Get Updates
Get notified of breaking news, exclusive insights, and must-see stories!

ಕೆಲಸ ಕಳೆದುಕೊಂಡ ಖಿನ್ನತೆಯಿಂದ ಹೊರಬರುವುದು ಹೇಗೆ?

ಬೆಂಗಳೂರು, ಜುಲೈ 16 : ಕಂಪನಿಯ ವೆಚ್ಚ ಜಾಸ್ತಿಯಾಗಿ ಖರ್ಚು ಕುಗ್ಗಿಸುವುದು, ನೇಮಕಾತಿ ನೀತಿಯಲ್ಲಿ ಬದಲಾವಣೆಯಾಗಿರುವುದು, ಭಾರೀ ನಷ್ಟ ಹೊಂದಿರುವುದು ಮುಂತಾದ ಕಾರಣಗಳಿಂದ ಭಾರತದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಯಜ್ಞ ಆರಂಭವಾಗಿದೆ.

ನಾನಾ ಕಾರಣಗಳಿಂದಾಗಿ ಕೆಲಸದಿಂದ ಉದ್ಯೋಗಿಗಳನ್ನು ಮನೆಗೆ ಕಳಿಸುವುದು ಒಂದು ರೀತಿಯದಾದರೆ, ಕೆಲಸ ಎಲ್ಲಿ ಕಳೆದುಕೊಳ್ಳುತ್ತೇನೋ ಎಂಬ ಆತಂಕ, ದುಗುಡ ಸಾಫ್ಟ್ ವೇರ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಿಹ್ವಲಗೊಳಿಸಿದೆ. ಇದು ಸಾಫ್ಟ್ ವೇರ್ ಕಂಪನಿಗಳಲ್ಲಷ್ಟೇ ಅಲ್ಲ, ಇತರ ಕಂಪನಿಗಳಲ್ಲಿಯೂ ನಡೆಯುತ್ತಿದೆ.

ಇತ್ತೀಚೆಗೆ ಟೆಕ್ ಮಹೀಂದ್ರ ಕಂಪನಿಯಿಂದ ಹಲವಾರು ಉದ್ಯೋಗಿಗಳನ್ನು ನೋಟೀಸ್ ಕೂಡ ನೀಡದೆ ತಕ್ಷಣದಿಂದ ಜಾರಿಯಾಗುವಂತೆ ಪಿಂಕ್ ಸ್ಲಿಪ್ ನೀಡಿದ್ದು, ಎಚ್ಆರ್ ಮ್ಯಾನೇಜರ್ ಆಡಿದ್ದ ಮಾತನ್ನು ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ನೀಡಿದ್ದು ಕಂಪನಿಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಸೂಚನೆ ನೀಡಿದೆ.

ಮೂರ್ನಾಲ್ಕು ದಿನಗಳ ಹಿಂದೆ ಟೆಕ್ಕಿಯೊಬ್ಬರು ಕೆಲಸ ಕಳೆದುಕೊಳ್ಳುವ ಭಯದಿಂದ ಆತ್ಮಹತ್ಯೆಗೆ ಶರಣಾಗಿರುವುದು ದಂಗುಬಡಿಸುವಂತಿದೆ. ಮತ್ತೊಂದು ಘಟನೆಯಲ್ಲಿ ತೀರ ಮಂಕಾಗಿದ್ದ ಯುವತಿಯೊಬ್ಬಳನ್ನು ಸೈಕಿಯಾಟ್ರಿಸ್ಟ್ ಬಳಿ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಆಕೆ ಕೆಲಸ ಕಳೆದುಕೊಂಡಿದ್ದರಿಂದ ಹೀಗೆ ಆಗಿದ್ದಾಳೆ ಎಂಬ ಸತ್ಯ ಬಹಿರಂಗವಾಗಿತ್ತು.

ಕಾಸ್ಟ್ ಕಟಿಂಗ್ ಮಾಡುವುದು, ಉದ್ಯೋಗಿಗಳನ್ನು ಮನೆಗೆ ಕಳಿಸುವುದು ಸಾಫ್ಟ್ ವೇರ್ ಕಂಪನಿಗಳಲ್ಲಿ ಹೊಸದೇನಲ್ಲ. ಆದರೆ, ಇದ್ದಕ್ಕಿದ್ದಂತೆ ಯಾವುದೇ ನೋಟೀಸ್ ಕೂಡ ಇಲ್ಲದೆ ಕೆಲಸದಿಂದ ತೆಗೆಯುವುದು ಹಲವರನ್ನು ಸಂಕಷ್ಟಮಯ ಪರಿಸ್ಥಿತಿಗೆ ತಳ್ಳಬಹುದು. ಮುಂದೆ ಹೇಗಪ್ಪಾ ಜೀವನ ಎಂಬುದು ತಿಳಿಯದಂತೆ ಅವರನ್ನು ಕಕ್ಕಾಬಿಕ್ಕಿಯಾಗಿಸಿಬಿಡುತ್ತದೆ.

