ಹೊಸಕೋಟೆ; ಪಂಚಾಯಿತಿ ಸಭೆಗೆ ಕರೆಯಲಿಲ್ಲ ಎಂದು ಲಾಂಗ್ನಿಂದ ಹಲ್ಲೆ!
ಬೆಂಗಳೂರು, ಫೆಬ್ರವರಿ 11: ಗ್ರಾಮ ಪಂಚಾಯಿತಿ ಸಭೆಗೆ ಕರೆಯಲಿಲ್ಲ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಆತನ ಬೆಂಬಲಿಗರು ಲಾಂಗ್ ನಿಂದ ವಾಟರ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಬೈಲನರಸಾಪುರ ಗ್ರಾಮ ಪಂಚಾಯತಿ ಸಭೆ ನಡೆಯುವ ಸಂದರ್ಭದಲ್ಲಿ ಲಾಂಗ್, ಮಚ್ಚುಗಳನ್ನು ಝಳಪಿಸಲಾಗಿದೆ. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಸಭೆಗೆ ಕರೆಯಲಿಲ್ಲ ಎಂದು ರೊಚ್ಚಿಗೆದ್ದ ಕೆಲವರು ಲಾಂಗ್ ನಿಂದ ಹಲ್ಲೆ ಮಾಡಿದ್ದು, ದೂರು, ಪ್ರತಿ ದೂರು ದಾಖಲಾಗಿದೆ.
ಬೈಲನರಸಾಪುರ ಗ್ರಾಮ ಪಂಚಾಯತಿ ಸದಸ್ಯರುಗಳು ಯಾವಾಗ ಸಭೆ ಮಾಡಬೇಕು?, ಯಾವ ಕೆಲಸಗಳನ್ನು ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ನಮ್ಮನ್ನು ಕರೆಯದೆ ಮೀಟಿಂಗ್ ಮಾಡುತ್ತಿದ್ದೀರಾ? ಎಂದು ಗಲಾಟೆ ಮಾಡಿದ್ದಾರೆ.

ಈ ವೇಳೆ ಪಿಡಿಓ ಅವರು ಗಲಾಟೆ ಮಾಡುವವರನ್ನು ಹೊರಗೆ ಕಳುಹಿಸಿದ್ದಾರೆ. ಬಳಿಕ ನೀರಿನ ಬಾಟಲ್ ತರಲೆಂದು ವಾಟರ್ ಮ್ಯಾನ್ ಪಂಚಾಯತಿ ಕಚೇರಿಯಿಂದ ಹೊರಗೆ ಹೋದಾಗ ಕೆಲವರು ಲಾಂಗ್ ಹಿಡಿದುಕೊಂಡು ಬಂದಿದ್ದಾರೆ.
ವಾಟರ್ ಮ್ಯಾನ್ ಪಾಜೀಲ್ ಅಹ್ಮದ್ ಅವರ ತಲೆಗೆ ಲಾಂಗ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೈ ಅಡ್ಡಿ ಮಾಡಿದಾಗ ಪಾಜೀಲ್ ಕೈಗೆ ಗಾಯವಾಗಿದೆ. ಹಲ್ಲೆ ಮಾಡಿದ್ದನ್ನು ಪಾಜೀಲ್ ಅಣ್ಣ ಆಗಮಿಸಿ ಪ್ರಶ್ನಿಸಿದಾಗ ಆತನ ಮೇಲೂ ಹಲ್ಲೆ ಮಾಡಲಾಗಿದೆ. ನಂತರ ಇಬ್ಬರೂ ಪಂಚಾಯತಿ ಕಚೇರಿಗೆ ಹೋಗಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಹಲ್ಲೆ ನಡೆದ ಬಗ್ಗೆ ಪಾಜೀಲ್ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿ ದೂರು ದಾಖಲಾಗಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಾಂಗ್ ಹಿಡಿದು ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ನಂದಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications