ರಸ್ತೆಯಲ್ಲಿ ತುಂಬಿದ ಚರಂಡಿ ನೀರು: ಮನೆಯಲ್ಲೇ ಬಂಧಿಯಾದ ಜನರು
ಬೆಂಗಳೂರು, ಏಪ್ರಿಲ್ 09: ನಗರದ ಎಚ್ಎಸ್ಆರ್ ಲೇಔಟ್ ನ 6ಹಾಗೂ 7ನೇ ಸೆಕ್ಟರ್ ನಲ್ಲಿರುವ ಸ್ಥಳೀಯರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಏಕೆ ಅಂತೀರಾ, ಮನೆಯ ಮುಂದೆ ಕಾಲಿಟ್ಟರೆ ಚರಂಡಿ ನೀರು, ದುರ್ವಾಸನೆಯಿಂದಾಗಿ ಜನರು ಬೇಸತ್ತಿದ್ದಾರೆ.
ಮನೆಯ ಮುಂದೆ ಚರಂಡಿ ನೀರು ಹರಿಯುತ್ತಿರುವ ಕಾರಣ ಸಾವಿರಾರು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಒಂದೂವರೆ ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಇದುವರೆಗೂ ಪೂರ್ಣಗೊಂಡಿಲ್ಲ. ಮೂರು ವಾರಗಳಿಂದ ಕೆಲಸಗಾರರೇ ಇಲ್ಲ.
ಬೆಂಗಳೂರು:110 ಹಳ್ಳಿಗಳ ಒಳಚರಂಡಿ ಕಾಮಗಾರಿಗೆ ಸರ್ಕಾರ ಸಮ್ಮತಿ
ಹೀಗೆ ಬಿಟ್ಟರೆ ಎಲ್ಲರಿಗೂ ಕಾಲಯಿಲೆ ಬರುವುದು ಖಚಿತ ಈ ಕುರಿತು ಎಂಎಲ್ ಎ ಗಳಿಗೆ ದೂರು ನೀಡಿದ್ದೇವೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತೆ ಅಂತ ಭರವಸೆ ನೀಡಿದ್ದರು ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮನೆಯ ಮುಂದೆ ಕಾಂಪೌಂಡ್ ಬಳಿ ವಾಹನಗಳನ್ನು ನಿಲುಗಡೆ ಮಾಡಲು ಸಾಧ್ಯವಿಲ್ಲ, ರಸ್ತೆಯಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಗೇಟ್ ಹೊರಗಡೆ ಕಾಲಿಡುವಂತಿಲ್ಲ, ಮರದ ಹಲಗೆಯ ಆಶ್ರಯ ಪಡೆದು ಮನೆಯಿಂದ ಹೊರಗಡೆ ಹೋಗುತ್ತಿದ್ದಾರೆ.
ಕಳೆದ ವರ್ಷ ಭಾರಿ ಮಳೆ ಬಂದಿದ್ ಸಂದರ್ಭದಲ್ಲಿ ಎರಡು ವಾರಗಳನ್ನು ತೆಗೆದುಕೊಂಡು ಚರಂಡಿ ನೀರು ರಸ್ತೆಗೆ ಹರಿಯದಂತೆ ಮಾಡಿದ್ದರು. ಆದರೆ ಈಗ ಆ ಬೀದಿಯಲ್ಲಿ ಸಂಪೂರ್ಣವಾಗಿ ಎಲ್ಲ ಕಡೆಗಳಲ್ಲೂ ಒಳಚರಂಡಿ ತೆರೆಯಲಾಗಿದೆ, ತೆರೆದು ಕಾಮಗಾರಿ ಮಾಡದೆ ಹಾಗೆಯೇ ಇಟ್ಟಿದ್ದಾರೆ ಎಂದು ಸ್ಥಳೀಯರಾದ ರಾಮಲಿಂಗಪ್ಪ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಬರುತ್ತಿರುವ ದುರ್ವಾಸನೆಗೆ ಹಿರಿಯ ನಾಗರಿಕರಿಗಂತೂ ಇನ್ನೂ ಕಷ್ಟವಾಗಿದೆ. 7ನೇ ಸೆಕ್ಟರ್ ನ 7ನೇ ಮುಖ್ಯರಸ್ತೆಯಲ್ಲಿ ಅಷ್ಟು ತೊಂದರೆಯಾಗಿಲ್ಲ. ಉಳಿದೆಲ್ಲಾ ಕಡೆಗಳಲ್ಲಿ ನಡೆದುಕೊಂಡು ಹೋಗುವುದು ಕೂಡ ಕಷ್ಟಸಾಧ್ಯವಾಗಿದೆ ಎಂದು ಎಂದು ಅಳಲು ತೋಡಿಕೊಂಡಿದ್ದಾರೆ.