ಐಐಎಸ್ಸಿ ಅಧ್ಯಯನ ತೆರೆದಿಟ್ಟ ಬೆಂಗಳೂರು ಪ್ರವಾಹದ ಹಿಂದಿನ ಕಾರಣಗಳು
ಬೆಂಗಳೂರು, ಆಗಸ್ಟ್ 31: ಕಾಂಕ್ರಿಟೀಕರಣ, ತೇವಾಂಶಯುಕ್ತ ಭೂಮಿಯ ತೀವ್ರ ನಷ್ಟ ಮತ್ತು ಸಸ್ಯಗಳ ನಾಶ ಬೆಂಗಳೂರಿನ ಆಗಿಂದಾಗೆ ಉಂಟಾಗುವ ಪ್ರವಾಹಕ್ಕೆ ಪ್ರಮುಖ ಕಾರಣಗಳು ಎಂದು ಐಐಎಸ್ಸಿ ಅಧ್ಯಯನ ಹೇಳಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) "ಬೆಂಗಳೂರಿನಲ್ಲಿ ನಿರಂತರ ಪ್ರವಾಹಗಳು: ಕಾರಣಗಳು ಮತ್ತು ಪರಿಹಾರ ಕ್ರಮಗಳು," ಎಂಬ ವರದಿಯಲ್ಲಿ ಬೆಂಗಳೂರಿನ ಪ್ರವಾಹಕ್ಕೆ ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

"ನೀರಿನ ಸ್ವಾಭಾವಿಕ ಹರಿವಿನ ಪ್ರದೇಶಗಳಲ್ಲಿ ನಗರ ಅಭಿವೃದ್ಧಿಯಾಗುತ್ತಿರುವುದರಿಂದ ನೀರಿನ ಹರಿವಿಗೆ ತಡೆಯಾಗಿ ಪ್ರವಾಹ ಉಂಟಾಗುತ್ತದೆ," ಎಂದು ಐಐಎಸ್ಸಿ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.
ಬೆಂಗಳೂರಿನ ಹಿಂದಿನ ನಕ್ಷೆಗಳನ್ನು ಇಂದಿನ ನಕ್ಷೆಗಳಿಗೆ ಹೋಲಿಸಿದರೆ ಶೇಕಡಾ 78ರಷ್ಟು ಭೂಮಿಯ ಮೇಲ್ಮೈ ಕಾಂಕ್ರಿಟೀಕರಗೊಂಡಿದೆ. ನಗರದ ವಿನ್ಯಾಸದಲ್ಲಿನ ತಪ್ಪಿನಿಂದಾಗಿ ಈ ರೀತಿಯಾಗಿದೆ. ಈ ರೀತಿ ಕಾಂಕ್ರಿಟೀಕರಣವಾಗುವುದರಿಂದ ನೀರಿನ ಹರಿವಿನ ವೇಗದ ಪ್ರಮಾಣ ಹೆಚ್ಚಿಸುತ್ತದೆ. ಇದು ಹಾನಿಕಾರಕ ಎಂದು ಅಧ್ಯಯನ ಹೇಳಿದೆ.
ಒಂದೊಮ್ಮೆ ಇದೇ ಭರದಲ್ಲಿ ನಗರದ ಭೂ ಮೇಲ್ಮೈ ಕಾಂಕ್ರೀಟಕರಣವಾಗುತ್ತಾ ಹೋದರೆ 2020ರ ವೇಳೆಗೆ ನಗರದ ಶೇಕಡಾ 94 ಪ್ರದೇಶಗಳಲ್ಲಿ ಮಣ್ಣೇ ಕಾಣಿಸುವುದಿಲ್ಲ ಎಂದೂ ಅಧ್ಯಯನ ವರದಿ ಎಚ್ಚರಿಸಿದೆ.
ನೀರಿನ ಚರಂಡಿಗಳ ಕಿರಿದಾಗುವಿಕೆ, ಒಳಚರಂಡಿ ನಿರ್ವಹಣೆಯ ಕೊರತೆಯೂ ನಗರದ ಪ್ರವಾಹಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಅಧ್ಯಯನ ವರದಿ ಬೆಟ್ಟು ಮಾಡಿದೆ.
ಐಐಎಸ್ಸಿಯ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಟಿ.ವಿ. ರಾಮಚಂದ್ರ, ಸಂಶೋಧಕರಾದ ವಿನಯ್ ಎಸ್ ಮತ್ತು ಭರತ್ ಎಚ್ ಐಥಾಳ್ ಸಹಾಯದಿಂದ ಈ ಅಧ್ಯಯನ ನಡೆಸಿದ್ದಾರೆ.
ಇನ್ನು ಬೆಳ್ಳಂದೂರು ಕೆರೆಯ ಸಮಸ್ಯೆಯನ್ನೂ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದ್ದು, ಜಲಮೂಲವನ್ನು ಹೇಗೆ ಸಂರಕ್ಷಿಸಬಾರದು ಎಂಬುದಕ್ಕೆ ಒಂದು ತಾಜಾ ಉದಾಹರಣೆ ಎಂದು ಹೇಳಿದೆ.












Click it and Unblock the Notifications