ಪಕ್ಷದ ನಿಯಮ ಮೀರಿದ ಶಾಸಕ ಜಿ.ಟಿ.ದೇವೇಗೌಡ: ಕುಮಾರಸ್ವಾಮಿ ಆಕ್ರೋಶ
ಬೆಂಗಳೂರು, ಫೆಬ್ರವರಿ 17: ಪಕ್ಷದ ನಿಯಮ ಮೀರಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಇಂದು ವಿಧಾನಪರಿಷತ್ ಚುನಾವಣೆಯಲ್ಲಿ ಮತಚಲಾವಣೆ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಭಾಗವಹಿಸಬಾರದು ಎಂದು ಜೆಡಿಎಸ್ ಪಕ್ಷ ನಿರ್ಧಾರ ಮಾಡಿತ್ತು. ನಿನ್ನೆ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ಆದರೆ ಇಂದು ಶಾಸಕ ಜಿ.ಟಿ.ದೇವೇಗೌಡ ಮತದಾನ ಮಾಡಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಸಂಖ್ಯೆ ಕೊರತೆ ಇರುವುದರಿಂದ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರ ಮಾಡಿತ್ತು. ಕಾಂಗ್ರೆಸ್ ಸಹ ಚುನಾವಣೆಯಿಂದ ದೂರ ಉಳಿದಿತ್ತು. ಆದರೆ ಪಕ್ಷದ ಸೂಚನೆ ಉಲ್ಲಂಘಿಸಿ ಜಿ.ಟಿ.ದೇವೇಗೌಡ ಮತದಾನ ಮಾಡಿದ್ದಾರೆ.
ಇಂದು ಮತದಾನ ಮಾಡಿದ ನಂತರ ಮಾತನಾಡಿದ ಜಿ.ಟಿ.ದೇವೇಗೌಡ, 'ನಾನು ಮತದಾನ ಮಾಡಿದ್ದೇನೆ, ಯಾರಿಗೆ ಮತದಾನ ಮಾಡಿದ್ದೇನೆ ಎಂದು ಹೇಳುವ ಆಗಿಲ್ಲ, ಜೆಡಿಎಸ್ ಯಾರಿಗೂ ಬೆಂಬಲ ಕೊಟ್ಟಿಲ್ಲ ಅನ್ನೋ ವಿಚಾರ, ಅದರ ಬಗ್ಗೆ ನನಗೇನು ಗೋತ್ತಿಲ್ಲ, ನಾನು ವೋಟ್ ಮಾಡಿದ್ದೇನೆ ಅಷ್ಟೇ' ಎಂದು ಹೇಳಿದರು.

ಜಿ.ಟಿ.ದೇವೇಗೌಡ ನಮ್ಮ ಪಕ್ಷದಲ್ಲಿದ್ದಾರಾ? ಎಚ್ಡಿಕೆ ಪ್ರಶ್ನೆ
ಜಿ.ಟಿ.ದೇವೇಗೌಡ ಮತದಾನ ಮಾಡಿದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, 'ಜಿ.ಟಿ.ದೇವೇಗೌಡ ನಮ್ಮಪಕ್ಷದಲ್ಲಿ ಇದ್ದಾರಾ ಎಂಬ ಬಗ್ಗೆಯೇ ಅನುಮಾನವಿದೆ. ಅವರು ಈಗಾಗಲೇ ತಮಗೆ ಬೇಕಾದಂತೆ ಹೇಳಿಕೆಗಳನ್ನ ಕೊಟ್ಟಿದ್ದಾರೆ' ಎಂದರು.

ಶಾಸಕಾಂಗ ಪಕ್ಷ ಸಭೆಗೆ ಜಿಟಿಡಿ ಅಗೌರವ ತೋರಿದ್ದಾರೆ: ಎಚ್ಡಿಕೆ
'ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಬಾರದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಶಾಸಕಾಂಗ ಪಕ್ಷದ ಸಭೆಯ ತೀರ್ಮಾನಕ್ಕೆ ಜಿ.ಟಿ.ದೇವೇಗೌಡ ಅಗೌರವ ತೋರಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದರು.

ಪರಿಷತ್ ಚುನಾವಣೆ ಮತದಾನ ವ್ಯರ್ಥ: ಎಚ್ಡಿಕೆ
'ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವುದು ವ್ಯರ್ಥ ಎಂದು ಕಾಂಗ್ರೆಸ್ ನಾಯಕರೂ ನಿರ್ಧಾರ ಮಾಡಿದ್ದಾರೆ.ಹಾಗಾಗಿ ನಾವೂ ಸಹ ಮತದಾನದಲ್ಲಿ ಪಾಲ್ಗೊಳ್ಳದೇ ಇರುವ ಬಗ್ಗೆ ತೀರ್ಮಾನಿಸಿದ್ದೇವೆ.ಅಧಿವೇಶನದಲ್ಲಿ ಅನುದಾನ ಹಂಚಿಕೆ ತಾರತಮ್ಯ ಹಾಗೂ ನೆರೆ ಪರಿಹಾರದ ವಿಚಾರದಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸುತ್ತೇವೆ' ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಪರ ಹೇಳಿಕೆಗಳನ್ನೇ ನೀಡುತ್ತಿರುವ ಜಿಟಿಡಿ
ಮೈತ್ರಿ ಸರ್ಕಾರ ಉರುಳಿದಾಗಿನಿಂದಲೂ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ನಾಯಕರಿಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆಪರೇಷನ್ ಕಮಲ ಸಮಯ ಅವರೂ ಬಿಜೆಪಿ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಹೋಗಲಿಲ್ಲ. ಆದರೆ ಅವರು ಜೆಡಿಎಸ್ನಲ್ಲಿದ್ದರೂ ಬಹುತೇಕ ಬಿಜೆಪಿ ಪರ ಹೇಳಿಕೆಗಳನ್ನೇ ನೀಡುತ್ತಿದ್ದಾರೆ.












Click it and Unblock the Notifications