Bengaluru Flyover: ಹೊಸಕೆರೆಹಳ್ಳಿ ಮೇಲ್ಸೇತುವೆ ಬಾಕಿ ಕಾಮಗಾರಿ ವಾರಾಂತ್ಯಕ್ಕೆ ಪೂರ್ಣ?: ಪಾಲಿಕೆ ಆಯುಕ್ತ
ಬೆಂಗಳೂರು, ನವೆಂಬರ್ 05: ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಮೆಲ್ಸೇತುವೆಗಳು ಸಾಕಷ್ಟು ಕೊಡುಗೆ ನೀಡುತ್ತಿವೆ. ಇವುಗಳ ನಿರ್ಮಾಣ ಕಾಮಗಾರಿಯಲ್ಲಿ ಆಗಾಗ ವಿಳಂಬವಾಗುತ್ತವೆ. ಇದೀಗ ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಬಾಕಿ ಕಾಮಗಾರಿ ಪರಿಶೀಲಿಸಿದ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ಪಿ.ಇ.ಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್ನಲ್ಲಿ ಕೈಗೆತ್ತಿಕೊಳ್ಳಲಾದ ಮೇಲ್ಸೇತುವೆಯ ಬಾಕಿ ಕಾಮಗಾರಿ ವೀಕ್ಷಿಸಿದರು. ಇದೇ ವಾರದಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.

ಹೊಸಕೆರೆಹಳ್ಳಿ ಜಂಕ್ಷನ್ನಲ್ಲಿನ 500 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ. 90 ರಷ್ಟು ಪೂರ್ಣಗೊಂಡಿದೆ. ಮೇಲ್ಸೇತುವೆ ಮಧ್ಯಭಾಗದಲ್ಲಿ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಎರಡೂ ಕಡೆ ವೆಟ್ ಮಿಕ್ಸ್ ಹಾಕಲಾಗಿದೆ. ಡಾಂಬರೀಕರಣ ಮಾಡುವ ಕೆಲಸ ಬಾಕಿ ಇದೆ. ಬಣ್ಣ ಬಳಿಯುವ ಕೆಲಸವೂ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೇಲ್ಸೇತುವೆಯ ಎರಡೂ ಬದಿಯ ಸರ್ವೀಸ್ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಹಾಗೂ ಹಾಳಾದ ಭಾಗಗಳನ್ನು ಕೂಡಲೇ ದುರಸ್ತಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಮೇಲ್ಸೇತುವೆ ಸುತ್ತಮುತ್ತಲಿರುವ ಭಗ್ನಾವಶೇಷ/ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು
ಟ್ರಯಲ್ ರನ್ ಮಾಡುವಂತೆ ನಿರ್ದೇಶನ
ಈ ಹೊಸಕೆರೆ ಹಳ್ಳಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ಕೂಡಲೆ ಮುಂದಿನ ವಾರ ವಾಹನಗಳ ಟ್ರಯಲ್ ರನ್ ಮಾಡಬೇಕು. ಆ ಬಳಿಕ ಸೂಕ್ತ ದಿನಾಂಕವನ್ನು ನಿಗದಿಪಡಿಸಿ ಲೋಕಾರ್ಪಣೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ವಿವಿಧೆಡೆ ಪ್ರಗತಿ ಪರಿಶೀಲನೆ
ಜೈ ಭಾರತ್ ನಗರದ 7ನೇ ಅಡ್ಡರಸ್ತೆಯಲ್ಲಿ ರೈಲ್ವೆ ಇಲಾಖೆ ರಿಟೈನಿಂಗ್ ವಾಲ್ ಮತ್ತು ಒಳಚರಂಡಿ ನಿರ್ಮಿಸಿರುವುದರಿಂದ ಮಳೆನೀರನ್ನು ಮುಖ್ಯ ಒಳಚರಂಡಿಗೆ (SWD) ಹರಿಸಲು ಸಾಧ್ಯವಾಗದೆ ಮತ್ತು ರಸ್ತೆ ಬದಿಯ ಒಳಚರಂಡಿಯ ಮಟ್ಟವು ರೈಲ್ವೆಯ ಹೊಸ ಒಳಚರಂಡಿಗಿಂತ ಕಡಿಮೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಜಲಮಂಡಳಿಯ ಒಳಚರಂಡಿ ಪೈಪ್ಲೈನ್ ರೈಲ್ವೆ ಆವರಣದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕಿದ್ದು, ಈ ಕುರಿತು ಗೌರವಾನ್ವಿತ ರೈಲ್ವೆ ಮತ್ತು ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
ಒಟ್ಟು 48 ಎಕರೆ 34 ಗುಂಟೆಯ ಪ್ರದೇಶವಿರುವ ಬಾಣಸವಾಡಿ ಕೆರೆ ಪ್ರದೇಶದಲ್ಲಿ, ಬಿಡಿಎ ವತಿಯಿಂದ 17 ಎಕರೆ ಪ್ರದೇಶದಲ್ಲಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಉಳಿದ 25 ಎಕರೆ ಪ್ರದೇಶವನ್ನು ನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಕಂದಾಯ ಇಲಾಖೆಯೊಂದಿಗೆ ಚರ್ಚಿಸಲು ಆಯುಕ್ತರು ಸೂಚಿಸಿದರು.












Click it and Unblock the Notifications