ಬೆಂಗಳೂರಲ್ಲಿ ಮತ್ತೆ ಮಳೆ; ಕೆರೆಯಂತಾದ ಹಲವು ರಸ್ತೆಗಳು
ಬೆಂಗಳೂರು, ಅಕ್ಟೋಬರ್ 15; ವಿಜಯದಶಮಿ ದಿನ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಸಹಿತ ಮಳೆ ಜೋರಾಗಿ ಸುರಿಯುತ್ತಿದ್ದು, ನಗರದ ಹಲವು ರಸ್ತೆಗಳು ಕೆರೆಯಂತಾಗಿದೆ.
ಶುಕ್ರವಾರ ಬೆಳಗ್ಗೆ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 1 ಗಂಟೆಗೆ ಮೋಡ ಕವಿದಿದ್ದು, 3 ಗಂಟೆಗೆ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಗರದಲ್ಲಿ ಮಳೆಯಾಗಿದೆ.
ಜಯನಗರ, ಹನುಮಂತನಗರ, ಮೆಜೆಸ್ಟಿಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಸೌತ್ ಎಂಡ್ ವೃತ್ತ, ವಿದ್ಯಾಪೀಠ ವೃತ್ತ ಮಂತಾದ ಕಡೆ ಭಾರೀ ಮಳೆಯಾಗಿದೆ. ರಾತ್ರಿ ಸಹ ಮಳೆ ಮುಂದುವರೆಯುವ ಸೂಚನೆ ಇದೆ. ಗುರುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.

ನಗರದಲ್ಲಿ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ವಿಜಯದಶಮಿ ಹಬ್ಬದ ಪ್ರಯುಕ್ತ ರಜೆ ಇದ್ದು, ಅಂಗಡಿ ಪೂಜೆಗಳನ್ನು ಮಾಡಲು ಸಿದ್ಧರಾಗುತ್ತಿದ್ದ ಜನರಿಗೆ ಮಳೆ ಸಂಕಷ್ಟ ತಂದಿದೆ. ಬೈಕ್ ಸವಾರರು ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಪರದಾಡಿದರು.
ಇಂದು ಬೆಂಗಳೂರಿನಲ್ಲಿ ಭಾರಿ ಮಳೆ ಬಂದಿದ್ದರಿಂದ ಹೆಚ್.ಎಸ್.ಆರ್ ಲೇಔಟ್ ಬೆಂಗಳೂರು ಇಲ್ಲಿ ರಸ್ತೆ ಹಾಗೂ ಕೆಲವು ಮನೆಗಳಿಗೆ ನೀರು ತುಂಬಿಕೊಂಡಿದ್ದು, ಅಗ್ನಿಶಾಮಕ ಇಲಾಖೆಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ನೀರು ತಗೆಯುವ ಕಾರ್ಯಚರಣೆ ಪ್ರಗತಿಯಲ್ಲಿರುತ್ತದೆ. pic.twitter.com/jtGsyx4AAK
— ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (@KarFireDept) October 15, 2021
ಮಳೆಯಿಂದಾಗಿ ಅನಾಹುತವಾದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರ ಮಾಹಿತಿ ನೀಡಿದೆ. ಆದರೆ ಮಲ್ಲೇಶ್ವರ ಸಮೀಪದ ಗಾಯತ್ರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ಸಿಕ್ಕಿದೆ.
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿ ಮತ್ತು ವಾಯುಭಾರ ಕುಸಿತದ ಕಾರಣ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್ 15ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಪ್ರತಿದಿನ ಮಳೆಯಾಗುತ್ತಲೇ ಇದೆ. ಅಕ್ಟೋಬರ್ 20ರ ಬಳಿಕ ಈಶಾನ್ಯ ಮುಂಗಾರು ಆರಂಭವಾಗಲಿದ್ದು, ಮಳೆಯ ಅಬ್ಬರ ಕಡಿಮೆಯಾಗಲಿದೆ.
ಮೈಸೂರಿನಲ್ಲಿ ಮಳೆ; ಮೈಸೂರು ದಸರಾ 2021ಕ್ಕೆ ಜಂಬೂ ಸವಾರಿ ಮೂಲಕ ಶುಕ್ರವಾರ ತೆರೆ ಬಿದ್ದಿದೆ. ಮೈಸೂರಿನಲ್ಲಿ ಜಂಬೂ ಸವಾರಿ ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತಿದ್ದಂತೆ ಮಳೆಯಾಗಿದೆ. ಸುಮಾರು 1 ಗಂಟೆಗಳ ಕಾಲ ನಗರದಲ್ಲಿ ಮಳೆ ಸುರಿದಿದೆ.
ಅರಮನೆ ಆವರಣದಲ್ಲಿ ಜಂಬೂ ಸವಾರಿ ನೋಡಲು ಆಗಮಿಸಿದ್ದ ಜನರು ಮಳೆಯಲ್ಲಿ ತೊಯ್ದರು. ವಾಹನ ಸವಾರರು ನಗರದಿಂದ ಹೊರ ಹೋಗಲು ಪರದಾಡಿದರು. ದಸರಾ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರು ಸಹ ಮಳೆಯಿಂದಾಗಿ ಸಂಕಷ್ಟ ಅನುಭವಿಸಿದರು.
ವಿವಿಧ ಜಿಲ್ಲೆಯಲ್ಲಿ ಮಳೆ; ಹಾಸನ ಜಿಲ್ಲೆಯ ಹಲವು ಕಡೆ ಶುಕ್ರವಾರ ಸಂಜೆ ಭಾರೀ ಮಳೆಯಾಗಿದೆ. ಒಂದು ಗಂಟೆಯಿಂದ ಗುಡುಗು, ಸಿಡಿಲು ಸಹಿತ ಸುರಿಯುತ್ತಿರುವ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿದೆ.
ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಮೆಕ್ಕೆಜೋಳ, ರಾಗಿ ಹಾಗೂ ವಿವಿಧ ಬೆಳೆಗಳು ಮಳೆಯಿಂದಾಗಿ ಹಾನಿಯಾಗುವ ಆತಂಕ ಎದುರಾಗಿದೆ.












Click it and Unblock the Notifications