ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಮರಳು ವಿತರಿಸಿ: ಹೈಕೋರ್ಟ್
ಬೆಂಗಳೂರು, ಜನವರಿ 17: ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ಹರಾಜು ನೀತಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ, ಮರಳು ಹರಾಜು ನೀತಿ, ಅವೈಜ್ಞಾನಿಕ ಮತ್ತು ಅವಾಸ್ತವಿಕ' ಎಂದು ಅಭಿಪ್ರಾಯಪಟ್ಟಿದೆ.
ಹಾವೇರಿಯ ವನಜಾಕ್ಷಿ ಎಂಬುವರು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 'ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಧಾನ್ಯ ವಿತರಿಸುವಂತೆ, ಇಂದಿರಾ ಕ್ಯಾಂಟೀನ್ಗಳಲ್ಲಿ ಊಟ ವಿತರಿಸುವ ಮಾದರಿಯಲ್ಲಿಯೇ ಮರಳನ್ನೂ ಸರ್ಕಾರಿ ಡಿಪೊಗಳಲ್ಲಿ ವಿತರಿಸಬೇಕು, ಮರಳು ಮಾರಾಟವನ್ನು ಖಾಸಗಿಯವರ ಹಿಡಿತದಿಂದ ತಪ್ಪಿಸಬೇಕು' ಎಂದು ಹೈಕೋರ್ಟ್ ಸಲಹೆ ನೀಡಿದೆ.
ಹಾವೇರಿ ಜಿಲ್ಲೆಯ ಕಲ್ಲಿಹಾಳ್ನ ವನಜಾಕ್ಷಿ ಎಂಬುವರು, ಸರ್ಕಾರದ ವತಿಯಿಂದ ನಡೆಸಿದ್ದ ಮರಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 'ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಲಾಗಿದ್ದರೂ ನನ್ನ ಅರ್ಜಿ ತಿರಸ್ಕರಿಸಲಾಗಿದೆ' ಎಂದು ಆರೋಪಿಸಿ ವನಜಾಕ್ಷಿ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಪಂಡ ಹೈಕೋರ್ಟ್ 'ಈ ಮರಳು ನೀತಿ ಸರ್ಕಾರಕ್ಕೆ ಮೆದುಳು ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ. ಇದು ಸೂಕ್ತ ಜ್ಞಾನವಿಲ್ಲದೆ ರೂಪಿಸಿರುವ ನೀತಿ. ನಮ್ಮ ಜೀವಮಾನದಲ್ಲಿಯೇ ಇಂತಹ ಪ್ರಕರಣವನ್ನು ನೋಡಿರಲಿಲ್ಲ, ಸರ್ಕಾರಕ್ಕೆ ಇಲಾಖೆಯನ್ನು ನಡೆಸುವುದು ಗೊತ್ತಿಲ್ಲವೇ' ಎಂದು ಪ್ರಶ್ನಿಸಿತು.
'ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಕೂಗಿದರೂ, ಅದನ್ನು ಸ್ವೀಕರಿಸಲು ಸರ್ಕಾರಕ್ಕೆ ಏನು ಅಡ್ಡಿಯಿದೆ, ಹೆಚ್ಚು ಹಣ ನೀಡುತ್ತೇವೆ ಎಂದದೂ ಟೆಂಡರ್ ಏಕೆ ನಿರಾಕರಿಸಲಾಗುತ್ತಿದೆ' ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರಿ ವಕೀಲರ ಮೂಲಕ ಕೂಡಲೇ ಉತ್ತರಿಸಬೇಕು ಎಂದು ಹೈಕೋರ್ಟ್ ಗಣಿ ಭೂ ವಿಜ್ಞಾನ ಇಲಾಖೆಗೆ ಸೂಚಿಸಿತು.












Click it and Unblock the Notifications