ಟಿಪ್ಪು ಹೆಸರಿಟ್ಟರೆ ರಾಜ್ಯ ಹೊತ್ತಿ ಉರಿಯುತ್ತೆ: ಬೋಪಯ್ಯ ಎಚ್ಚರಿಕೆ
ಬೆಂಗಳೂರು, ಜೂನ್ 23: ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಹಜ್ ಭವನಕ್ಕೆ ಟಿಪ್ಪುವಿನ ಹೆಸರು ಇಡಬಾರದು, ಹಾಗೇನಾದರೂ ಹೆಸರು ಇಟ್ಟಲ್ಲಿ ಕರ್ನಾಟಕದಲ್ಲಿ ಆಗುವ ಗಲಭೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಆಕ್ರೋಶದಿಂದ ನುಡಿದಿದ್ದಾರೆ.
ಟಿಪ್ಪು ಯಾವತ್ತೂ ಬ್ರಿಟೀಷರ ವಿರುದ್ಧ ಹೋರಾಡಲೇ ಇಲ್ಲ, ಆತ ಮತಾಂಧನಾಗಿದ್ದ, ಮತಾಂತರ ಆಗಲಿಲ್ಲವೆಂಬ ಕಾರಣಕ್ಕೆ ಹಿಂದೂಗಳನ್ನು ಕೊಂದ. ಅಂತಹವನ ಹೆಸರು ಇಟ್ಟರೆ ಕರ್ನಾಟಕದಲ್ಲಿ ಕೋಮು ಗಲಭೆಗಳಾಗುವುದು ಖಂಡಿತ ಎಂದು ಅವರು ಹೇಳಿದರು.

ಸಚಿವ ಜಮೀರ್ ಅಹ್ಮದ್ ತಮ್ಮ ಸ್ವಂತ ಹಣದಿಂದ ಕಟ್ಟಿದ ಕಟ್ಟಡಗಳಿಗೆ ಬೇಕಾದರೆ ಟಿಪ್ಪು ಹೆಸರಿಡಲಿ, ಅಥವಾ ತಮ್ಮ ಮನೆಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ ನಮ್ಮ ಅಭ್ಯಂತರವಿಲ್ಲ ಆದರೆ ಸರ್ಕಾರಿ ಕಟ್ಟಡಕ್ಕೆ ಟಿಪ್ಪು ಹೆಸರಿಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಹಜ್ ಸಮಿತಿಯ ಮುಸ್ಲಿಂ ಮುಖಂಡರು ಹಜ್ ಭವನಕ್ಕೆ ಟಿಪ್ಪು ಹೆಸರಿಡುವಂತೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಹಿರಿಯ ನಾಯರೊಂದಿಗೆ ಮಾತುಕತೆ ಆಡಿ ನಿರ್ಣಯ ತೆಗೆದುಕೊಳ್ಳುವುದಾಗಿ ಜಮೀರ್ ಅಹ್ಮದ್ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.












Click it and Unblock the Notifications