ನಾನು ಯಾವ ದೌರ್ಜನ್ಯವನ್ನು ಮಾಡಿಲ್ಲ : ಎಸ್. ಮೂರ್ತಿ ಸ್ಪಷ್ಟನೆ
ಬೆಂಗಳೂರು, ನವೆಂಬರ್ 21 : ನಾನು ಕಾರ್ಯದರ್ಶಿ ಹುದ್ದೆ ಅಲಂಕರಿಸಿದ ದಿನದಿಂದ ನನಗೆ ಕಿರುಕುಳವಾಗುತ್ತಿದೆ. ಒಂದೇ ಕಚೇರಿಯಲ್ಲಿ 500 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ನಾನು ಯಾವ ದೌರ್ಜನ್ಯವನ್ನೂ ಮಾಡಿಲ್ಲ ಎಂದು ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿಕೆ ನೀಡಿದ್ದಾರೆ.
'ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ದೂರು ಸಮಿತಿ ಕಡ್ಡಾಯ'
ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿತ್ತು. ಹಿರಿಯ ಅಧಿಕಾರಿಯೊಬ್ಬರು ತಮ್ಮನ್ನು ಅವರ ಕಚೇರಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿ ಮಾನಸಿಕವಾಗಿ ಜರ್ಜರಿತಗೊಳ್ಳುವಂತೆ ಮಾಡಿದ್ದಾರೆ ಮಹಿಳಾ ಅಧಿಕಾರಿ ಸಕ್ಷಮ ಪ್ರಾಧಿಕಾರವೊಂದಕ್ಕೆ ದೂರು ಸಲ್ಲಿಸಿದ್ದರು.
ಬೆಳಗಾವಿ ಅಧಿವೇಶನ ಆರಂಭವಾದ ದಿನದಂದೇ ಸಕ್ಷಮ ಪ್ರಾಧಿಕಾರವೊಂದಕ್ಕೆ ಆ ಮಹಿಳಾ ಅಧಿಕಾರಿ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಪ್ರಾಧಿಕಾರ, ದೂರಿನಲ್ಲಿ ವಿವರಿಸಿರುವ ಅಂಶಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಾಧಾರ ಕಲೆಹಾಕಲು ದೂರು ನೀಡಿರುವ ಮಹಿಳಾ ಹಿರಿಯ ಅಧಿಕಾರಿಗೆ ಸೂಚಿಸಿದೆ.
ವಾರ್ಷಿಕ ಕಾರ್ಯನಿರ್ವಹಣೆಯ ಕುರಿತು ತೆರೆಯಲಾಗಿರುವ ಕಡತ ಕುರಿತು ಚರ್ಚಿಸಲು ಅಕ್ಟೋಬರ್ನಲ್ಲಿ ಹಿರಿಯ ಅಧಿಕಾರಿ ಕೊಠಡಿಗೆ ತೆರಳಿದ್ದೆ. ಆ ವೇಳೆ ಅನುಚಿತ ಮಾತುಗಳನ್ನಾಡಿದ ಹಿರಿಯ ಅಧಿಕಾರಿಯಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ," ಎಂದು ಮಹಿಳಾ ಅಧಿಕಾರಿ ನವೆಂಬರ್ 13ರಂದು ದೂರಿದ್ದರು.
ಈ ವಿಚಾರ ಕುರಿತು ಎಸ್. ಮೂರ್ತಿಯವರು ಮಾತನಾಡಿ, ನನ್ನ ಹುದ್ದೆಯನ್ನು ಸಹಿಸದ ಮಹಿಳೆಯರು ಇದನ್ನು ಗುಂಪಾಗಿ ಮಾಡುತ್ತಿದ್ದಾರೆ. ಜಾತಿ ಕಾರಣಕ್ಕಾಗಿ ಈ ರೀತಿಯ ದೌರ್ಜನ್ಯ ನನ್ನ ಮೇಲಾಗುತ್ತಿದೆ. ನಾನು ದಲಿತನಾಗಿರೋದಕ್ಕೆ ಈ ದೌರ್ಜನ್ಯ ನಡೆಯುತ್ತಿದೆ. ನನ್ನ ಹುದ್ದೆಯನ್ನು ಜಾತಿವಾದಿಗಳು ಒಪ್ಪುವುದಿಲ್ಲ ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.