ವಿದೇಶದಿಂದ ಬರುವ ಕನ್ನಡಿಗರಿಗೆ ಒಂದೇ ವಿಮಾನ ನಿಲ್ದಾಣ!
ಬೆಂಗಳೂರು, ಮೇ 06 : ಲಾಕ್ ಡೌನ್ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಮೇ 7ರಿಂದ ಆರಂಭವಾಗಲಿದೆ. ಕರ್ನಾಟಕಕ್ಕೆ ಸಹ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರೂ ಒಂದೇ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು.
Recommended Video
ಕರ್ನಾಟಕದ ಯಾವುದೇ ಜಿಲ್ಲೆಗೆ ಸೇರಿದವರಾಗಿದ್ದರೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾತ್ರ ಆಗಮಿಸಬಹುದಾಗಿದೆ. ಮೇ 8ರಿಂದ 12ರ ತನಕ ಯುಕೆ, ಅಮೆರಿಕ, ಸಿಂಗಪುರದಿಂದ ಮೂರು ವಿಮಾನಗಳು ಬೆಂಗಳೂರಿಗೆ ಬರಲಿವೆ.
ಕೇಂದ್ರ ವಿದೇಶಾಂಗ ಇಲಾಖೆ ಈ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ. ವಿದೇಶದಿಂದ ಬಂದವರಿಗೆ ವ್ಯವಸ್ಥೆಗಳನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆಯನ್ನು ಸಹ ನೀಡಿದೆ.

ಸದ್ಯದ ಮಾಹಿತಿ ಪ್ರಕಾರ ಮೇ 8ರಂದು ಸುಮಾರು 250 ಪ್ರಯಾಣಿಕರು ಇರುವ ವಿಮಾನ ಲಂಡನ್ನಿಂದ ಹೊರಡಲಿದ್ದು ಬೆಂಗಳೂರಿಗೆ ಬರಲಿದೆ. 300 ಪ್ರಯಾಣಿಕರು ಇರುವ 2ನೇ ವಿಮಾನ ಸ್ಯಾನ್ ಫ್ರಾನಿಸ್ಕೋದಿಂದ ಮೇ 11ರಂದು ಹೊರಡಲಿದ್ದು, ಮೇ 13ರಂದು ಬೆಂಗಳೂರು ತಲುಪಲಿದೆ.
ಮೇ 12ರಂದು 250 ಪ್ರಯಾಣಿಕರನ್ನು ಹೊತ್ತು ಸಿಂಗಪುರದಿಂದ ವಿಮಾನ ಹೊರಡಲಿದ್ದು, ಬೆಂಗಳೂರಿಗೆ ಆಗಮಿಸಲಿದೆ. ಈ ಎಲ್ಲಾ ವಿಮಾನಗಳು ಏರ್ ಇಂಡಿಯಾಕ್ಕೆ ಸೇರಿದವುಗಳು. ಏರ್ ಇಂಡಿಯಾ ಭಾರತೀಯರನ್ನು ಕರೆತರಲು 64 ವಿಮಾನಗಳನ್ನು 13 ದೇಶಗಳಿಗೆ ಕಳಿಸುತ್ತಿದೆ.
ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರು ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಆದರೆ, ಕನ್ನಡಿಗರು ಬೆಂಗಳೂರಿಗೆ ಆಗಮಿಸಬೇಕು. ರಾಜ್ಯಕ್ಕೆ ಆಗಮಿಸಿದವರನ್ನು ಸ್ಕ್ರೀನಿಂಗ್ ಮಾಡಿ ಕ್ವಾರಂಟೈನ್ಗೆ ಕಳಿಸಲಾಗುತ್ತದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಕಳೆದ ವಾರ ಸುಮಾರು 3 ಸಾವಿರ ವಿದೇಶಿಯರು ತವರಿಗೆ ವಾಪಸ್ ಆಗಿದ್ದಾರೆ. ವಿಮಾನ ನಿಲ್ದಾಣದಿಂದ 17 ವಿವಿಧ ನಗರಗಳಿಗೆ 22 ವಿಮಾನಗಳು ಸಂಚಾರ ನಡೆಸಿವೆ.











Click it and Unblock the Notifications