ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಎಚ್. ಡಿ. ಕುಮಾರಸ್ವಾಮಿ
ಬೆಂಗಳೂರು, ಜುಲೈ 23: ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಸೋತ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರಾಜ್ಯಪಾಲ ವಾಜುಭಾಯ್ ವಾಲಾ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.
ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಸೋತ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ, ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ಪತನವಾಗಿದೆ.
ಒಂದು ವಾರದಿಂದಲೂ ವಿಶ್ವಾಸ ಮತದ ಯಾಚಿಸುವುದಾಗಿ ಹೇಳುತ್ತಲೇ ಇದ್ದ ದೋಸ್ತಿ ಸರ್ಕಾರ, ಸ್ಪೀಕರ್ ರಮೇಶ್ ಕುಮಾರ್ ಅವರ ಕಟ್ಟಪ್ಪಣೆಗೆ ಮಣಿದು, ಮಂಗಳವಾರ 6:30 ರ ಸುಮಾರಿಗೆ ವಿಶ್ವಾಸ ಮತ ಪ್ರಕ್ರಿಯೆ ಆರಂಭಿಸಿತ್ತು. ಸದನದಲ್ಲಿದ್ದ ಒಟ್ಟು 205 ಶಾಸಕರಲ್ಲಿ ಮೈತ್ರಿ ಸರ್ಕಾರದ ಪರ 99(+ಸ್ಪೀಕರ್) ಮತಗಳು ಬಿದ್ದರೆ, ವಿರೋಧ ಪಕ್ಷದ ಪರ 105 ಮತಗಳು ಬಿದ್ದವು. ಇದರಿಂದಾಗಿ ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡಿತು.

ಈಗ ತಾನೇ ರಾಜ್ಯಪಾಲರ ಬಳಿ ತೆರಳಿ ಎಚ್. ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದ್ದು, ಈ ಮೂಲಕ ಕರ್ನಾಟಕದಲ್ಲಿ ಕುಮಾರ ಪರ್ವ ಅಂತ್ಯವಾಗಿದೆ. 2018 ರ ಮೇ 23 ರಂದು ಎಚ್. ಡಿ. ಕುಮಾರಸ್ವಾಮಿ ಅವರು ಕರ್ನಾಟಕದ 18 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದಕ್ಕೂ ಮುನ್ನ ವಿಶ್ವಾಸ ಮತ ಸಾಮೀತುಪಡಿಸುವಂತೆ ಗುರುವಾರ ಮತ್ತು ಶುಕ್ರವಾರ ಎರಡು ಬಾರಿ ರಾಜ್ಯಪಾಲರು ನಿರ್ದೇಶನ ನೀಡಿದ್ದರೂ, ಎಚ್. ಡಿ. ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದರೂ ಅವರು ವಿಶ್ವಾಸ ಮತ ಯಾಚನೆಯ ಗೋಜಿಗೆ ಹೋಗಿರಲಿಲ್ಲ. ಆದರೆ ಒಂದು ವಾರದಿಂದ ಅದೇ ವಾದ-ವಿವಾದಗಳಿಂದ ಬೇಸತ್ತ ಸ್ಪೀಕರ್ ರಮೇಶ್ ಕುಮಾರ್ ಅವರು ಡೆಡ್ ಲೈನ್ ನೀಡಿದ್ದರಿಂದ ಮತ್ತು ಇಂದು ವಿಶ್ವಾಸ ಮತ ಯಾಚಿಸುವ ನಂಬಿಕೆ ಇದೆ ಎಂದು ಅತೃಪ್ತರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಹ ಹೇಳಿದ್ದರಿಂದ ಬೇರೆ ದಾರಿ ಕಾಣದೆ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಿಸಿದ್ದರು.












Click it and Unblock the Notifications