ಪಂಡಿತ ಬಸವರಾಜ ರಾಜಗುರುವಿಗೆ ಸಂಗೀತ ವಂದನೆ
ಬೆಂಗಳೂರು, ಮಾ.23: ಪದ್ಮಭೂಷಣ ವಿಜೇತ, ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ ಬಸವರಾಜ ರಾಜಗುರು ಅವರ ಸ್ಮರಣಾರ್ಥ ಗೆಳೆಯರ ಬಳಗ ಸಂಸ್ಥೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿದುಷಿ ಲಲಿತಾ ಜೆ.ರಾವ್ ಹಾಗೂ ಪಂಡಿತ್ ಎಂ.ಪಿ ಹೆಗ್ಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ. ಧಾರವಾಡದ ಪಂಡಿತ್ ಶ್ರೀಪಾದ್ ಹೆಗ್ಡೆ ಕಂಪ್ಲಿ ಅವರ ಶಿಷ್ಯರಾದ ರಘುನಂದನ ಭಟ್, ಬೆಂಗಳೂರು ಅವರಿಗೆ ಶಾಸ್ತ್ರೀಯ ಗಾಯನವಿರಲಿದೆ. ಪಂಡಿತ್ ಚಂದ್ರಶೇಖರ್ ಪುರಾಣಿಕ್ ಮಠ್ ಹಾಗೂ ಪಂಡಿತ್ ಆರ್.ಟಿ ಹೆಗ್ಡೆ ಶಿಗೇಹಳ್ಳಿ ಅವರ ಶಿಷ್ಯರಾದ ಪಂಡಿತ್ ಪಿ. ಹೆಗ್ಡೆ ಶಿರಸಿ ಅವರು ಇವರಿಗೆ ಸಾಥ್ ನೀಡಲಿದ್ದಾರೆ.
ವಾದ್ಯ ವೃಂದರಲ್ಲಿ ಗುರುಮೂರ್ತಿ ವೈದ್ಯ, ಬೆಂಗಳೂರು, ಗುರುರಾಜ್ ಹೆಗ್ಡೆ ಹೊನ್ನಾವರ(ತಬಲ), ಭರತ್ ಹೆಗ್ಡೆ, ಶಿರಸಿ(ಹಾರ್ಮೋನಿಯಂ) ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ +9180953 04253
ಬಸವರಾಜ ಮಹಾಂತಸ್ವಾಮಿ ರಾಜಗುರು: ಸುರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ ರಾಜಗುರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲಿ ಜನಿಸಿದರು. 1917 ಆಗಸ್ಟ್ 24ರಂದು ಜನಿಸಿದರು. ಬಸವರಾಜ ರಾಜಗುರು ಅವರು ಆರಂಭದಲ್ಲಿ ರಂಗಗೀತೆಗಳನ್ನು ಕಲಿತು ಹಾಡಿದರೂ ಗದಗಿನ ಅಂಧ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಸಂಪರ್ಕದಿಂದ ಶಾಸ್ತ್ರೀಯ ಗಾಯನ ವೃತ್ತಿಗೆ ಬಂದರು.
ಕಿರಾಣಾ, ಗ್ವಾಲಿಯರ ಹಾಗು ಪತಿಯಾಳಾ ಘರಾಣಾಗಳ ಆಳ ಜ್ಞಾನ ಉಳ್ಳವರಾಗಿದ್ದರು. ಈ ಮೂರೂ ಘರಾಣಾಗಳ ಶ್ರೇಷ್ಠ ಅಂಶಗಳನ್ನು ಒಳಗೊಂಡ ಸಂಗೀತ ಅವರದಾಗಿತ್ತು. ಬಸವರಾಜ ರಾಜಗುರು ತಮ್ಮ ಗುರು ಪಂಚಾಕ್ಷರಿ ಗವಾಯಿಗಳಿಗೆ ಕೊಟ್ಟ ಮಾತಿನಂತೆ, ತಮ್ಮ ಸಂಗೀತ ವಿದ್ಯೆಯನ್ನು ನಿರ್ವಂಚನೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಧಾರೆಯರೆದರು.
ಸಂಗೀತ ಕ್ಷೇತ್ರದಲ್ಲಿ ಈಗ ಪ್ರಸಿದ್ಧರಾದ ಗಣಪತಿ ಭಟ್ಟ, ಪರಮೇಶ್ವರ ಹೆಗಡೆ, ಶಾಂತಾರಾಮ ಹೆಗಡೆ ಹಾಗು ನಚಿಕೇತ ಶರ್ಮಾ ಮೊದಲಾದವರು ರಾಜಗುರುಗಳ ಶಿಷ್ಯಂದಿರು. ಬಸವರಾಜ ರಾಜಗುರುಗಳಿಗೆ 1975ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗು 1991ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದವು. ಅಲ್ಲದೆ ಕರ್ನಾಟಕ ರಾಜ್ಯ ಹಾಗು ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸಹ ಲಭಿಸಿದ್ದವು.