ಕೊರೊನಾ ಬಗ್ಗೆ ಆತಂಕ ಬೇಡ, 24 ಗಂಟೆ ಕೆಲಸ ಮಾಡ್ತೀವಿ: ಶ್ರೀರಾಮುಲು
ಬೆಂಗಳೂರು, ಮಾರ್ಚ್ 3: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾದ ಹಿನ್ನೆಲೆ ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ಬೆಂಗಳೂರಿನಲ್ಲಿ ಅಧಿಕಾರಿಗಳು, ವೈದ್ಯರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಜೊತೆ ತುರ್ತು ಸಭೆ ಕರೆದಿದ್ದ ಶ್ರೀರಾಮುಲು, ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
''ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 24 ಗಂಟೆಯೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ಕೊರೊನಾ ಪತ್ತೆಗಾಗಿ ರಾಜೀವ್ ಗಾಂಧಿ ಆಸ್ಪತ್ರೆ ಮತ್ತು ಬೆಂಗಳೂರು ಮೆಡಿಕಲ್ ಆಸ್ಪತ್ರೆಯಲ್ಲಿ ವಿಶೇಷವಾಗಿ ಎರಡು ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ತಪಾಸಣೆಗಾಗಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲೂ ತಪಾಸಣೆ ಕೇಂದ್ರ ಆರಂಭಿಸಲಾಗುತ್ತಿದೆ'' ಎಂದು ತಿಳಿಸಿದ್ದಾರೆ.
''ಕೊರೊನಾ ಕುರಿತು ರಾಜ್ಯದ ಜನರಲ್ಲಿ ಯಾವುದೇ ಅತಂಕ ಬೇಡ. ರಾಜ್ಯದ ಜನತೆಯಲ್ಲಿ ಇದುವರೆಗೂ ಎಲ್ಲಿಯೂ ಕೊರೊನಾ ಪತ್ತೆಯಾಗಿಲ್ಲ. ಕರ್ನಾಟಕದಲ್ಲಿ ಹರಡದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುತ್ತೇವೆ. ಅನಗತ್ಯ ವದಂತಿಗಳಿಗೆ ಕಿವಿಕೊಡಬೇಡಿ'' ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

''ವಿದೇಶದಿಂದ ಬರುವ ಎಲ್ಲರನ್ನು ತಪಾಸಣೆ ಮಾಡಲಾಗುತ್ತೆ. ಬಂದರು, ಏರ್ ಪೋರ್ಟ್ ಎಲ್ಲ ಕಡೆಯೂ ಕಟ್ಟೆಚ್ಚರ ವಹಿಸಲಾಗಿದೆ'' ಎಂದು ತಿಳಿಸಿದ್ದಾರೆ. 'ಕೊರೊನಾ ಕುರಿತು ರಾಜ್ಯದಲ್ಲಿ ಯಾವ ರೀತಿ ಕ್ರಮ ಜರುಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ, ಮೋದಿ ಅವರಿಗೆ ಹಾಗು ಆರೋಗ್ಯ ಮಂತ್ರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.
''ಟೆಕ್ಕಿಗೆ ಸಂಬಂಧಿಸಿದಂತೆ ಆತ ಉಳಿದುಕೊಂಡಿದ್ದ ಅಪಾರ್ಟ್ ಮೆಂಟ್ ನಲ್ಲಿ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬಸ್ ನಲ್ಲಿ ಪ್ರಯಾಣ ಮಾಡಿರುವ ಬಗ್ಗೆಯೂ ಮಾಹಿತಿ ಸಿಕ್ಕಿದ್ದು, ಆತನ ಜೊತೆ ಸಾಗಿದ್ದ ವ್ಯಕ್ತಿಗಳ ತಪಾಸಣೆಯೂ ಮಾಡಲಾಗುತ್ತೆ'' ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.












Click it and Unblock the Notifications