ಲಾಲ್ಬಾಗ್ ಫ್ಲವರ್ ಶೋ; ಪುಷ್ಪಗಳಲ್ಲಿ ಪುನೀತ್ ನೋಡಲು ಬನ್ನಿ
ಬೆಂಗಳೂರು ಆಗಸ್ಟ್ 03: ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಆರಂಭವಾಗಿವೆ. ತರಹೇವಾರಿ ಬಣ್ಣಬಣ್ಣದ ಲಕ್ಷಾಂತರ ಹೂವುಗಳಿಂದ ದಿ. ಡಾ. ರಾಜ್ಕುಮಾರ್ ಹಾಗೂ ಪವರ್ಸ್ಟಾರ್ ದಿ. ಪುನೀತ್ ರಾಜ್ಕುಮಾರ್ ಜೀವನಕಥನ ಅರಳಲಿದೆ.
75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಲಾಲ್ಬಾಗ್ ಉದ್ಯಾನದಲ್ಲಿ ಆಗಸ್ಟ್ 5ರಿಂದ 15ರವರೆಗೆ ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಡಾ. ಪುನೀತ್ ರಾಜ್ಕುಮಾರ್ಗೆ ಅರ್ಪಿಸಲಾದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಸ್ವಾತಂತ್ರ್ಯ ದಿನಕ್ಕೆ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ಹೊಸ ಸಂಕಲ್ಪ ಕೈಕೊಂಡ ಕರಣ್ ಜೋಹರ್
ಪ್ರದರ್ಶನದಲ್ಲಿ ದಿ. ಡಾ. ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಜೀವನ ಕುರಿತು ಹೂಗಳಿಂದ ತಿಳಿಸಲು ಊಟಿ, ಕೆಮ್ಮಣ್ಣುಗುಂಡಿ ಸೇರಿದಂತೆ ವಿವಿಧ ಪ್ರಸಿದ್ಧ ಸ್ಥಳಗಳಿಂದ ನಾನಾ ನಮೂನೆಯ, ವೈವಿಧ್ಯಮಯ ಹೂಗಳನ್ನು ತರಿಸಲಾಗಿದೆ. ಈಗಾಗಲೇ ನೂರಾರು ಕಾರ್ಮಿಕರು ಹೂಗಳನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.
1.25 ಲಕ್ಷ ಫ್ಲವರ್ ಪಾಟ್ ಬಳಕೆ
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದಿಂದ ಜಂಟಿಯಾಗಿ ಹತ್ತು ದಿನ ಈ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ವೇಳೆ 1.25ಲಕ್ಷ ಹೂ ಕುಂಡಗಳು (ಪಾಟ್) ಪ್ರದರ್ಶನದಲ್ಲಿ ಬಳಕೆ ಆಗಲಿವೆ. ಅದಕ್ಕಾಗಿ ಲಾಲ್ಬಾಗ್, ಹೆಚ್ಎಎಲ್ ನರ್ಸರಿ, ಬಿಡಿಎ, ಬಿಬಿಎಂಪಿ ಮತ್ತಿತರ ಸಂಸ್ಥೆಗಳಿಂದ ಪ್ರದರ್ಶನಕ್ಕೆಂದೇ ಬೆಳೆಸಲಾಗಿರುವ ವಿವಿಧ ಬಣ್ಣಗಳು ಹೂಗಳನ್ನು, ಅವುಗಳ ಮೂಲಕ ಡಾ. ರಾಜ್ ಹಾಗೂ ಅಪ್ಪು ಅವರ ಜೀವನ ಕುರಿತು ಕಣ್ತುಂಬಿಕೊಳ್ಳಬಹುದು.
ಪುನೀತ್-ರಾಜ್ರ ಸಮಾಧಿಯಿಂದ ಜ್ಯೋತಿ ತರಲು ಸಿದ್ಧತೆ
ಆಗಸ್ಟ್ 5ರಂದು ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಅಂದು ಡಾ.ರಾಜ್ ಕುಮಾರ್ ಮತ್ತು ಡಾ. ಪುನೀತ್ರಾಜ್ ಕುಮಾರ್ ಸ್ಮರಣಾರ್ಥ ಅವರ ಸಮಾಧಿಯಿಂದ ಉದ್ಯಾನಕ್ಕೆ ಜ್ಯೋತಿ ತರಲಾಗುತ್ತಿದೆ. ಹೊರವರ್ತುಲ ರಸ್ತೆಯ ಕಂಠೀರವ ಕ್ರೀಡಾಂಗಣದ ಮಹನೀಯರ ಸಮಾಧಿ ಸ್ಥಳದಿಂದ ಅಶ್ವಾರೂಢ ಬೆಳ್ಳಿರಥದಲ್ಲಿ ಜ್ಯೋತಿ ಹೊತ್ತು ತರಲು ನಿರ್ಧರಿಸಲಾಗಿದೆ.
