IAS ಅಧಿಕಾರಿ ವಿಜಯ್ ಶಂಕರ್ ಮೃತದೇಹದ ಕೊವಿಡ್-19 ತಪಾಸಣೆ
ಬೆಂಗಳೂರು, ಜೂನ್.24: ಐಎಎಸ್ ಅಧಿಕಾರಿ ಬಿ.ಎಂ. ವಿಜಯ್ ಶಂಕರ್ ಮಂಗಳವಾರ ಬೆಂಗಳೂರಿನ ಜಯನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಬುಧವಾರ ಮೃತದೇಹವನ್ನು ಕೊರೊನಾವೈರಸ್ ತಪಾಸಣೆಗೆ ಒಳಪಡಿಸಲಾಗುತ್ತದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದ್ದು, ಮೊದಲು ಕೊವಿಡ್-19 ತಪಾಸಣೆ ನಡೆಸಿದ ನಂತರದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಬಂಧನದ ಭೀತಿಯಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ?
ಜೂನ್.23ರ ಮಂಗಳವಾರ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಹಿರಿಯ ಐಎಎಸ್ ಅಧಿಕಾರಿ ಬಿ.ಎಂ. ವಿಜಯ್ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಡಿಸಿಪಿ ಶ್ರೀನಾಥ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು. 3 ಗಂಟೆಗಳ ಕಾಲ ಮಾಹಿತಿಯನ್ನು ಸಂಗ್ರಹಿಸಿದ್ದರು.
ಹಿರಿಯ ಅಧಿಕಾರಿಗಳು ಭೇಟಿ ನೀಡಿರಲಿಲ್ಲ:
ಒಬ್ಬ ಹಿರಿಯ ಐಎಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣವು ಬೆಳಕಿಗೆ ಬಂದಿದ್ದರೂ ಕೂಡಾ ಡಿಸಿಪಿ ಶ್ರೀನಾಥ್ ಒಬ್ಬರೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆದರೆ ಮಾಧ್ಯಮಗಳಿಗೆ ಪ್ರಕರಣದ ಕುರಿತು ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಘನ್ ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ನಡೆಯು ತೀವ್ರ ಗೊಂದಲವನ್ನು ಹುಟ್ಟುಹಾಕಿದೆ.
ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ವಿಚಾರಣೆಗೆ ಬರುವಂತೆ ಸಿಬಿಐ ಮೂರು ದಿನಗಳ ಹಿಂದೆ ಆರೋಪಿಯಾಗಿದ್ದ ಬಿ. ಎಂ. ವಿಜಯ ಶಂಕರ್ಗೆ ನೋಟಿಸ್ ನೀಡಿತ್ತು. ಮತ್ತೆ ಬಂಧನವಾಗಬಹುದು ಎಂಬ ಭೀತಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.