ಎಂ.ಪಿ.ಪ್ರಕಾಶ್ ಅವರನ್ನು ಸಿಎಂ ಆಗಿ ಅಂತಾ ಕೇಳಿಕೊಂಡಿದ್ದೆ: ಕುಮಾರಸ್ವಾಮಿ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ಪ್ರಭಾವಿ ಸಚಿವರಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಯಾರ ಹೆಸರು ಹೇಳದೆ ಪರೋಕ್ಷವಾಗಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಸಂದರ್ಭದಲ್ಲೇ 2006ರಲ್ಲಿ ಮೊದಲ ಬಾರಿಗೆ ತಾವು ಸಿಎಂ ಆಗಿದ್ದು ಹೇಗೆ? ಎಂಬ ವಿಚಾರವನ್ನೂ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಎಚ್ಡಿಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ ತಾವು ಸಿಎಂ ಆದ ದಿನದಲ್ಲಿ ಜೆಡಿಎಸ್ ಪಕ್ಷದಲ್ಲಿ ಇದ್ದ ಪರಿಸ್ಥಿತಿ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. 2006ರಲ್ಲಿ ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದ್ದೆ. ಆಗ ದೇವೇಗೌಡರು ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಅವತ್ತು ಬಿಜೆಪಿ ಅವರು ಬಂದು ಸರ್ಕಾರ ಮಾಡೋಣ ಎಂದರು. ಎಂದು ತಮ್ಮ ಕಾರ್ಯಕರ್ತರು ಹಾಗೂ ಮುಖಂಡರ ಎದುರು ಅಂದಿನ ಘಟನೆ ಬಿಡಿಸಿಟ್ಟರು ಎಚ್ಡಿಕೆ.

ಎಂ.ಪಿ.ಪ್ರಕಾಶ್ ಸಿಎಂ ಆಗಲು ಒಪ್ಪಲಿಲ್ಲ...
ಬಿಜೆಪಿ ಅವರು ಬಂದು ಸರ್ಕಾರ ಮಾಡೋಣ ಎಂದಾಗ ನಾನು ಎಂ.ಪಿ. ಪ್ರಕಾಶ್ ಅವರನ್ನು ಭೇಟಿಯಾಗಿ ಸಿಎಂ ಆಗಿ ಎಂದು ಮನವಿ ಮಾಡಿಕೊಂಡೆ, ಆದರೆ ಅವರು ಒಪ್ಪಿರಲಿಲ್ಲ. ಪಕ್ಷ ಉಳಿಸಲು ನಾನು ಬಿಜೆಪಿ ಜತೆ ಸರ್ಕಾರ ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಾವು ಸಿಎಂ ಆಗಿದ್ದು ಹೇಗೆ ಎಂಬುದನ್ನ ಬಿಡಿಸಿಟ್ಟರು. ಅಲ್ಲದೆ ಅಂದಿನ ಸ್ಥಿತಿ ಕುರಿತು ಜೆಡಿಎಸ್ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ ಕುಮಾರಸ್ವಾಮಿ. ಇದರ ಜೊತೆಗೆ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದ ದಿನಗಳನ್ನೂ ಬಿಡಿಸಿಟ್ಟಿದ್ದಾರೆ ಎಚ್ಡಿಕೆ, ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ನನ್ನ ನಡುರಸ್ತೆಯಲ್ಲಿ ಬಿಟ್ಟರು!