ಸೈಕಿಯಾಟ್ರಿಸ್ಟ್ ಬಳಿ ಹೋಗುತ್ತಿದ್ದಾರೆ ಟೆಕ್ಕಿಗಳು

ಸೈಕಿಯಾಟ್ರಿಸ್ಟ್ ಬಳಿ ಹೋಗುತ್ತಿದ್ದಾರೆ ಟೆಕ್ಕಿಗಳು

ಈ ಕಾರಣದಿಂದಾಗಿಯೇ, ಮುಂದಾಲೋಚನೆಯಿಂದ ಹಲವಾರು ಟೆಕ್ಕಿಗಳು ಸೈಕಿಯಾಟ್ರಿಸ್ಟ್ ಬಳಿಗೆ, ವೃತ್ತಿಪರ ಕೌನ್ಸೆಲರ್ಸ್ ಗಳಿಗೆ ಸಮಾಲೋಚನೆಗಾಗಿ, ತಳಮಳದಿಂದ ಹೊರಬರಲು, ಖಿನ್ನತೆಗೊಳಗಾಗದಿರುವುದು ಹೇಗೆಂದು ತಿಳಿಯಲು ಹೋಗುತ್ತಿದ್ದಾರೆ. ಯುವರ್ ದೋಸ್ತ್ ಎಂಬ ಕಂಪನಿ, ಕಳೆದ ತಿಂಗಳು ಇಂಥ ಟೆಕ್ಕಿಗಳಾಗಿಯೇ ಸಮಾಲೋಚನಾ ಶಿಬಿರವನ್ನು ಆಯೋಜಿಸಿತ್ತು.

ಕರ್ನಾಟಕದ ಟೆಕ್ಕಿಗಳೇ ಹೆಚ್ಚಿನವರು

ಕರ್ನಾಟಕದ ಟೆಕ್ಕಿಗಳೇ ಹೆಚ್ಚಿನವರು

ಈ ಸಮಾಲೋಚನಾ ಶಿಬಿರದಲ್ಲಿ ಶೇ.43ರಷ್ಟು ಮಂದಿ ಸಾಫ್ಟ್ ವೇರ್ ಕ್ಷೇತ್ರದಲ್ಲಿ ತೊಡಗಿಕೊಂಡು ಕೆಲಸ ಕಳೆದುಕೊಂಡವರು. ಎಲ್ಲಕ್ಕಿಂತ ಆಘಾತಕಾರಿ ಸಂಗತಿಯೆಂದರೆ, ಅತೀಹೆಚ್ಚು ಅಂದರೆ ಶೇ.15ರಷ್ಟು ಟೆಕ್ಕಿಗಳು ಕರ್ನಾಟಕದವರು. ಕರ್ನಾಟಕ ಸಾಫ್ಟ್ ವೇರ್ ಕ್ಷೇತ್ರದ ಕೇಂದ್ರವಾಗಿರುವುದರಿಂದ ಕೆಲಸ ಕಳೆದುಕೊಳ್ಳುವವರೂ ಇಲ್ಲಿಯೇ ಹೆಚ್ಚು. ಮಹಾರಾಷ್ಟ್ರ ಮತ್ತು ದೆಹಲಿಯಿಂದ ಕೂಡ ಹಲವಾರು ಟೆಕ್ಕಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ಸಾಲ ಮಾಡಿ ತುಪ್ಪ ತಿನ್ನುವವರೇ ಹೆಚ್ಚು

ಸಾಲ ಮಾಡಿ ತುಪ್ಪ ತಿನ್ನುವವರೇ ಹೆಚ್ಚು

ಕೆಲಸ ಕಳೆದುಕೊಂಡವರು ಎಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೋ, ಹಾಗೂಹೀಗೂ ಕೆಲಸ ಉಳಿಸಿಕೊಂಡವರು ಕೂಡ, ಯಾವಾಗ ಕೆಲಸ ಹೋಗುತ್ತೆ ಎಂಬ ಭಯದಲ್ಲಿ ಖಿನ್ನತೆಗೊಳಗಾಗುತ್ತಿದ್ದಾರೆ. ಇದು ಕೆಲಸ ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತ ತಂದಿದೆ ಎನ್ನುತ್ತಾರೆ ಮಾನಸಿಕತಜ್ಞರು. ಸಾಫ್ಟ್ ವೇರ್ ಕಂಪನಿಯಲ್ಲಿ ಒಳ್ಳೆಯ ಕೆಲಸವಿರತ್ತೆ, ಸಾಕಷ್ಟು ಸಂಬಳವೂ ಬರುತ್ತೆ ಎಂದು ಯದ್ವಾತದ್ವಾ ಸಾಲ ಮಾಡಿ ತುಪ್ಪ ತಿನ್ನುತ್ತಿರುವವರ ಸಂಖ್ಯೆಯೇ ಹೆಚ್ಚಿನದು.

ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ

ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ

ಇದೊಂದು ರೀತಿ ಸಾಂಕ್ರಾಮಿಕ ರೋಗದಂತೆ ಹಬ್ಬಿಕೊಳ್ಳುತ್ತಿದೆ. ಕೆಲಸ ಸುಭದ್ರವಾಗಿರುವವರನ್ನು ಕೂಡ ಈ ಪಿಡುಗು ಖಿನ್ನತೆಗೆ ದೂಡುತ್ತಿದೆ. ಇದಕ್ಕೊಂದು ತ್ವರಿತವಾಗಿ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ. ಕೆಲವೊಬ್ಬರಿಗೆ ಕೆಲಸ ಕಳೆದುಕೊಂಡರೆ ಹೇಗೆ ಇತರರಿಗೆ ಮುಖ ತೋರಿಸುವುದು ಎನ್ನುವುದು ಚಿಂತೆಯಾದರೆ, ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಇದರಿಂದ ಹೊರಬರುವುದು ಹೇಗೆ?

ಇದರಿಂದ ಹೊರಬರುವುದು ಹೇಗೆ?

ಒಂದೇ ನಿಪುಣತೆಗೆ ನೆಚ್ಚಿಕೊಳ್ಳದೆ. ತತ್ಸಮವಾದ ಇತರ ನೈಪುಣ್ಯತೆಯನ್ನೂ ಕಲಿತುಕೊಳ್ಳಲು ಟೆಕ್ಕಿಗಳು ಕಲಿತು ಅಪ್‌ಗ್ರೇಡ್ ಆಗಬೇಕೆನ್ನುವುದು ತಜ್ಞರ ಉವಾಚ. ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡು ಆಘಾತ ಅನುಭವಿಸುವುದಕ್ಕೆ ಮುನ್ನವಾಗಿಯೇ ಕೆಲಸ ಕಳೆದುಕೊಳ್ಳುವುದಕ್ಕೆ ಕೂಡ ತಕ್ಕ ಸಿದ್ಧತೆ ಮಾಡಿಕೊಳ್ಳುವುದು ಮತ್ತು ಬಂದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವುದು.

ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ

ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ

ಕೆಲಸ ಹೋದರೆ ಜಗತ್ತೇ ಮುಳುಗಿದಂತಲ್ಲ. ಜಗತ್ತು ವಿಶಾಲವಾಗಿದೆ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ವೇದಾಂತಕ್ಕೆ ಬದ್ಧರಾಗುವುದು. ಒಂದು ಕೆಲಸ ಹೋದರೆ ಮತ್ತೊಂದು ಅದಕ್ಕಿಂತಲೂ ಉತ್ತಮವಾದ ಕೆಲಸ ಸಿಗುತ್ತದೆಂಬ ಆಶಾಭಾವನೆಯಿಂದ ಮುನ್ನುಗ್ಗುವುದು. ಸೋಲು ಗೆಲುವಿನ ಮುಂದಿನ ಮೆಟ್ಟಿಲೆಂದು ಪರಿಗಣಿಸಿ, ಜನ ಏನು ಮಾತಾಡುತ್ತಾರೆಂದು ತಲೆ ಕೆಡಿಸಿಕೊಳ್ಳದೆ ಗೆಲುವಿಗೆ ಪ್ರಯತ್ನಗಳನ್ನು ಮಾಡುತ್ತಲೇ ಇರುವುದು.

ಸಮಾಧಾನ ಚಿತ್ತದಿಂದ ಪರಿಸ್ಥಿತಿಯನ್ನು ಎದುರಿಸುವುದು

ಸಮಾಧಾನ ಚಿತ್ತದಿಂದ ಪರಿಸ್ಥಿತಿಯನ್ನು ಎದುರಿಸುವುದು

ಕೆಲಸ ಕಳೆದುಕೊಳ್ಳುವುದು ಎಂಥವರ ಹೃದಯದ ಜಂಘಾಬಲವನ್ನೇ ಉಡುಗಿಸಿ ಬಿಡುತ್ತದೆ. ಆದರೆ, ಅದನ್ನೆಲ್ಲ ಹಿಂದೆ ತಳ್ಳಿ, ಇದು ದೇವರೇ ಕೊಟ್ಟ ವರಪ್ರಸಾದವೇನೋ ಎಂಬಂತೆ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವುದು. ಹೊಸ ಉದ್ದಿಮೆ ಸ್ಥಾಪಿಸಲು, ಸ್ಟಾರ್ಟ್ ಅಪ್ ಕಂಪನಿ ಆರಂಭಿಸಲು ಸಾಧ್ಯವೇ ಎಂದು ನೋಡುವುದು. ಎಲ್ಲಕ್ಕಿಂತ ಹೆಚ್ಚಾಗಿ ಆರಾಮವಾಗಿ ಕುಳಿತುಕೊಂಡು, ಮನೆಮಂದಿಯೊಂದಿಗೆ ಇರುವ ವಿಚಾರವನ್ನು ತಿಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+