ಪರಪ್ಪನ ಅಗ್ರಹಾರ ಸುತ್ತ-ಮುತ್ತ ಅಮ್ಮ ಅಭಿಮಾನಿಗಳ ದಂಡು
ಬೆಂಗಳೂರು, ಅ. 18 : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ. ಅಮ್ಮನನ್ನು ಸ್ವಾಗತಿಸಲು ತಮಿಳುನಾಡಿನಿಂದ ಅವರ ನೂರಾರು ಅಭಿಮಾನಿಗಳು ಆಗಮಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸೆ.27ರಂದು ಜೆ.ಜಯಲಲಿತಾ ಮತ್ತು ಅವರ ಆಪ್ತರಾದ ಶಶಿಕಲಾ, ಇಳವರಸಿ ಮತ್ತು ಸಾಕುಮಗ ಸುಧಾಕರನ್ಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಕಳೆದ 21 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರು ಇಂದು ಬಿಡುಗಡೆಯಾಗಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಸುತ್ತ-ಮುತ್ತ 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದ್ ಬಸ್ತ್ ಕೈಗೊಳ್ಳಲಾಗಿದೆ. ಜೈಲಿನಿಂದ ನೇರವಾಗಿ ಜಯಲಲಿತಾ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಅಲ್ಲಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಪ್ರಯಾಣಿಸಲಿದ್ದಾರೆ. [ಚಿತ್ರಗಳು: ಮಾಲ ಎಂ, ಎಲೆಕ್ಟ್ರಾನಿಕ್ ಸಿಟಿ]

ಬ್ಯಾರಿಕೇಡ್ ರಕ್ಷಣೆ
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಶುಕ್ರವಾರ ಕೇಂದ್ರ ಕಾರಾಗೃಹಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದ್ದು, ಶನಿವಾರವೂ ಅದನ್ನು ಮುಂದುವರೆಸಲಾಗಿದೆ.

ವಾಹನ ಸಂಚಾರಕ್ಕೆ ವಿಶೇಷ ವ್ಯವಸ್ಥೆ
ಪರಪ್ಪನ ಅಗ್ರಹಾರದ ಸುತ್ತಮುತ್ತ ವಾಹನ ಸಂಚಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಣ್ಯರ ವಾಹನಗಳು ತೆರಳಲು ಪ್ರತ್ಯೇಕ ಮಾರ್ಗದ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದಾರೆ.

ಸಂಚಾರ ಸುಗಮಗೊಳಿಸಲು ಸಕಲ ವ್ಯವಸ್ಥೆ
ಗಾಡಿ ಎತ್ತಯ್ಯ ಮೊದ್ಲು ಎಂದು ಪೊಲೀಸ್ ಅಧಿಕಾರಿಗಳು ವಾಹನ ಕದಲಿಸದೆ ಇದ್ದವರಿಗೆ ಸೂಚನೆ ನೀಡುತ್ತಿದ್ದರು.

ಅಮ್ಮಾ ಅಭಿಮಾನಿಗಳ ಸಂಭ್ರಮ
ತಮಿಳುನಾಡಿನ 'ಅಮ್ಮ'ನಿಗೆ ಜಾಮೀನು ದೊರೆತ ಸಂಭ್ರಮವನ್ನು, ಅವರ ಅಭಿಮಾನಿಗಳು ಮಾಧ್ಯಮಗಳ ಮುಂದೆ ಹಂಚಿಕೊಂಡರು.

ಅಮ್ಮನ ಭಾವಚಿತ್ರದ ಮೆರವಣಿಗೆ
ಜಯಾ ಅವರ ಭಾವಚಿತ್ರ ಮತ್ತು ಅಣ್ಣಾಡಿಎಂಕೆ ಪಕ್ಷದ ಬಾವುಟಗಳು ಶುಕ್ರವಾರ ಮತ್ತು ಶನಿವಾರ ಪರಪ್ಪನ ಅಗ್ರಹಾರದ ಸುತ್ತಾ ರಾರಾಜಿಸುತ್ತಿವೆ.

ಅಮ್ಮನ ಅಭಿಮಾನಿಗಳಿಗೆ ದೂರ ಹೋಗವಂತೆ ಸೂಚನೆ
ಭದ್ರತೆಯ ದೃಷ್ಟಿಯಿಂದ ಅಮ್ಮನ ಬೆಂಬಲಿಗರನ್ನು ಪೊಲೀಸರು ಕಾರಾಗೃಹದಿಂದ ದೂರ ತೆರಳುವಂತೆ ಸೂಚಿಸುತ್ತಿದ್ದರು.

ಅಲೋಕ್ ಕುಮಾರ್ ಉಪಸ್ಥಿತಿ
ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕಾರಾಗೃಹದ ಬಳಿ ಖುದ್ದು ಹಾಜರಿದ್ದು, ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.

ಖಾಕಿ ಸರ್ಪಗಾವಲು
ಪರಪ್ಪನ ಅಗ್ರಹಾರ ಜೈಲಿನ ಸುತ್ತ-ಮುತ್ತ 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಖಾಕಿ ಸರ್ಪಗಾವಲು ಹಾಕಲಾಗಿದೆ.












Click it and Unblock the Notifications