ಅಂಬೇಡ್ಕರ್ ಹಬ್ಬಕ್ಕೆ ಬರುತ್ತಿದ್ದಾರೆ ಮಾರ್ಟಿನ್ ಲೂಥರ್ ಕಿಂಗ್-3
ಬೆಂಗಳೂರು, ಜುಲೈ 21: ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ 'ಸಾಮಾಜಿಕ ನ್ಯಾಯ ಮರುಸ್ಥಾಪನೆ-ಅಂಬೇಡ್ಕರ್ ಚಿಂತನೆಗಳ ಪುನರ್ ಅವಲೋಕನ' ಕುರಿತ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಇಂದು (ಶುಕ್ರವಾರ) ಚಾಲನೆ ದೊರೆಯಲಿದೆ.
ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ (ಜಿಕೆವಿಕೆ) ಸಂಜೆ 5 ಗಂಟೆಗೆ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ -3 ಅವರು ಸಮಾವೇಶ ಉದ್ಘಾಟಿಸುವರು.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಭಾಗವಹಿಸುವರು ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಸಭಾಂಗಣದ ಒಳಗೆ 2,500 ಪ್ರತಿನಿಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೊರ ಭಾಗದಲ್ಲಿ 8ರಿಂದ 10 ಸಾವಿರ ಜನ ವೀಕ್ಷಿಸಲು ಎಲ್ಇಡಿ ಪರದೆ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
22 ಮತ್ತು 23ರಂದು ಬೆಳಿಗ್ಗೆ 9 ಗಂಟೆಗೆ ಗೋಷ್ಠಿಗಳು ಆರಂಭವಾಗಲಿವೆ. 12 ಸಮಾನಾಂತರ ವೇದಿಕೆಗಳಲ್ಲಿ 93 ಗೋಷ್ಠಿಗಳಲ್ಲಿ 300 ತಜ್ಞರು ವಿಷಯ ಮಂಡಿಸಲಿದ್ದಾರೆ.
ಮೂರೂ ದಿನದ ಕಾರ್ಯಕ್ರಮ ದೇಶ-ವಿದೇಶದ 13 ವಿಶ್ವ ವಿದ್ಯಾಲಯಗಳ ವೆಬ್ಸೈಟ್ಗಳಲ್ಲಿ ನೇರ ಪ್ರಸಾರವಾಗಲಿದೆ ಎಂದರು.












Click it and Unblock the Notifications