ಇಂದು ಸಂಪುಟ ಸಭೆ, ಕುಮಾರಸ್ವಾಮಿ ರಾಜೀನಾಮೆ?
Recommended Video
ಬೆಂಗಳೂರು, ಮೇ 24: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12.30ಗೆ ಸಚಿವ ತುರ್ತು ಸಂಪುಟ ಸಭೆ ನಡೆಯಲಿದೆ.
ಲೋಕಸಭೆ ಚುನಾವಣೆ ಫಲಿತಾಂಶ ವಿಶ್ಲೇಷಿಸುವ ಉದ್ದೇಶದಿಂದಲೇ ಈ ತುರ್ತು ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಪುಟ ಸಭೆಯ ಬಳಿಕ ರಾಜ್ಯಪಾಲರ ಭೇಟಿಗೂ ಕುಮಾರಸ್ವಾಮಿ ಅವಕಾಶ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ್ದು ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ರಾಜ್ಯ ಚುನವಣಾ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಒಂದೊಂದು ಸೀಟುಗಳನ್ನು ಪಡೆದಿರುವುದು ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಇದಲ್ಲದೆ ವೈಯಕ್ತಿಕವಾಗಿಯೂ ಅಪ್ಪ ಹಾಗೂ ಮಗನ ಕ್ಷೇತ್ರವನ್ನು ಸೋತಿರುವುದು ಕುಮಾರಸ್ವಾಮಿ ಅಸಮಧಾನಕ್ಕೆ ಕಾರಣವಾಗಿದೆ. ಏತನ್ಮಧ್ಯೆ ಒಂದು ವೇಳೆ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೆದುರು ವಾಗ್ವಾದ ನಡೆಯುವ ಸಾಧ್ಯತೆ ಇದೆ.
ಉಭಯ ಸಚಿವರುಗಳು ಆಯಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೇಗೆ ನೆರವಾಗಿಲ್ಲ ಎನ್ನುವ ಬಗ್ಗೆ ಚರ್ಚೆಗಳು ನಡೆಯಬಹುದು ಎನ್ನುವ ಸೂಚನೆ ದೊರೆತಿದೆ.. ವಿಶೇಷವಾಗಿ ಮಂಡ್ಯ, ತುಮಕೂರು, ಮೈಸೂರು, ಬೆಂಗಳೂರಿನ ಮೂರು ಕ್ಷೇತ್ರಗಳು ಸೇರಿಕೆಲವೆಡೆ ಹೇಗೆ ಮೈತ್ರಿ ಮತಗಳು ಒಗ್ಗೂಡದಿರುವುದರ ಬಗ್ಗೆ ಆತ್ಮಾವಲೋಕನ ನಡೆಯುವ ಸಾಧ್ಯತೆ ಇದೆ.
ಇನ್ನೊಂದೆಡೆ ಇರುವ ಕುತೂಹಲವೇನೆಂದರೆ ಮೈತ್ರಿ ಮುಂದುವರೆಸಿಕೊಂಡು ಕೇವಲ ಮುಖ್ಯಮಂತ್ರಿ ಬದಲಾಯಿಸುವ ನಿರ್ಣಯಕ್ಕೆ ಬರಲಿದೆಯೇ ಅಥವಾ ಮೈತ್ರಿಯನ್ನೇ ಬಲಿಕೊಡಲಿದ್ದಾರೆಯೇ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.












Click it and Unblock the Notifications