ಹಾಗೇ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದ ದಿನಗಳನ್ನು ನೆನೆದ ಮಾಜಿ ಸಿಎಂ ಎಚ್ಡಿಕೆ. ಆವತ್ತು ಇದೇ ಡಿ.ಕೆ. ಶಿವಕುಮಾರ್ ಅವರು ನನ್ನ ಜತೆಯಲ್ಲಿ ಇದ್ರು. ನನ್ನ ಕೈಯನ್ನು ಮೇಲೆ ಎತ್ತಿದ್ದರು. ನಮ್ಮಿಬ್ಬರನ್ನು ಜೋಡೆತ್ತು ಅಂತ ಕೂಡ ಕರೆಯುತ್ತಿದ್ರು. ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ನನ್ನ ಕೈ ಎತ್ತಿ ಎತ್ತಿಗಾಡಿ ಹಾಗೂ ಎತ್ತುಗಳನ್ನೂ ಹೈಜಾಕ್ ಮಾಡ್ಕೊಂಡು ಹೋದ್ರು. ನನ್ನ ನಡುರಸ್ತೆಯಲ್ಲಿ ಬಿಟ್ಟು ಹೋದರು ಎಂದು 2 ಬಾರಿ ಕರ್ನಾಟಕದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಅದೆಷ್ಟು ದಿನ ಅಂತ ನೋಡೋಣ..
ಅಲ್ಲದೆ ನಾನು ಅವರಿಗೆ ಮರುಳಾಗಿ ಹೋದೆ, ಹಾಗೇ ಅವರು ಬದಲಾಗಿರಬಹುದೆಂದು ನಂಬಿ ಮೋಸ ಹೋದೆ. ಈಗ ಸಿದ್ದರಾಮಯ್ಯ ಅವರ ಕೈ ಮೇಲೆತ್ತಿ ದಿನವೂ ಪೋಸು ಕೊಡುತ್ತಿದ್ದಾರೆ. ಅದೆಷ್ಟು ದಿನ ಅಂತ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಈ ಮೂಲಕ ನೇರ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಇಂತಹ 100 ಗ್ಯಾರಂಟಿ ಜಾರಿಗೆ ತರಬ...
ಗ್ಯಾರಂಟಿ ನೆಪ ಹೇಳಿ ಅಭಿವೃದ್ಧಿ ಕೆಲಸ ನಿಲ್ಲಿಸಿದ್ದಾರೆ. ಹೀಗೆ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಕರ್ನಾಟಕ ಸಂಪದ್ಭರಿತ ರಾಜ್ಯವಾಗಿದ್ದು, ಇಲ್ಲಿ ಹಣಕ್ಕೆ ಕೊರತೆ ಇಲ್ಲ ಅಂದ್ರು. ಇದೇ ವೇಳೆ ನೈಸ್ ಒಂದು ಯೋಜನೆಯನ್ನ ಸರ್ಕಾರದ ವಶಕ್ಕೆ ತೆಗೆದುಕೊಂಡ್ರೆ ಇಂಥ 100 ಗ್ಯಾರಂಟಿಗಳನ್ನು ಜಾರಿಗೆ ತರಬಹುದು. ಅಲ್ಲಿನ ಹೆಚ್ಚುವರಿ ಭೂಮಿ ಕೂಡಲೇ ಸರ್ಕಾರ ವಾಪಸ್ ಪಡೆಯಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒತ್ತಾಯ ಮಾಡಿದರು.
ಒಟ್ನಲ್ಲಿ ಮಾಜಿ ಸಿಎಂ ಎಚ್ಡಿಕೆ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಬಗ್ಗೆ ಆಡಳಿತ ಪಕ್ಷವಾದ ಕಾಂಗ್ರೆಸ್ ನಾಯಕರು ಇನ್ನೂ ರಿಯಾಕ್ಷನ್ ಕೊಟ್ಟಿಲ್ಲ. ಹೀಗಾಗಿ ಮಾಜಿ ಸಿಎಂ ಎಚ್ಡಿಕೆ ಹೇಳಿಕೆ ಬಗ್ಗೆ ಕೈ ಪಡೆ ಕೂಡ ತಿರುಗಿಬೀಳುವ ಸೂಚನೆ ಇದ್ದು, ಮುಂದೆ ರಾಜ್ಯದಲ್ಲಿ ಮತ್ತೊಂದು ಮಾತಿನ ಮಹಾಯುದ್ಧ ಶುರುವಾಗುವುದು ಬಹುತೇಕ ಗ್ಯಾರಂಟಿ.












Click it and Unblock the Notifications