Breaking:ಬೆಂಗಳೂರಿಗೆ ಗುರುವಾರವೂ ಜೋರು ಮಳೆ: ಯೆಲ್ಲೋ ಅಲರ್ಟ್!
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಬಂದ ಮಳೆಯಂತೆಯೇ ಗುರುವಾರವು ಮಳೆ ಬರುವ ಮುನ್ಸೂಚನೆ ಇದೆ. ಈ ಕಾರಣಕ್ಕೆ ಬೆಂಗಳೂರು ನಗರ ಜಿಲ್ಲೆಗೆ ಇಂದು (ಶುಕ್ರವಾರ) 'ಹಳದಿ' ಎಚ್ಚರಿಕೆ ಕೊಡಲಾಗಿದೆ.
ಗುರುವಾರ ಬೆಳಗ್ಗೆ ತುಸು ಬಿಸಿಲಿನ ವಾತಾವರಣ ಇದ್ದ, ಇದು ಮಧ್ಯಾಹ್ನದ ನಂತರ ಮರೆಯಾಗಲಿದೆ. ಬಳಿಕ ನಗರಾದ್ಯಂತ ಗುಡುಗು ಮಿಂಚು ಸಹಿತ ಸಾಧಾರಣದಿಂದ ಜೋರಾಗಿ ಮಳೆ ಆರ್ಭಟಿಸಲಿದೆ. ಈ ಮುನ್ಸೂಚನೆ ಬೆಂಗಳೂರು ನಿವಾಸಿಗಳ ನಿದ್ದೆಗೆಡಿಸಿದೆ.
ನಗರದ ಕೆಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಳೆ ಆಗಲಿದ್ದು, ಇನ್ನು ಸಾಕಷ್ಟು ಬಡಾವಣೆಗಳಲ್ಲಿ ಗುರುವಾರವು 50ಮಿ.ಮೀ.ಗೂ ಅಧಿಕ ಮಳೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ತೀವ್ರತೆ ಹಾಗೂ ಇನ್ನಿತರ ಹವಾಮಾನ ಬದಲಾವಣೆಗಳಿಂದ ಮಳೆ ರಾಜ್ಯ ಅನೇಕ ಕಡೆ ಮಳೆ ಸುರಿಯುತ್ತಿದೆ. ಇತ್ತ ಬೆಂಗಳೂರಿನಲ್ಲಿ ಮಳೆ ಜೊತೆಗೆ ಬೆಳಗ್ಗೆ ಮತ್ತು ಸಂಜೆ ಚಳಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.

ಶುಕ್ರವಾರದಿಂದ ನಗರದಲ್ಲಿ ಮತ್ತೆ ಮಳೆ ಅಬ್ಬರವು ಕ್ಷೀಣಿಸಲಿದ್ದು, ಅಂದು ನಗರದಲ್ಲಿ ಚದುರಿದಂತೆ ಹಗುರ ಮಳೆ ಬೀಳಬಹುದು ಎಂದು ಕರ್ನಾಟಕ ರಾಜ್ಯ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಹಂಪಿನಗರದಲ್ಲಿ 85.5ಮಿ.ಮಿ.ಮಳೆ
ಬುಧವಾರ ರಾತ್ರಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಸುರಿದ ತೀವ್ರ ಮಳೆಯಿಂದ ಬೆಂಗಳೂರಿನಲ್ಲಿ ಸಹಸ್ರಾರು ಜನರು ತೊಂದರೆಗೀಡಾದರು. ವಸಂತನಗರದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲಾರದೇ ಮಾಲೀಕರು ಬೆಳಗ್ಗವರೆಗೆ ಜಾಗರಣೆ ಮಾಡಿದರು. ಮನೆಯಲ್ಲಿ ಅರ್ಧ ಅಡಿಗೂ ಹೆಚ್ಚು ನೀರು ನಿಂತು ಸಾಮಾನುಗಳೆಲ್ಲ ನೀರಲ್ಲ ಮುಳುಗಿದ್ದವು. ಇನ್ನೂ ಅನೇಕ ತಗ್ಗುಪ್ರದೇಶಗಳಲ್ಲಿ ಇದೇ ರೀತಿಯ ವಾತಾವರಣ ಕಂಡು ಬಂತು. ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಯಿತು.

ರಾತ್ರಿ 8.30ರ ನಂತರ ಜೋರಾಗಿ ಮಳೆ ಆರಂಭವಾಗಿದ್ದು, ತಡರಾತ್ರಿವರೆಗೂ ಮುಂದುವರಿಯಿತು. ಈ ವೇಳೆ ಹಂಪಿನಗರದಲ್ಲಿ ಅಧಿಕ 85.5ಮಿ.ಮೀ.ಮಳೆ ಆಗಿದ್ದರೆ, ಜ್ಞಾನಭಾರತಿ 75.5ಮಿ.ಮಿ., ಗಾಳಿ ಆಂಜನೇಯ ಟೆಂಪಲ್ ವಾರ್ಡ್ 72ಮಿ.ಮಿ., ಕೋನೆನ ಅಗ್ರಹಾರ 70.5ಮಿ.ಮಿ., ವಿದ್ಯಾಪೀಠ, ಎಚ್ಎಎಲ್ ವಿಮಾನ ನಿಲ್ದಾಣ ಮತ್ತು ದೊಡ್ಡನೆಕ್ಕುಂದಿಯಲ್ಲಿ ತಲಾ 70ಮಿ.ಮಿ., ದೊರೆಸಾನಿಪಾಳ್ಯ 67ಮಿ.ಮಿ., ರಾಜಮಹಲ್ ಗುಟ್ಟಹಳ್ಳಿ ಹಾಗೂ ಕೋರಮಂಗಲ 66ಮಿ.ಮಿ., ಪುಲಕೇಶಿನಗರ 60.5ಮಿ.ಮಿ., ಸಂಪಂಗಿರಾಮನಗರ 58ಮಿ.ಮಿ, ಮಳೆ ಬಿದ್ದಿದೆ. ಉಳಿದೆಡೆ ಸಾಧಾರಣವಾಗಿ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಳೆ ವರದಿ ತಿಳಿಸಿದೆ.












Click it and Unblock the Notifications