ಕುಮಾರಸ್ವಾಮಿ 15 ನಿಮಿಷ ಕಣ್ಣೀರಿಟ್ಟಿದ್ದರು: ದೇವೇಗೌಡ
Recommended Video
ಬೆಂಗಳೂರು, ಜುಲೈ 27: 'ನನ್ನ ಮಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಸಂದರ್ಭದಿಂದಲೂ ಸಾಕಷ್ಟು ನೋವು ಅನುಭವಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುಮಾರು 15 ನಿಮಿಷ ಕಣ್ಣೀರಿಟ್ಟಿದ್ದರು. ನನಗೆ ಎಲ್ಲವೂ ಗೊತ್ತಿದೆ' ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದರು.
ಬೆಂಗಳೂರಿನ ಜೆಪಿ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ ಮತ್ತು ಕೆಆರ್ ಪುರಂ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು ಉಪ ಚುನಾವಣೆಯ ಕುರಿತ ಸಿದ್ಧತೆಗೆ ಸಮಾಲೋಚನೆ ನಡೆಸಿದರು.
ಮೈತ್ರಿ ಸರ್ಕಾರ ಹೋದರೂ ಚಿಂತೆಯಿಲ್ಲ. ಯಾರು ಬಂದರೂ ಕೂಡ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ಕಾರದ ಎಲ್ಲ ಕೆಲಸಗಳನ್ನೂ ವಿರೋಧ ಮಾಡಲು ಹೋಗುವುದಿಲ್ಲ. ವಿಷಯಾಧಾರಿತವಾಗಿ ಕೆಲಸ ಮಾಡುತ್ತೇವೆ. ಏನೇ ಮಾಡಿದರೂ ಜೆಡಿಎಸ್ ಪಕ್ಷವನ್ನು ನಾಶಪಡಿಸಲು ಆಗುವುದಿಲ್ಲ. ಸರ್ಕಾರ ಹೋದರೂ ಪರವಾಗಿಲ್ಲ, ಪಕ್ಷ ಸಂಘಟನೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾಗಿ ಹೇಳಿದರು.
ನಾವು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿಯೇ ಕೆಲಸ ಮಾಡುತ್ತೇವೆ. ಬಿಜೆಪಿಗೆ ಸರ್ಕಾರ ರಚಿಸಲು ಜೆಡಿಎಸ್ ಬಾಹ್ಯ ಬೆಂಬಲ ನೀಡುತ್ತದೆ ಎನ್ನುವುದು ಸುಳ್ಳು. ನಾವು 34 ಶಾಸಕರಿದ್ದೇವೆ. ಜಿಟಿ ದೇವೇಗೌಡ ಅವರ ಹೇಳಿಕೆಯನ್ನು ನಾನು ಅಲ್ಲಗಳೆಯುವುದಿಲ್ಲ. ಕೇವಲ 14 ತಿಂಗಳಿಗೇ ಪತನವಾದ ಹಿನ್ನೆಲೆಯಲ್ಲಿ ಮನೆಗೆ ಹೋಗಬೇಕಲ್ಲ ಎಂಬ ನೋವಿನೊಂದಿಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಕಾಂಗ್ರೆಸ್ ಶಾಸಕರಲ್ಲಿ ಕೂಡ ಇದೆ. ಇದನ್ನೇ ಜಿಟಿಡಿ ಹೇಳಿದ್ದಾರೆ. ಆ ಚರ್ಚೆಯನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.












Click it and Unblock the Notifications