ಜ್ಯೋತಿಯು ಡಾ.ರಾಜ್ ಮನೆಗೆ ಹೋಗಿ ಅಲ್ಲಿಂದ ಕಾವೇರಿ ಚಿತ್ರಮಂದಿರ, ವಿಧಾನಸೌಧ ಮಾರ್ಗವಾಗಿ ಶಾಂತಿನಗರ, ಡಬಲ್ ರಸ್ತೆ, ಲಾಲ್ಬಾಗ್ ಗೇಟ್ ಮೂಲಕ ಜ್ಯೋತಿ ಹೊತ್ತುಅಶ್ವಾರೂಢ ಬೆಳ್ಳಿರಥ ಉದ್ಯಾನ ಪ್ರವೇಶಿಸಲಿದ್ದು, ಇದು ಸಹ ಫಲಪುಷ್ಪ ಪ್ರದರ್ಶನಕ್ಕೆ ಮೆರೆಗು ತುಂಬಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಅಪ್ಪು-ರಾಜ್ರ ಜೀವನ ಪ್ರದರ್ಶನ
ಫಲಪುಷ್ಪ ಪ್ರದರ್ಶನವು ಇಬ್ಬರು ಮೇರು ನಟರ ಕಲೆ, ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಡಾ.ರಾಜ್ ಅವರು ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪದಿಂದ ಕೊನೆಯ ಚಿತ್ರ ಶಬ್ದವೇಧಿ ವರೆಗೆ ಹಾಗೂ ಅಪ್ಪು ಅವರು ಬಾಲನಟನಾಗಿ ನಟಿಸಿದ ಮೊದಲ ಚಿತ್ರದಿಂದ ಹಿಡಿದು ಅವರ ಎಲ್ಲ ಚಿತ್ರಗಳ ಉದ್ಯಾನದಲ್ಲಿನ ಗಾಜಿನ ಮನೆಯೆ 110ಡಿಜಿಟಲ್ ಪರದೆ ಮೇಲೆ ಪ್ರದರ್ಶನಗೊಳ್ಳಲಿವೆ. ಇದರ ಜತೆಗೆ ಪ್ರದರ್ಶನಕ್ಕೆ ಆಗಮಿಸುವ ಜನರು ಡಾ.ರಾಜ್ ಅವರು ಬೆಳೆದ ಗಾಜನೂರಿನ ಮನೆ, ಪುನೀತ್ ಅವರು ಅನಾಥ ಮಕ್ಕಳಿಗಾಗಿ ನಿರ್ಮಿಸಿ ಶಕ್ತಿಧಾಮ ಇನ್ನಿತರ ಅಂಶಗಳನ್ನು ಕಣ್ತುಂಬಿಕೊಳ್ಳಬಹುದು.
ಪ್ರಬಂಧ ಸ್ಪರ್ಧೆಯಲ್ಲಿ 800ಕ್ಕೂ ಹೆಚ್ಚು ಮಕ್ಕಳು ಭಾಗಿ
ಸ್ವಾತಂತ್ರ್ಯ ಅಮೃತಮಹೋತ್ಸವ ಫಲಪುಷ್ಪ ಪ್ರದರ್ಶನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಬೆಳಗ್ಗೆ 10ರಿಂದ ಮಧ್ಯಾಹ್ನ 12ಗಂಟೆವರೆಗೆ ನಡೆದ ಈ ಸ್ಪರ್ಧೆಯಲ್ಲಿ ಬೆಂಗಳೂರಿನ 20ಕ್ಕು ಹೆಚ್ಚು ಶಾಲೆಯ 800ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಮಕ್ಕಳಿಗೆ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರು ತಿಳಿಸಿದರು.
ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80ರೂ., ರಜಾದಿನಗಳಲ್ಲಿ 100ರೂ. ನಿಗದಿಪಡಿಸಲಾಗಿದ್ದು, ಮಕ್ಕಳಿಗೆ ಎಲ್ಲ ದಿನಗಳಲ್ಲೂ 30ರೂ. ಇರಲಿದೆ ಎಂದು ಅವರು ತಿಳಿಸಿದರು.