರಾಜ್ಯ ನಾಯಕರು ಮನಸ್ಸು ಮಾಡುತ್ತಿಲ್ಲ. ಸುಮ್ಮನಾಗಿದ್ದಾರೆ. ಮಗುಮ್ಮಾಗಿದ್ದಾರೆ. ಇದಕ್ಕೆ ಉತ್ತರ ಅವರ ಬಳಿಯೇ ಇದೆ. ಬಾಯಿಬಿಟ್ಟಾರೆಯೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+