ಬಿಬಿಎಂಪಿ: ಮಹದೇವಪುರ ವಲಯದಲ್ಲಿ 15 ಒತ್ತುವರಿ ತೆರವು
ಬೆಂಗಳೂರು, ಸೆಪ್ಟಂಬರ್ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮಹದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೋಮವಾರ 15 ಒತ್ತುವರಿಗಳನ್ನು ತೆರವುಗೊಳಿಸಿದ್ದಾರೆ.
ಬಹುಕಾಲದಿಂದಲೂ ನಗರದ ಹಲವೆಡೆ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿತ್ತು. ಪರಿಣಾಮ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಂಗಳೂರಲ್ಲಿ ಅನೇಕ ಕಡೆ ರಸ್ತೆ, ಬಡಾವಣೆ ಅಸ್ತವ್ಯಸ್ತವಾಗಿತ್ತು. ನಂತರ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಒತ್ತುವರಿಯ ಪ್ರದೇಶಗಳನ್ನು ಗುರುತಿಸಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಪಂಪ ಮಹಾಕವಿ ರಸ್ತೆ ಹೆಸರು ಬದಲಿಸಲ್ಲ: ವಿರೋಧದ ಬಳಿಕ ಎಚ್ಚೆತ್ತ ಮಹೇಶ ಜೋಶಿ
ಅದರಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಚೆಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್ ಹಾಗೂ ಬಸವನಪುರ ವಾರ್ಡ್ ನ ಎಸ್.ಆರ್. ಲೇಔಟ್ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ಒತ್ತುವರಿಯಾಗಿದ್ದ ಕಟ್ಟಡಗಳು, ಮನೆ, ಕಾಪೌಂಡುಗಳು ನೆಲಸಮವಾಗಿವೆ. ಭೂಮಾಪಕರು ಗುರುತಿಸಿದಂತಹ ಒತ್ತುವರಿ ಪ್ರದೇಶವನ್ನು ಪಾಲಿಕೆಯ ಅಧಿಕಾರಿಗಳು, ಮಾರ್ಷಲ್ಗಳ ತಂಡವು ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ತೆರವು ಮಾಡಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.
ವಿವಿಧೆಡೆ ಕಾಂಪೌಂಡ್, ಗೋಡೆ ನೆಲಸಮ
ಮಹದೇವಪುರ ವಲಯದಲ್ಲಿ ಚಿನ್ನಪ್ಪನಹಳ್ಳಿಯಿಂದ ಮುನ್ನೇಕೊಳಲು ಕೆರೆಯ ನಡುವೆ ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಸಾಯಿ ಕಣ್ಣಿನ ಆಸ್ಪತ್ರೆಯ ಕಾಂಪೌಂಡ್ ಗೋಡೆ, ರಾಘವ್ ಸೂಪರ್ ಮಾರ್ಕೆಟ್ ಮುಂಭಾಗದ ಒಳ ಹರಿವಿನ ಕಾಲುವೆ ಸೇರಿದಂತೆ ಅತಿಕ್ರಮಿಸಿದ್ದ 3 ಕಟ್ಟಡಗಳು, 4 ಕಾಂಪೌಂಡ್ ಗೋಡೆ ಹಾಗೂ ರಸ್ತೆಯನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡಿಎ: ಶಿವರಾಮ ಕಾರಂತ್ ಬಡಾವಣೆಯ 63 ಕಟ್ಟಡಗಳು ಸಕ್ರಮ- ಸುಪ್ರೀಂ ಆದೇಶ
ಇನ್ನು ಚೆಲ್ಲಘಟ್ಟ ವ್ಯಾಪ್ತಿಯಲ್ಲಿ ಪ್ರಸ್ಟೀಜ್ ಗ್ರೂಪ್ನ ಖಾಲಿ ಜಾಗ, ಕಾಂಪೌಂಡ್ ಗೋಡೆ ಹಾಗೂ ಹೂಡಿ ಬಳಿ ಗೋಪಾಲನ್ ಶಾಲೆ ಹಾಗೂ ಮಹಾವೀರ್ ಅಪಾರ್ಟ್ಮೆಂಟ್ ಕಾಂಪೌಂಡ್ ಮತ್ತು ಗೋಡೆ ಸೇರಿದಂತೆ 3 ಕಾಂಪೌಂಡ್ ಗೋಡೆಗಳನ್ನು ಒಡೆದು ಹಾಕಲಾಗಿದೆ. ಸ್ಪೈಸಿ ಗಾರ್ಡನ್ ( ಮುನ್ನೆಕೊಳಲು) ಬಳಿ 4 ಕಾಂಪೌಂಡ್ ಗೋಡೆಗಳು ಹಾಗೂ ರಸ್ತೆ ತೆರವಾಗಿದೆ.
ಮತ್ತೆ ಒತ್ತುವರಿ ಮಾಡದಂತೆ ಬಿಬಿಎಂಪಿ ಎಚ್ಚರಿಕೆ
ನಗರದ ಕೆ.ಆರ್.ಪುರದ ಬಸವನಪುರ ವಾರ್ಡ್ ಎಸ್.ಆರ್. ಲೇಔಟ್ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ 77 ಮೀಟರ್ ಉದ್ದ ಹಾಗೂ 2.6 ಮೀಟರ್ ಅಗಲದ ಮಲೆ ನೀರುಗಾಲುವೆಯ ಮೇಲೆ ಸ್ಲ್ಯಾಬ್ ಅಳವಡಿಸಲಾಗಿತ್ತು. ಇದನ್ನು ಗಮನಿಸಿದ ಬಿಬಿಎಂಪಿ ಅಧಿಕಾರಿಗಳು ಎರಡು ಜೆಸಿಬಿಗಳ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಿದರು. ಮಳೆ ನೀರುಗಾಲುವೆ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ಗಳನ್ನು ತೆಗೆದು ಹಾಕಿದರು.
ಇಂದು ಒತ್ತುವರಿ ತೆರವುಕಾರ್ಯಚರಣೆ ನಡೆಸಿರುವ ಎಲ್ಲಾ ಕಡೆಗಳಲ್ಲಿಯೂ ಮತ್ತೊಮ್ಮೆ ಒತ್ತುವರಿ ಮಾಡದಂತೆ ಹಾಗೂ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆ ನಿರ್ಮಿಸದಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅದಲ್ಲದೆ ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.