'ಡಾ.ಸತ್ಯಕಿ ನನಗೆ ಎರಡನೇ ಜನ್ಮ ನೀಡಿದ್ದಾರೆ'
ಬೆಂಗಳೂರು, ಅಕ್ಟೋಬರ್ 01 : 'ಡಾ ಸತ್ಯಕಿ ನನಗೆ ಎರಡನೇ ಜನ್ಮ ನೀಡಿದ್ದಾರೆ. ನನ್ನ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಎಲ್ಲರಿಗೂ, ನನಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ ಲಕ್ಷಾಂತರ ಕಾರ್ಯಕರ್ತರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಅಪೊಲೋ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ನನ್ನ ಆರೋಗ್ಯದ ಬಗ್ಗೆ ಮಾಹಿತಿಯನ್ನು ರಾಜ್ಯದ ಜನರಿಗೆ ತಲುಪಿಸಿದ ಎಲ್ಲಾ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.

'ಇಸ್ರೇಲ್ಗೆ ಹೋಗುವಾಗಲೇ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೇನೆಯೇ? ಎನ್ನುವಷ್ಟು ಅನುಮಾನ ಬರುವಷ್ಟು ನೋವಿತ್ತು. ವಿಮಾನದಿಂದ ಇಳಿದ ಬಳಿಕ ನಡೆಯಲೂ ಸಾಧ್ಯವಾಗಿರಲಿಲ್ಲ' ಎಂದು ಹೇಳಿದರು.
'ಇಸ್ರೇಲ್ನಲ್ಲಿ ವೈದ್ಯರ ಬಳಿ ತೋರಿಸಿದಾಗ ತಕ್ಷಣ ಅಡ್ಮಿಟ್ ಆಗಬೇಕು ಎಂದು ಹೇಳಿದರು. ಆದರೆ, ಇಷ್ಟವಿಲ್ಲದ ಕಾರಣ ವಾಪಸ್ ಬಂದೆ. ಇಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ, ಡಾ.ಸತ್ಯಕಿ ನನಗೆ 2ನೇ ಜನ್ಮ ನೀಡಿದ್ದಾರೆ' ಎಂದು ತಿಳಿಸಿದರು.

'ಬೇಗ ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ, ದೇವರಲ್ಲಿ ಪ್ರಾರ್ಥನೆ ಮಾಡಿದ ಎಲ್ಲಾ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನವೆಂಬರ್ 1ರಿಂದ ರಾಜ್ಯ ಪ್ರವಾಸ ಆರಂಭಿಸಿ ಪಕ್ಷ ಸಂಘಟನೆ ಮಾಡುತ್ತೇನೆ' ಎಂದು ಹೇಳಿದರು.
'ಉತ್ತರ ಕರ್ನಾಟಕದಲ್ಲಿ 15 ದಿನ ನೆಲೆಸುತ್ತೇನೆ ಎಂದು ಮನೆ ಮಾಡಿದ್ದೆ. ಆದರೆ, ಅಷ್ಟರಲ್ಲಿ ಹೀಗಾಯಿತು. ಆದ್ದರಿಂದ ಜನರ ಕ್ಷಮೆ ಕೇಳುತ್ತೇನೆ. ಮುಂದಿನ ದಿನಗಳಲ್ಲಿ ಮನೆಯ ಬಳಿ ಬರುವ ಪ್ರಯತ್ನ ಮಾಡುತ್ತೇನೆ' ಎಂದರು.












Click it and Unblock the Notifications