ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸ್ಪಂದಿಸಲು ಬಜೆಟ್ ಮಂಡನೆ: ಎಚ್ಡಿಕೆ
ಬೆಂಗಳೂರು, ಜೂನ್ 25: ಹೊಸದಾಗಿ ಆಯ್ಕೆಯಾದ ಸರಿಸುಮಾರು 100 ಜನ ಶಾಸಕರ ಅಭಿಪ್ರಾಯ ಪರಿಗಣಿಸಲು ಹಾಗೂ ರೈತರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಹೊಸದಾಗಿ ಬಜೆಟ್ ಮಂಡನೆ ಮಾಡಲೇಬೇಕಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸಾಲ ಮನ್ನಾ ಮತ್ತು ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕುರಿತು ಸಭೆ ನಡೆಸುವ ಸಂದರ್ಭದಲ್ಲಿ ಮಾತನಾಡಿದ ಅವರು ಜುಲೈ 5ಕ್ಕೆ ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ ಬಜೆಟ್ ಮಂಡಿಸಬೇಕೋ ಬೇಡವೋ ಗೊತ್ತಿಲ್ಲ, ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ರೈತರ ಹಿತದೃಷ್ಟಿಯಿಂದ ಸಾಲಮನ್ನಾ ಮಾಡಲು ಮುಂದಾಗಿದ್ದೇನೆಯೋ ಹೊರತು ಇದರಿಂದ ನನಗೆ ವೈಯಕ್ತಿಕ ಲಾಭವೇನೂ ಇಲ್ಲ. ಅಧಿಕಾರದ ದರ್ಪದಿಂದ, ಅಹಂಕಾರದಿಂದ ಮಾತನಾಡಿದ ತಕ್ಷಣ ಏನೂ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಹಣ ಎಲ್ಲಿಂದ ತರುತ್ತಾರಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಕೇಳಿರುವ ಬಗ್ಗೆಯೂ ಸಾರ್ವಜನಿಕವಾಗಿ ಟೀಕಿಸಿದ ಸಿಎಂ ಕುಮಾರಸ್ವಾಮಿ ಈ ರಾಜ್ಯದ ರೈತರ ಕಷ್ಟಗಳಿಗೆ ಸ್ಪಂದಿಸಲು ಸಾಲಮನ್ನಾ ಮಾಡುವ ಬಗ್ಗೆ ಮುಂದಾಗಿದ್ದೇನೆಯೇ ಹೊರತು ನನಗೆ ಇದರಿಂದ ಯಾವುದೇ ಕಮಿಷನ್ ಬರುವುದಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಯನ್ನು ಯಾರಿಂದಲೂ ಭಿಕ್ಷೆ ಬೇಡಿ ಪಡೆದದ್ದಲ್ಲ, ಅಧಿಕಾರ ಅದುವಾಗಿಯೇ ಸಿಕ್ಕಿದ್ದು, ನಾನು ಯಾರ ಹಂಗಿನಲ್ಲಿಯೂ ಇಲ್ಲ ಎಂದರು.












Click it and Unblock the Notifications