ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ!
ಬೆಂಗಳೂರು, ಫೆ. 14: ಕಾಂಗ್ರೆಸ್ ನಾಯಕರ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಹರಿಹಾಯ್ದಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಂಘಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರು ನನಗೆ ಸಹಕಾರವನ್ನೇ ಕೊಡಲಿಲ್ಲ. ಆದರೂ ರೈತರಿಗೆ ಕೊಟ್ಟಿದ್ದ ಸಾಲಮನ್ನಾ ಭರವಸೆಯನ್ನು ನಾನು ಈಡೇರಿಸಿದೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಹಲವು ಟೀಕೆಗಳನ್ನು ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ತಂದಿದ್ದೇವೆ. ನಮ್ಮ ಸರ್ಕಾರ ಸಾಲಮನ್ನಾಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ರೈತರಿಗೆ ಬೆಳೆ ಸಾಗಾಣಿಕೆ ವೆಚ್ಚ ಕೊಟ್ಟಿದ್ದೇವೆ. ಉಗ್ರಾಣಗಳಲ್ಲಿ ರೈತರ ಬೆಳೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಿದ್ದೆವು. ಶೇ.3 ರ ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಸಾಲ ಯೋಜನೆ ಜಾರಿಗೆ ತಂದಿದ್ದೆ. ಜೊತೆಗೆ ಬಡವರ ಬಂಧು ಯೋಜನೆ ಜಾರಿ ಮಾಡಿದ್ದೇವು ಎಂದು ತಮ್ಮ ಸರ್ಕಾರದ ಸಾಧನೆ ವಿವರಿಸಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದೆವು. ಇವತ್ತು ಕೊರೊನಾ ವೈರಸ್ ಸಂಕಷ್ಟದಿಂದಾಗಿ ಶಾಲೆಗಳು ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಇದೆ. ಖಾಸಗಿ ಶಾಲೆಗಳಲ್ಲಿ ಬಡವರು ಮಕ್ಕಳನ್ನು ಓದಿಸಲು ಕಷ್ಟ ಎಂದು, ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯದಲ್ಲಿ 1000 ಪಬ್ಲಿಕ್ ಶಾಲೆ ತೆರೆಯಲು ಯೋಜನೆ ಮಾಡಿದ್ದೇವು. ಆದರೆ ಬಿಜೆಪಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದುವರೆಸಲಿಲ್ಲ, ಆ ಯೋಜನೆ ನಿಂತಿದೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ನಮ್ಮ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ. ಈ ಹಿಂದೆ ಮತ್ತೊಂದು ಪಕ್ಷದ ಜೊತೆ ಸರ್ಕಾರ ಮಾಡುವ ಅನಿವಾರ್ಯ ಪರಿಸ್ಥಿತಿಗೆ ಬಂತು. ಮತ್ತೊಂದು ಪಕ್ಷದ ಜೊತೆ ಸರ್ಕಾರ ಮಾಡಿಕ್ಕೆ ನಮ್ಮ ಕಾರ್ಯಕರ್ತರ ಕೆಲಸ ಮಾಡಲು ಆಗಲಿಲ್ಲ. 14 ತಿಂಗಳ ನನ್ನ ಆಡಳಿತ ಬಗ್ಗೆ ಹಲವಾರು ಟೀಕೆಗಳನ್ನು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ತಮ್ಮ ಮೇಲಿನ ಆರೋಪ ಹಾಗೂ ಕಾರ್ಯಕರ್ತರ ಕೆಲಸವನ್ನು ವಿವರಿಸಿದರು.












Click it and Unblock the Notifications