ಎಂ.ಬಿ.ಪಾಟೀಲರ ಜೀವನದಲ್ಲೇ ಇದು ಹೀನ ಕೃತ್ಯ: ಎಚ್ ಡಿಕೆ ತರಾಟೆ
ಬೆಂಗಳೂರು, ಸೆಪ್ಟೆಂಬರ್ 12: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಲಿಂಗಾಯತ ಧರ್ಮ ವಿವಾದಕ್ಕೆ ಎಳೆತಂದಿದ್ದೇ ತಪ್ಪು ಎಂದು ಸಚಿವ ಎಂ.ಬಿ.ಪಾಟೀಲ್ ರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
'ನಾನು ಸುಳ್ಳು ಹೇಳಿದ್ದರೆ ಅದರ ಶಾಪ ನನ್ನ ಕುಟುಂಬಕ್ಕೆ ತಟ್ಟಲಿ'
ಸಿದ್ದಗಂಗಾ ಮಠದಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಲಿಂಗಾಯತ-ವೀರಶೈವ ಒಂದೇ ಎಂಬ ಹೇಳಿಕೆಯನ್ನು ಶಿವಕುಮಾರ ಸ್ವಾಮೀಜಿ ನೀಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತಮ್ಮ ಬೆಂಬಲ ಇದೆ ಅಂತ ಸಿದ್ದಗಂಗಾದ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ ಎಂದು ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆಯನ್ನು ಕೂಡ ಸ್ವಾಮೀಜಿ ಅಲ್ಲಗಳೆದಿದ್ದಾರೆ.
ಸ್ವಾಮೀಜಿ ಪತ್ರಿಕಾ ಹೇಳಿಕೆ ನಂತರ ಮಾತನಾಡಿದ ಕುಮಾರಸ್ವಾಮಿ, ಮೊದಲನೆಯದಾಗಿ ಲಿಂಗಾಯತ- ವೀರಶೈವ ವಿವಾದದಲ್ಲಿ ಸ್ವಾಮೀಜಿ ಅವರನ್ನು ಎಳೆದು ತಂದಿದ್ದೇ ತಪ್ಪು. ಪಾಟೀಲರ ಜೀವನದಲ್ಲಿ ಇದಕ್ಕಿಂತ ಹೀನ ಕೃತ್ಯ ಬೇರೆ ಯಾವುದೂ ಇರಲಿಕ್ಕಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಇನ್ನು ಈ ಬಗ್ಗೆ ಶಿವಕುಮಾರ ಸ್ವಾಮೀಜಿ ಅವರ ಬಳಿ ಪಾಟೀಲರು ಕ್ಷಮೆ ಯಾಚಿಸಬೇಕು ಎಂದು ಕೂಡ ಎಚ್ ಡಿಕೆ ಆಗ್ರಹಿಸಿದ್ದಾರೆ.