ಮತ ಖರೀದಿಗೆ ಎಂಬಿಟಿ ನಾಗರಾಜ್ ದರಪಟ್ಟಿ ಹೀಗಿದೆ!
Recommended Video
ಬೆಂಗಳೂರು, ನವೆಂಬರ್ 26 : ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಬಿಜೆಪಿ ಅಭ್ಯರ್ಥಿ ಎಂಬಿಟಿ ನಾಗರಾಜ್ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆರೋಪ ಮಾಡಿದರು.
ಬೈಲನರಸಾಪುರ ಗ್ರಾಮದಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, "ಬಿಜೆಪಿ ಅಭ್ಯರ್ಥಿ ಎಂಬಿಟಿ ನಾಗರಾಜ್ ನನಗೆ 120 ಕೋಟಿ ಬೆಲೆ ಕಟ್ಟಿದರು. ನಾನು ಸ್ವಾಭಿಮಾನಕ್ಕಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ" ಎಂದು ಹೇಳಿದರು.
ಉಪ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಹೊಸಕೋಟೆ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರನ್ನು ಎದುರು ಹಾಕಿಕೊಂಡು ಶರತ್ ಬಚ್ಚೇಗೌಡ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ನಿಂದ ಪದ್ಮಾವತಿ ಸುರೇಶ್, ಬಿಜೆಪಿಯಿಂದ ಎಂಟಿಬಿ ನಾಗರಾಜ್ ಅಭ್ಯರ್ಥಿಗಳು. ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಜೆಡಿಎಸ್ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಶರತ್ ಬಚ್ಚೇಗೌಡಗೆ ಬೆಂಬಲ ಘೋಷಣೆ ಮಾಡಿದೆ.

ಶರತ್ ಬಚ್ಚೇಗೌಡ ಹೇಳಿದ್ದೇನು?
"ಎಂಟಿಬಿ ನಾಗರಾಜ್ ಅವರ ಇಡೀ ಆಸ್ತಿಯನ್ನು ಕೊಟ್ಟರೂ ನಾನು ನನ್ನನ್ನು ಮಾರಾಟ ಮಾಡಿಕೊಳ್ಳುವುದಿಲ್ಲ. ಸ್ವಾಭಿಮಾನವನ್ನು ಯಾರಿಂದಲೂ ಕೊಳ್ಳುವುದಕ್ಕೆ ಆಗುವುದಿಲ್ಲ" ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.

ಖರೀದಿಗೆ ದರ ನಿಗದಿ ಮಾಡಿದ್ದಾರೆ
"ಎಂಟಿಬಿ ನಾಗರಾಜ್ ರಾಜಕಾರಣಿಗಳಿಗೆ ದರ ನಿಗದಿ ಮಾಡಿ ಖರೀದಿಗೆ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ 2 ಲಕ್ಷ, ತಾಲೂಕು ಪಂಚಾಯಿತಿ ಸದಸ್ಯರಿಗೆ 5 ಲಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ 50 ರಿಂದ 70 ಲಕ್ಷ ಬೆಲೆ ಕಟ್ಟಿದ್ದಾರೆ" ಎಂದು ಶರತ್ ಬಚ್ಚೇಗೌಡ ಆರೋಪಿಸಿದರು.

ಹಣದ ಆಮಿಷವೊಡ್ಡಿಲ್ಲ
"ನಾನು ಯಾರಿಗೂ ಹಣದ ಆಮಿಷವೊಡ್ಡಿಲ್ಲ. ಸತ್ಯವಾಗಿಯೂ ಬೆಲೆ ಕಟ್ಟಿಲ್ಲ. ನಾನು ಸ್ವಾಭಿಮಾನಕ್ಕಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ. ಕ್ಷೇತ್ರದ ಜನರಿಗಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ" ಎಂದು ಶರತ್ ಬಚ್ಚೇಗೌಡ ಹೇಳಿದರು.

ನಮ್ಮಿಬ್ಬರ ವ್ಯಕ್ತಿತ್ವ, ಸಿದ್ದಾಂತ ಬೇರೆ
"ನಾನು ಮತ್ತು ನಾಗರಾಜ್ ಒಂದೇ ನಾಣ್ಯದ ಎರಡು ಮುಖವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ನಮ್ಮಿಬ್ಬರ ವ್ಯಕ್ತಿತ್ವ, ಸಿದ್ಧಾಂತ ಬೇರೆ-ಬೇರೆ" ಎಂದು ಶರತ್ ಬಚ್ಚೇಗೌಡ ಹೇಳಿದರು.












Click it and Unblock the Notifications